ಕ್ರೈಂ ಬ್ರಾಂಚ್‌ ಅಧಿಕಾರಿಗಳ ಹೆಸರಲ್ಲಿ ನಿವೃತ್ತ ಎಂಜಿನಿಯರ್‌ಗೆ 1.60 ಕೋಟಿ ರು. ವಂಚನೆ

| Published : May 11 2024, 12:02 AM IST / Updated: May 11 2024, 11:07 AM IST

ಕ್ರೈಂ ಬ್ರಾಂಚ್‌ ಅಧಿಕಾರಿಗಳ ಹೆಸರಲ್ಲಿ ನಿವೃತ್ತ ಎಂಜಿನಿಯರ್‌ಗೆ 1.60 ಕೋಟಿ ರು. ವಂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋಸ ಹೋಗಿರುವುದು ತಿಳಿಯುತ್ತಲೇ ನಿವೃತ್ತ ಎಂಜಿನಿಯರ್‌ ಆಗಿರುವ ಆ ವ್ಯಕ್ತಿ ಮಂಗಳೂರಿನ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

 ಮಂಗಳೂರು :  ಮುಂಬೈ ಕ್ರೈಂ ಬ್ರಾಂಚ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಮಂಗಳೂರಿನ ಹಿರಿಯ ವ್ಯಕ್ತಿಯೋರ್ವರನ್ನು ಬೆದರಿಸಿ ಆನ್‌ಲೈನ್‌ ಮೂಲಕ 1.60 ಕೋಟಿ ರು. ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತನ್ನ ಹೆಸರನ್ನು ರಾಜೇಶ್‌ ಕುಮಾರ್‌ ಅಂತ ಪರಿಚಯಿಸಿಕೊಂಡು ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ನೀವು ಮುಂಬೈನಿಂದ ಥಾಯ್ಲೆಂಡ್‌ ದೇಶಕ್ಕೆ ಒಂದು ಪಾರ್ಸೆಲ್‌ ಕಳಿಸಿದ್ದು, ಅದನ್ನು ಅಲ್ಲಿನ ಕಸ್ಟಮ್ಸ್‌ ನವರು ವಶಕ್ಕೆ ಪಡೆದಿದ್ದಾರೆ. ಸದ್ರಿ ಪಾರ್ಸೆಲ್‌ನಲ್ಲಿ ಅಪ್ಘಾನ್‌ ಮತ್ತು ಕೀನ್ಯಾ ದೇಶದ ಐದು ಪಾಸ್‌ ಪೋರ್ಟ್‌ಗಳು, ಮೂರು ಕ್ರೆಡಿಟ್‌ ಕಾರ್ಡ್‌, 140 ಗ್ರಾಮ್‌ ಎಂಡಿಎಂಎ ಡ್ರಗ್ಸ್‌ 4 ಕೇಜಿ ಬಟ್ಟೆ ಹಾಗೂ ಒಂದು ಲ್ಯಾಪ್‌ಟಾಪ್‌ ಇರುವುದಾಗಿ ಹೇಳಿದ್ದು ಈ ಬಗ್ಗೆ ಮುಂಬೈ ಕ್ರೈಮ್‌ ಬ್ರಾಂಚ್‌ ನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾನೆ.

ಬಳಿಕ ಮುಂಬೈ ಕ್ರೈಮ್‌ ಬ್ರಾಂಚ್‌ ಅಧಿಕಾರಿಯೆಂದು ಹೇಳಿ ಇನ್ನೊಬ್ಬ ವ್ಯಕ್ತಿ ಮಾತನಾಡಿದ್ದು, ಈ ಬಗ್ಗೆ ನಿಮಗೆ ಹೆಚ್ಚುವರಿ ಮಾಹಿತಿಯನ್ನು ಸಿಬಿಐ ಅಧಿಕಾರಿ ರುದ್ರ ರಾಥೋಡ್‌ ನೀಡುತ್ತಾರೆ, ಅವರನ್ನು ಇಮೇಲ್‌ ಮೂಲಕ ಸಂಪರ್ಕಿಸುವಂತೆ ಹೇಳಿದ್ದರು. ಅದೇ ದಿನ ರುದ್ರ ರಾಥೋಡ್‌ ಎಂದು ತನ್ನನ್ನು ಪರಿಚಯಿಸಿದ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಪ್ರಕರಣದಲ್ಲಿ ಹಲವಾರು ಮಕ್ಕಳನ್ನು ಕೊಲೆಗೈದ ತಂಡವೊಂದು ಶಾಮೀಲಾಗಿದೆ. ನೀವು ನಮಗೆ ಸಹಕಾರ ನೀಡದೇ ಇದ್ದಲ್ಲಿ ವಿದೇಶದಲ್ಲಿರುವ ಇಂಟರ್ಪೊಲ್‌ ಮೂಲಕ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸಬೇಕಾಗುತ್ತದೆ ಎಂದು ಭಯ ಹುಟ್ಟಿಸಿದ್ದಾನೆ.

ಹಡಗಿನಲ್ಲಿ ಎಂಜಿನಿಯರ್‌ ಆಗಿದ್ದು ನಿವೃತ್ತಿಯಾಗಿರುವ ಮಂಗಳೂರಿನ 72 ವರ್ಷದ ವ್ಯಕ್ತಿ ಸಿಬಿಐ ಅಧಿಕಾರಿಗಳ ಹೆಸರಲ್ಲಿ ಮಾಡಿದ್ದ ಮೋಸದ ಕರೆಯನ್ನು ತಿಳಿಯದೆ ಭಯಕ್ಕೀಡಾಗಿದ್ದರು. ಇವರಲ್ಲಿ ಭಯ ಹುಟ್ಟಿಸಿ, ಸ್ಕೈಪ್‌ ಆ್ಯಪ್‌ ಮೂಲಕ ಖಾತೆಯನ್ನು ತೆರೆಯುವಂತೆ ಒತ್ತಾಯಪಡಿಸಿ ವಿಡಿಯೋ ಕರೆಯಲ್ಲಿ ಹೆದರಿಸಿದ್ದರು. ಸ್ಕೈಪ್‌ ಆ್ಯಪ್‌ ನಲ್ಲಿ ಸಿಬಿಐನದ್ದೆಂದು ಹೇಳಿ ಹಲವಾರು ನೋಟೀಸ್‌ ಕಳುಹಿಸಿಕೊಟ್ಟಿದ್ದು, ನೀವು ಬಂಧನದಿಂದ ತಪ್ಪಿಸಿಕೊಳ್ಳಬೇಕಿದ್ದರೆ ಬಾಂಡ್‌ ರೂಪದಲ್ಲಿ ಹಣವನ್ನು ಪಾವತಿ ಮಾಡಲೇಬೇಕು ಎಂದು ಒತ್ತಾಯಿಸಿದ್ದ. ಪ್ರಕರಣ ಮುಗಿದ ಕೂಡಲೇ ಹಣವನ್ನು ಮರು ಪಾವತಿ ಮಾಡಲಾಗುವುದೆಂದು ಭರವಸೆಯನ್ನೂ ನೀಡಿದ್ದ.

ಮೋಸ ಹೋದ ಹಿರಿಯ ವ್ಯಕ್ತಿ ತನಗೆ ಮತ್ತು ಮಕ್ಕಳಿಗೇನೂ ಮಾಡಬೇಡಿ ಎಂದು ಹೇಳಿ ತನ್ನ ಐಸಿಐಸಿಐ ಬ್ಯಾಂಕ್‌ ಖಾತೆಯಿಂದ ಮೇ 2 ರಂದು ಒಂದು ಕೋಟಿ ಹತ್ತು ಲಕ್ಷ ರು. ಪಾವತಿ ಮಾಡಿದ್ದಾರೆ. ಆನಂತರ, ಮೇ 6 ರಂದು ಕ್ರೈಂ ಬ್ರಾಂಚ್‌ ಕಡೆಯಿಂದ ಫೋನ್‌ ಮಾಡಿದ್ದಕ್ಕಾಗಿ ಮತ್ತೆ 50 ಲಕ್ಷ ರು. ಮೊತ್ತವನ್ನು ಅವರು ಹೇಳಿದ ಖಾತೆಗೆ ಪಾವತಿ ಮಾಡಿದ್ದಾರೆ. ಮರುದಿನ ಕರೆ ಮಾಡಿದರೆ, ಅಪರಿಚಿತರ ಕಡೆಯಿಂದ ಯಾವುದೇ ಸ್ಪಂದನೆ ಸಿಗದಿದ್ದರಿಂದ ಸಂಶಯದಿಂದ ತಮ್ಮ ಮಗಳಿಗೆ ಈ ವಿಷಯ ತಿಳಿಸಿದ್ದಾರೆ. ಮೋಸ ಹೋಗಿರುವುದು ತಿಳಿಯುತ್ತಲೇ ನಿವೃತ್ತ ಎಂಜಿನಿಯರ್‌ ಆಗಿರುವ ಆ ವ್ಯಕ್ತಿ ಮಂಗಳೂರಿನ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.