ಸಾರಾಂಶ
ನಾಗಮಂಗಲ : ಆರೋಗ್ಯ ಸಮಸ್ಯೆಯಿಂದಾಗಿ ಲೋಕಸಭಾ ಚುನಾವಣೆಯಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕ 91 ವರ್ಷದ ಎಚ್.ಡಿ.ದೇವೇಗೌಡರೇ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಗಟ್ಟಿಯಾಗಿ ಭಾಷಣವಾಗ ನಾನೇಕೆ ರಾಜಕೀಯ ನಿವೃತ್ತಿ ಹೊಂದಲಿ ಎಂದರು.
ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕಾರಣದ ಹಿಂಬಾಗಿಲಲ್ಲಿ ಇರುತ್ತೇನೆ. ಕ್ಷೇತ್ರವನ್ನು ತಮ್ಮ ಪುತ್ರ ಚೇತನ್ಗೌಡಗೆ ಬಿಟ್ಟುಕೊಟ್ಟು ಇನ್ನು ಮುಂದೆ ನಾಗಮಂಗಲದ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಆದರೆ, ರಾಜಕೀಯದಿಂದ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ನನ್ನ ಆರೋಗ್ಯದ ಸಮಸ್ಯೆಯಿಂದ ತಮ್ಮ ಪುತ್ರ ಚೇತನ್ ಗೌಡ ಕ್ಷೇತ್ರದಲ್ಲಿ ರಾಜಕೀಯವನ್ನು ಮುಂದುವರಿಸಲಿ. ನಾನು ಚುನಾವಣಾ ರಾಜಕೀಯದಿಂದ ಸ್ವಲ್ಪ ದೂರ ಇರುತ್ತೇನೆ. ಚುನಾವಣೆ ಆರಂಭಕ್ಕೂ ಮುನ್ನವೇ ತಾಲೂಕಿನ ನಮ್ಮ ಪಕ್ಷದ ಐನೂರಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅವರ ಅಪ್ಪಣೆ ಪಡೆದಿದ್ದೆ. ಅದಕ್ಕಾಗಿಯೇ ಈ ಚುನಾವಣೆಯಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ ಎಂದು ಹೇಳಿದರು.
ಆರೋಗ್ಯ ಸಮಸ್ಯೆಯಿಂದ ನಾನು ಪ್ರಚಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಹೇಳಿದ್ದೆ. ಮತ ಎಣಿಕೆಗೆ ಇನ್ನೂ ಒಂದೂವರೆ ತಿಂಗಳಿದೆ. ಅಲ್ಲಿವರೆಗೂ ಕಾಯಬೇಕಿಲ್ಲ. ಮುಂಚಿತವಾಗಿಯೇ ಫಲಿತಾಂಶ ಗೊತ್ತಾಗುವ ಮುನ್ಸೂಚನೆ ಇದೆ. ಎನ್ಡಿಎ ಮೈತ್ರಿ ಅಭ್ಯರ್ಥಿಗೆ ಗೆಲುವಾಗಲೆಂದು ಆಶಿಸುತ್ತೇನೆ ಎಂದರು.
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮತಗಳೇ ಸಾಕು, ಬಿಜೆಪಿಯವರ ಮತಗಳು ಬೇಡವೆಂದು ತೀರ್ಮಾನಿಸಿದ್ದಾರೋ ಏನೋ ನನಗೆ ಗೊತ್ತಿಲ್ಲ. ಆದರೆ ತಾಲೂಕು ಸೇರಿ ಜಿಲ್ಲೆಯಲ್ಲಿ ನಡೆಸಿದ ಯಾವುದೇ ಸಭೆ, ಸಮಾರಂಭಗಳಿಗೆ ಬಿಜೆಪಿ ಪಕ್ಷದ ಮುಖಂಡರನ್ನು ಆಹ್ವಾನಿಸಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ ಸರಿಯಾದ ರೀತಿಯಲ್ಲಿ ಹೊಂದಾಣಿಕೆಯಾಗಿದೆಯೇ ಎನ್ನುವುದಕ್ಕಿಂತ ಜೆಡಿಎಸ್ನವರೇ ಬಿಜೆಪಿ ಪಕ್ಷದವರನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಎನ್ನಬಹುದು. ಮೈತ್ರಿ ಧರ್ಮ ಪಾಲನೆ ಮಾಡುವ ಉದ್ದೇಶದಿಂದ ನಮ್ಮ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಎನ್ಡಿಎ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಈ ಹಿಂದೆ ನಾನೂ ಕೂಡ ಮತಗಟ್ಟೆ ಸಮೀಕ್ಷೆಯನ್ನು ಒಪ್ಪುತ್ತಿರಲಿಲ್ಲ. ಆದರೆ ಕಳೆದ ಎರಡು ಚುನಾವಣೆಗಳಿಂದ ಮತಗಟ್ಟೆ ಸಮೀಕ್ಷೆ ನಿಜವಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್, ಹಿರಿಯ ವಕೀಲ ಟಿ.ಕೆ.ರಾಮೇಗೌಡ, ಮುಖಂಡರಾದ ಹೇಮರಾಜು, ತೊಳಲಿಕೃಷ್ಣಮೂರ್ತಿ, ಸಿದ್ದಲಿಂಗಸ್ವಾಮಿ, ಸುರೇಶ್ಉಪ್ಪಾರ್, ದರ್ಶನ್ ಸೇರಿ ಹಲವರು ಇದ್ದರು.