ಬಿಜೆಪಿ-ಕಾಂಗ್ರೆಸ್ ಶಕ್ತಿ ಪ್ರದರ್ಶನ; ಜನರಿಗೆ ಸಂಕಟ

| Published : Apr 19 2024, 01:15 AM IST / Updated: Apr 19 2024, 09:58 AM IST

ಸಾರಾಂಶ

ಲೋಕಸಭಾ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಹಿನ್ನೆಲೆ ರ್‍ಯಾಲಿಯಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಹಿಡಿಶಾಪ ಹಾಕಿದರು. ನಾಮಪ್ರ ಸಲ್ಲಿಕೆಯ ಪ್ರಕ್ರಿಯೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಸಂಭ್ರಮವಾಗಿದ್ದರೆ ಜನರಿಗೆ ಸಂಕಟವಾಗಿತ್ತು.

 ರಾಯಚೂರು : ಇಲ್ಲಿನ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರಗಳ ಸಲ್ಲಿಕೆಯಲ್ಲಿ ತೋರಿದ ಶಕ್ತಿ ಪ್ರದರ್ಶನದ ಪರಿಣಾಮ ಜನಸಾಮಾನ್ಯರು ಹಲವಾರು ಸಮಸ್ಯೆಗಳನ್ನು ಗುರುವಾರ ಎದುರಿಸಿದರು.

ಕಾಂಗ್ರೆಸ್ಸಿಗರು ನಗರದಾದ್ಯಂತ ಮೆರವಣಿಗೆ ನಡೆಸಿದ್ದರಿಂದ, ಬಿಜೆಪಿಗರು ವಿಜಯ ಸಂಕಲ್ಪ ಸಮಾವೇಶ ಆಯೋಜಿಸಿದರ ಪರಿಣಾಮ ಬೆಳಗ್ಗೆಯಿಂದ ಸಂಜೆ ವರೆಗೂ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಬೇಸಿಗೆ ಬಿರುಬಿಸಿಲಿನ ಪರಿಣಾಮವಾಗಿ ಜನರು, ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಯಿತು. ಜಿಲ್ಲಾಧಿಕಾರಿ ಕಚೇರಿ ಸುತ್ತಲಿನ ಪ್ರದೇಶದಲ್ಲಿ ಜನ ದಟ್ಟಣೆ ಹೆಚ್ಚಾಗಿದ್ದರಿಂದ ಗುರುವಾರ ನಡೆದ ನಾಮಪ್ರ ಸಲ್ಲಿಕೆಯ ಪ್ರಕ್ರಿಯೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಸಂಭ್ರಮವಾಗಿದ್ದರೆ ಜನರಿಗೆ ಸಂಕಟವಾಗಿತ್ತು.

ಕಿರಿಕಿರಿ ರ್‍ಯಾಲಿ: ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ನಡೆಸಿದ ರ್‍ಯಾಲಿ ಜನಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡಿತು. ಸ್ಥಳೀಯ ಕರ್ನಾಟಕ ಸಂಘದಿಂದ ಆರಂಭಗೊಂಡ ಮೆರವಣಿಗೆ ನಗರಸಭೆನಿಂದ ಟಿಪ್ಪು ಸುಲ್ತಾನ್ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು.

ರ್‍ಯಾಲಿ ಮಧ್ಯಾಹ್ನವರೆಗೂ ನಡೆದ ಪರಿಣಾಮ ಮುಖ್ಯರಸ್ತೆ, ವೃತ್ತ ಹಾಗೂ ಬಡಾವಣೆಗಳಲ್ಲಿ ಸಂಚಾರ ವ್ಯವಸ್ಥೆ ಏರುಪೇರಾಗಿತ್ತು. ನಗರದ ಬಸವೇಶ್ವರ ವೃತ್ತದಿಂದ ಎಸ್‌ಎನ್‌ಟಿ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ದ್ವಿಚಕ್ರವಾಹನ ಸವಾರರು ಓಣಿಗಳ ಮೂಲಕ ತೆರಳು ಪರಿಸ್ಥಿತಿ ಸೃಷ್ಟಿಯಾಗಿತ್ತು.

ಬಿಜೆಪಿಗರು ಅತ್ತನೂರು ಸಭಾಂಗಣದಲ್ಲಿ ವಿಜಯ ಸಂಕಲ್ಪ ಸಮಾವೇಶ ಹಮ್ಮಿಕೊಂಡಿದ್ದರಿಂದ ಡಿಸಿ ಕಚೇರಿ ಸುತ್ತಲಿನ ಪ್ರದೇಶದಲ್ಲಿ ಕಾರ್ಯಕರ್ತರು ಸೇರಿ ಜನರಿಗೆ ಬೇಸರ ಉಂಟು ಮಾಡಿದರು. ಸುಮಾರು 41 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದ ಕಾರಣಕ್ಕೆ ಕುಡಿಯುವ ನೀರು, ತಂಪು ಪಾನಿಯ ಸೇರಿ ಹೋಟೆಲ್‌ಗಳಲ್ಲಿ ಜನ ಸೇರಿ ವ್ಯಾಪಾರಸ್ಥರಿಗೆ ಸಮಸ್ಯೆ ಉಂಟು ಮಾಡಿದೆ.

ನಗರದ ವಿವಿಧ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳು ಹರಸಾಹಸಪಟ್ಟರು. ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳು ಊಟಕ್ಕೂ ಹೋಟೆಲ್‌ಗಳಿಗೆ ತೆರಳಿದರೂ ಅಲ್ಲಿಯೂ ಕಾರ್ಯಕರ್ತರ ಗುಂಪು ಹೆಚ್ಚಾಗಿ ಕಂಡು ಬಂದಿತು.

ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಗುರುವಾರವೇ ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚನೆಗಳನ್ನು ಜನಸಾಮಾನ್ಯರಿಗೆ ತಿಳಿಸದ ಕಾರಣಕ್ಕೆ ಜನಸಾಮಾನ್ಯರಿಗೆ ತೊಂದರೆಯಾಗಿತ್ತು.

ವಿವಾಹ ಸಮಾರಂಭಕ್ಕೆ ನುಗ್ಗಿದ ಕಾರ್ಯಕರ್ತರು: ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭವೊಂದು ನಡೆದಿತ್ತು. ರಾಜಕೀಯ ಪಕ್ಷ ಅಭ್ಯರ್ಥಿಗಳ ಕಾರ್ಯಕರ್ತರು ವಿವಾಹ ಸಮಾರಂಭಕ್ಕೆ ನುಗ್ಗಿ ಊಟ ಮಾಡಿದರು. ಇದರಿಂದಾಗಿ ಮದುವೆ ಮನೆಯವರು ಹಿಡಿಶಾಪ ಹಾಕಿದರು. ಅನ್ಯರ ಪ್ರವೇಶವನ್ನು ತಡೆಯುವುದಕ್ಕಾಗಿ ವರ ಅಥವಾ ವಧು ಇಬ್ಬರಲ್ಲಿ ಯಾರ ಕಡೆಯ ಸಂಬಂಧಿಗಳು ಕೇಳಿ ಒಳಗಡೆ ಬಿಡಲಾಗುತ್ತಿತ್ತು. ಇದು ಕುಟುಂಬಸ್ಥರಿಗೆ ತಲೆನೋವನ್ನುಂಟು ಮಾಡಿತು.

ಎಲ್ಲೆಡೆ ಬ್ಯಾರಿಕೇಡ್, ಬಿಗಿ ಭದ್ರತೆ: ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರೇಡ್ ಹಾಕಲಾಗಿತ್ತು. ಇದರಿಂದ ಜನಸಾಮಾನ್ಯರಿಗೆ ಯಾವುದೇ ರಸ್ತೆಗೂ ಹೋದರೂ ಬ್ಯಾರಿಕೇಡ್‌ಗಳೇ ಕಣ್ಣಿಗೆ ಬರುತ್ತಿದ್ದವು. ಬೃಹತ್‌ ಪ್ರಮಾಣದಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ನಡೆದಿದ್ದರಿಂದ ಎಲ್ಲೆಡೆ ಬಿಗಿಭದ್ರತೆಯನ್ನು ಒದಗಿಸಲಾಗಿತ್ತು.