ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸ್ವರ್ಣಾಲಯದ ಶುಭಾರಂಭ

| Published : May 11 2024, 12:03 AM IST

ಸಾರಾಂಶ

ಪರ್ಯಾಯ ಶ್ರೀಪಾದರು ಸಂಕಲ್ಪಿಸಿರುವ ಶ್ರೀ ಕೃಷ್ಣನಿಗೊಂದು ಸ್ವರ್ಣ ಪಾರ್ಥಸಾರಥಿ ರಥಕ್ಕೆ ದೇಣಿಗೆ ನೀಡಬಯಸುವ ಭಕ್ತರು ಈ ಅಕ್ಷಯ ತೃತೀಯದ ಪರ್ವ ಕಾಲವನ್ನು ಸ್ವರ್ಣದಾನ ಮಾಡುವ ಮೂಲಕ ಸದುಪಯೋಗ ಪಡೆದುಕೊಂಡು ಶ್ರೀಕೃಷ್ಣನ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪರ್ಯಾಯ ಶ್ರೀಪಾದರು ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀ ಕೃಷ್ಣನ ಸ್ವರ್ಣ ರಥಕ್ಕೆ ಬೇಕಾದ ಚಿನ್ನವನ್ನು ತಮ್ಮತಮ್ಮ ಶಕ್ತ್ಯನುಸಾರ ನೀಡಲು ಉತ್ಸುಕರಾದ ಭಕ್ತರಿಗಾಗಿ ಖರೀದಿಸಲು ಬೇಕಾದ ಚಿನ್ನದ ನಾಣ್ಯ ಸಂಗ್ರಹದ ಸ್ವರ್ಣಾಲಯವನ್ನು ಶ್ರೀ ಭಂಡಾರಿಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ ಗುರುವಾರ ದೀಪ ಬೆಳಗಿಸಿ ಲೋಕಾರ್ಪಣೆಗೊಳಿಸಿದರು.

ಶುಕ್ರವಾರ ಅಕ್ಷಯ ತೃತೀಯದ ಪರ್ವ ದಿನವಾದ ಪ್ರಯುಕ್ತ ಭಕ್ತರ ಕೋರಿಕೆಯಂತೆ ಅತಿ ಶೀಘ್ರದಲ್ಲಿ ಈ ಕೌಂಟರನ್ನು ತೆರೆಯಲಾಗಿದೆ.

ಪರ್ಯಾಯ ಶ್ರೀಪಾದರು ಸಂಕಲ್ಪಿಸಿರುವ ಶ್ರೀ ಕೃಷ್ಣನಿಗೊಂದು ಸ್ವರ್ಣ ಪಾರ್ಥಸಾರಥಿ ರಥಕ್ಕೆ ದೇಣಿಗೆ ನೀಡಬಯಸುವ ಭಕ್ತರು ಈ ಅಕ್ಷಯ ತೃತೀಯದ ಪರ್ವ ಕಾಲವನ್ನು ಸ್ವರ್ಣದಾನ ಮಾಡುವ ಮೂಲಕ ಸದುಪಯೋಗ ಪಡೆದುಕೊಂಡು ಶ್ರೀಕೃಷ್ಣನ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪರ್ಯಾಯ ಶ್ರೀಪಾದರು ಕರೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಯೋಗಾಯೋಗವೆಂಬಂತೆ ಆಗಮಿಸಿದ ಜಿ.ಎಸ್.ಟಿ. ಇಲಾಖೆಯ ಆಯುಕ್ತ ಡಾ. ಕುಮಾರ್ ನಾಯಕ್ ಮತ್ತು ಉಡುಪಿ ಜ್ಯೂವೆಲರ್ ಅಸೋಸಿಯೇಷನ್ ಅಧ್ಯಕ್ಷ ವಸಂತ್ ಅವರು ಉಪಸ್ಥಿತರಿದ್ದು ಪ್ರಥಮ ಸ್ವರ್ಣ ಖರೀದಿ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.

ಪೂಜ್ಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪಾದರು ಉಪಸ್ಥಿತರಿದ್ದು ಹರಸಿದರು.