ಅವಕಾಶ ಬಂದಿದ್ರಿಂದ ಸ್ಪರ್ಧೆ, ತಂದೆಯಿಂದ ಒತ್ತಡ ಇರಲಿಲ್ಲ : ಪ್ರಿಯಾಂಕ

| Published : Apr 19 2024, 01:03 AM IST / Updated: Apr 19 2024, 02:38 PM IST

Priyanka

ಸಾರಾಂಶ

 ಗೋಕಾಕದ ಜಾರಕಿಹೊಳಿ ಕುಟುಂಬದ ಕುಡಿ ಚುನಾವಣಾ ಕಣಕ್ಕಿಳಿದಿರುವುದೇ ಇದಕ್ಕೆ ಕಾರಣ. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

- ನಾನು ಸಣ್ಣ ವಯಸ್ಸಲ್ಲೇ ಹತ್ತಿರದಿಂದ ರಾಜಕಾರಣವನ್ನು ನೋಡಿದ್ದೇನೆ । 2028ರ ವೇಳೆಗೆ ನಮ್ಮ ತಂದೆ ಸಿಎಂ ಆಗಬಹುದು: ಪ್ರಿಯಾಂಕಾ ಜಾರಕಿಹೊಳಿ

ಶ್ರೀಶೈಲ ಮಠದ

 ಬೆಳಗಾವಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಚಿಕ್ಕೋಡಿ ಸಾಕಷ್ಟು ಗಮನ ಸೆಳೆದಿದೆ. ಗೋಕಾಕದ ಜಾರಕಿಹೊಳಿ ಕುಟುಂಬದ ಕುಡಿ ಚುನಾವಣಾ ಕಣಕ್ಕಿಳಿದಿರುವುದೇ ಇದಕ್ಕೆ ಕಾರಣ. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 27 ವರ್ಷ ವಯಸ್ಸಿನ ಪ್ರಿಯಾಂಕಾ ಎಂಬಿಎ ಪದವೀಧರೆ, ಲೋಕಸಭಾ ಚುನಾವಣೆ ಸ್ಪರ್ಧಿಗಳಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿ. ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಪ್ರಿಯಾಂಕಾ ಸ್ಪರ್ಧೆಯಿಂದಾಗಿ ಚಿಕ್ಕೋಡಿ ಕ್ಷೇತ್ರದಲ್ಲಿ ನಾನಾ ಲೆಕ್ಕಾಚಾರಗಳು ಶುರುವಾಗಿವೆ. ಈ ಕುರಿತು ಪ್ರಿಯಾಂಕಾ ಜಾರಕಿಹೊಳಿ ಅವರು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದು ಹೀಗೆ.

ಪ್ರಶ್ನೆ: ಈ ಚಿಕ್ಕ ವಯಸ್ಸಿನಲ್ಲಿ ರಾಜಕೀಯಕ್ಕೆ ಬರಬೇಕೆಂದು ನಿಮಗೆ ಅನಿಸಿದ್ದೇಕೆ?

ಉ: ನಮ್ಮದು ರಾಜಕೀಯ ಹಿನ್ನೆಲೆಯ ಕುಟುಂಬ. ಸಹಜವಾಗಿಯೇ ಚಿಕ್ಕ ವಯಸ್ಸಿನಲ್ಲೇ ನಾನು ತೀರಾ ಹತ್ತಿರದಿಂದ ರಾಜಕಾರಣವನ್ನು ನೋಡಿದ್ದೇನೆ. ಹಾಗಾಗಿ, ಈಗ ಬೇಗ ರಾಜಕಾರಣಕ್ಕೆ ಬರುವಂತಾಗಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ತುಂಬಾ ಖುಷಿ ಆಗುತ್ತಿದೆ.

ಪ್ರಶ್ನೆ: ರಾಜಕೀಯ ನಿಮ್ಮ ಬಯಕೆಯೇ ಅಥವಾ ನಿಮ್ಮ ತಂದೆ ರಾಜಕೀಯಕ್ಕೆ ಬರುವಂತೆ ಒತ್ತಡ ಹಾಕಿದರೆ?

ಉ: ಖಂಡಿತವಾಗಿಯೂ ಇಲ್ಲ. ನನ್ನ ಮೇಲೆ ನಮ್ಮ ತಂದೆಯವರು ಯಾವುದೇ ಒತ್ತಡ ಹೇರಿಲ್ಲ. ಅವಕಾಶ ಇತ್ತು. ಹಾಗಾಗಿ ರಾಜಕೀಯಕ್ಕೆ ಬರುವಂತಾಯಿತು.ಪ್ರಶ್ನೆ: ಕ್ಷೇತ್ರದಲ್ಲಿ ಹಿರಿಯರ ಬದಲಾಗಿ ಹೈಕಮಾಂಡ್‌ನವರು ನಿಮಗೇ ಏಕೆ ಟಿಕೆಟ್‌ ನೀಡಿದ್ದು? ಹೇಗೆ?

ಉ- ನಮ್ಮ ತಂದೆ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು. ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಷದ ವರಿಷ್ಠರು ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅಲ್ಲದೆ, ಎಲ್ಲ ಸಮುದಾಯದ ಜೊತೆಗೂ ನಮ್ಮ ತಂದೆ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ನನಗೆ ಟಿಕೆಟ್‌ ಸಿಕ್ಕಿದೆ. ಲೋಕಸಭೆ ಚುನಾವಣೆಗೆ ಸಿಕ್ಕ ಈ ಅವಕಾಶವನ್ನು ಬಿಡಬಾರದು ಎಂಬ ಗಟ್ಟಿ ನಿರ್ಧಾರ ಮಾಡಿದೆ.

ಪ್ರಶ್ನೆ: ⁠ಚಿಕ್ಕೋಡಿ ಕ್ಷೇತ್ರವೇ ನಿಮ್ಮ ಆಯ್ಕೆಯಾಗಿತ್ತಾ?

ಉ- ಇಲ್ಲ, ತಂದೆಯವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ.ಪ್ರಶ್ನೆ: ⁠ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ನಿಮ್ಮ ಅನಿಸಿಕೆ ಏನು? ಇದು ದೇಶಕ್ಕೆ ಮಾರಕ ಅಂತ ಪ್ರತಿಪಕ್ಷದವರು ಹೇಳುತ್ತಾರೆ.

ಉ- ಕುಟುಂಬ ರಾಜಕೀಯ ಎಲ್ಲ ಪಕ್ಷಗಳಲ್ಲೂ ಇದ್ದೇ ಇದೆ. ಕೇವಲ ನಮ್ಮ ಪಕ್ಷದಲ್ಲಷ್ಟೇ ಅಲ್ಲ. ಕ್ಷೇತ್ರದ ಜನರ ಕೈಯಲ್ಲಿ ನಮ್ಮ ಭವಿಷ್ಯ ಇದೆ. ಅವರು ಆಶೀರ್ವಾದ ಮಾಡಿದರೆ ಅವರ ಸೇವೆ ಮಾಡುತ್ತೇವೆ.

ಪ್ರಶ್ನೆ: ⁠ಬೆಳಗಾವಿ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಿದ್ದರೂ ನೀವು ಚಿಕ್ಕೋಡಿಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?

ಉ- ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ನಮಗೆ ಹೊಸದಲ್ಲ. ತಂದೆಯ ಮಾರ್ಗದರ್ಶನದಂತೆಯೇ ಚಿಕ್ಕೋಡಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವೆ.ಪ್ರಶ್ನೆ: ನಿಮ್ಮ ತಂದೆ ಸೇರಿ ನಿಮ್ಮ ಕುಟುಂಬದ ಹಲವರು ರಾಜಕೀಯದಲ್ಲಿದ್ದಾರೆ. ಆದರೆ, ಅವರು ಬೇರೆ ಪಕ್ಷದಲ್ಲಿದ್ದಾರೆ. ಇದು ನಿಮ್ಮ ಗೆಲುವಿಗೆ ಅಡ್ಡಿಯಾಗುತ್ತೋ ಅಥವಾ ಅದೇ ಲಾಭ ಆಗುತ್ತೋ?

ಉ- ನಮ್ಮ ತಂದೆ ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರು. ಕುಟುಂಬದ ಸದಸ್ಯರು ಬೇರೆ ಪಕ್ಷದಲ್ಲಿದ್ದಾರೆ. ನಮ್ಮ ಪಕ್ಷದ ತತ್ವ, ಸಿದ್ಧಾಂತಗಳ ಮೇಲೆ ನಾವು ಪ್ರಚಾರ ಮಾಡಿ ನಾವು ಗೆಲುವಿಗೆ ಶ್ರಮಿಸುತ್ತೇವೆ. ಅವರು ಅವರ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಇದರಲ್ಲಿ ಲಾಭ, ನಷ್ಟದ ಪ್ರಶ್ನೆಯೇ ಬರುವುದಿಲ್ಲ.ಪ್ರಶ್ನೆ: ಇದು ನಿಮಗೆ ಮೊದಲ ಚುನಾವಣೆ. ನಿಮಗಿನ್ನೂ ರಾಜಕೀಯ ಅನುಭವದ ಕೊರತೆ ಇದೆ ಎಂದು ಪ್ರತಿಪಕ್ಷದವರು ಹೇಳುತ್ತಿದ್ದಾರೆ. ಅದಕ್ಕೇನಂತೀರಿ?

ಉ- ಹೌದು, ನನಗೆ ಇದು ಮೊದಲ ಚುನಾವಣೆ. ಆದರೆ ರಾಜಕಾರಣ ಹೊಸದಲ್ಲ, ಈ ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ನಾನು ತಂದೆಯ ಪರವಾಗಿ ಪ್ರಚಾರ ಕಾರ್ಯ ಮಾಡಿದ್ದೇವೆ. ರಾಜಕೀಯ ಪ್ರವೇಶಿಸಲು ಮೊದಲೇ ಮಾನಸಿಕವಾಗಿ ಸಿದ್ಧತೆ ಆಗಿತ್ತು.

ಪ್ರಶ್ನೆ: ಕ್ಷೇತ್ರದಲ್ಲಿ ಯಾವ ವಿಷಯಗಳ ಮೇಲೆ ಚುನಾವಣೆಯನ್ನು ಎದುರಿಸುತ್ತೀರಿ?

ಉ- ಪಂಚ ನ್ಯಾಯಗಳು ಮತ್ತು ತಂದೆಯವರು 40 ವರ್ಷಗಳಿಂದ ಮಾಡಿದ ಕೆಲಸಗಳ ಆಧಾರದ ಮೇಲೆ. ಇದರ ಜತೆಗೆ ಎಲ್ಲರೊಂದಿಗೆ ಒಡನಾಟ, ಸಂಪರ್ಕವಿದೆ. ನಾವೂ ಸಮಾಜ ಸೇವೆ ಮಾಡುತ್ತ ಬಂದಿದ್ದೇವೆ.

ಪ್ರಶ್ನೆ: ಚುನಾವಣೆ ಅಖಾಡದಲ್ಲಿ ಜನರಿಂದ ಯಾವ ರೀತಿಯ ಸ್ಪಂದನೆ ಸಿಗುತ್ತಿದೆ?

ಉ- ಪ್ರಚಾರದ ವೇಳೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ. ಕ್ಷೇತ್ರದ ಜನರೇ ಸ್ವತಃ ಬಂದು ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ.ಪ್ರಶ್ನೆ: ಕ್ಷೇತ್ರದ ಮತದಾರರಿಗೆ ಏನು ಸಂದೇಶ ಕೊಡಲು ಇಚ್ಛಿಸುತ್ತೀರಿ?

ಉ- ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಜನರ ಮನೆ ಮನೆಗೆ ತಲುಪಿವೆ. ತಂದೆ ಸತೀಶ್‌ ಜಾರಕಿಹೊಳಿ ಲೋಕೋಪಯೋಗಿ ಇಲಾಖೆ ಮೂಲಕ ಮಾಡುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅದರ ಆಧಾರದ ಮೇಲೆ ನನ್ನನ್ನು ಆಶೀರ್ವದಿಸುವಂತೆ ಮನವಿ ಮಾಡುತ್ತೇನೆ.

ಪ್ರಶ್ನೆ: ಜನ ನಿಮಗೇ ಏಕೆ ಮತ ಹಾಕಬೇಕು?

ಉ- ಈ ಹಿಂದಿನ ಬಿಜೆಪಿ ಸಂಸದರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜನ ನನಗೆ ಮತ ಹಾಕಬೇಕು. ಇಡೀ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವುದು, ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವುದು. ಹಳ್ಳಿ ಹಳ್ಳಿಗಳಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ನನ್ನ ಗುರಿ.

ಪ್ರಶ್ನೆ: ಚಿಕ್ಕೋಡಿ ಬಿಜೆಪಿ ಭದ್ರಕೋಟೆ. ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ಏನು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುತ್ತಿದ್ದೀರಿ?

ಉ-ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದು, ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು, ಶಾಲಾ-ಕಾಲೇಜು ದಿನಗಳಲ್ಲಿಯೇ ಮಕ್ಕಳಿಗೆ ಕ್ರೀಡಾ ಸೌಲಭ್ಯ ನೀಡುವುದು, ಕ್ಷೇತ್ರದ ಜನರಿಗೆ ಮೂಲ ಸೌಕರ್ಯಗಳನ್ನು ನೀಡಿ ಹಂತ ಹಂತವಾಗಿ ಅವರ ಸಮಸ್ಯೆ ಬಗೆಹರಿಸುವುದು ಹಾಗೂ ಆರೋಗ್ಯ ಸೇವೆಗೆ ಒತ್ತು ನೀಡುವುದು, ಸರ್ಕಾರಿ ಶಾಲೆ ಕಟ್ಟಡಗಳನ್ನು ಉನ್ನತೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಪ್ರಶ್ನೆ: ⁠ರಾಜಕಾರಣಕ್ಕೆ ಬರಲು ಲೋಕಸಭೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?

ಉ- ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು 25 ವರ್ಷ ಆಗಬೇಕು. ಸರಿಯಾದ ಸಮಯಕ್ಕೆ ನನಗೆ ಅವಕಾಶ ಒದಗಿಬಂದಿದೆ.

ಪ್ರಶ್ನೆ: ⁠ನಿಮ್ಮ ಆಸಕ್ತಿ ಯಾವುದರಲ್ಲಿ ರಾಜ್ಯ ರಾಜಕಾರಣವೋ ರಾಷ್ಟ್ರ ರಾಜಕಾರಣವೋ?

ಉ- ರಾಜ್ಯ ರಾಜಕಾರಣಕ್ಕೆ ಬರಬೇಕೆಂದು ಮೊದಲು ಆಸಕ್ತಿ ಇತ್ತು ನಿಜ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ರಾಷ್ಟ್ರರಾಜಕಾರಣಕ್ಕೆ ಬರಬೇಕಾಯಿತು.

ಪ್ರಶ್ನೆ: ⁠ಯುವ ಸಮೂಹ ಮೋದಿ ಮೋಹಕ್ಕೆ ಸಿಲುಕಿದೆ ಎಂದು ಹೇಳುತ್ತಾರಲ್ಲ. ಯುವಕರಾದ ನಿಮಗೆ ಏನು ಅನಿಸುತ್ತೆ?

ಉ- ಎಲ್ಲ ಪಕ್ಷಗಳಲ್ಲಿಯೂ ಯುವಕರು ಇದ್ದೇ ಇರುತ್ತಾರೆ. ಇಡೀ ಯುವ ಸಮೂಹ ಒಬ್ಬರೇ ವ್ಯಕ್ತಿಯ ಮೋಹಕ್ಕೆ ಸಿಲುಕುವುದಿಲ್ಲ. ನಾನೂ ಯುವ ನಾಯಕಿ. ಹಾಗಾಗಿ, ಯುವಕರನ್ನು ಸೆಳೆಯಲು ನನ್ನದೇ ರೀತಿಯಲ್ಲಿ ಪ್ರಯತ್ನಿಸುತ್ತೇನೆ.ಪ್ರಶ್ನೆ:⁠ ನಿಮ್ಮ ತಂದೆಗೆ ರಾಜ್ಯದ ಸಿಎಂ ಆಗಬೇಕೆಂಬ ಮಹತ್ವಾಕಾಂಕ್ಷೆಯಿದೆ. ಅದು ನೆರವೇರುತ್ತೆ ಅನಿಸುತ್ತಾ?

ಉ- ಖಂಡಿತವಾಗಿಯೂ ನೆರವೇರುತ್ತದೆ. ಜನರಿಗೋಸ್ಕರವೇ ತಮ್ಮ ಜೀವನ ಮುಡಿಪಿಟ್ಟಿದ್ದಾರೆ. ರಾಜಕೀಯಕ್ಕಿಂತ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಶ್ನೆ: ಈ ಅವಧಿಯಲ್ಲೇ ನೆರವೇರಬಹುದೇ?

ಉ- ಇಲ್ಲ, 2028ರ ವೇಳೆಗೆ ನಮ್ಮ ತಂದೆ ಮುಖ್ಯಮಂತ್ರಿಯಾಗಬಹುದು.