ರಿಲ್ಯಾಕ್ಸ್‌ ಮೂಡ್‌ ಇಲ್ಲ: ಪಕ್ಷ, ಸಾಮಾಜಿಕ ಚಟುವಟಿಕೆಗಳಲ್ಲಿ ಪದ್ಮರಾಜ್ ಭಾಗಿ

| Published : Apr 28 2024, 01:17 AM IST

ರಿಲ್ಯಾಕ್ಸ್‌ ಮೂಡ್‌ ಇಲ್ಲ: ಪಕ್ಷ, ಸಾಮಾಜಿಕ ಚಟುವಟಿಕೆಗಳಲ್ಲಿ ಪದ್ಮರಾಜ್ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರ ಪಕ್ಷದ ನಾಯಕರು, ಕಾರ್ಯಕರ್ತರ ಭೇಟಿ, ಮದುವೆ, ನೇಮ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪದ್ಮರಾಜ್‌ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಅವರು ಮತದಾನದ ಮರುದಿನವೂ ರಿಲ್ಯಾಕ್ಸ್‌ ಮೂಡ್‌ಗೆ ಹೋಗಿಲ್ಲ. ದಿನವಿಡಿ ವಿವಿಧ ಸಾಮಾಜಿಕ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ನಿರತರಾಗಿದ್ದರು.ಶನಿವಾರ ಪಕ್ಷದ ನಾಯಕರು, ಕಾರ್ಯಕರ್ತರ ಭೇಟಿ, ಮದುವೆ, ನೇಮ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪದ್ಮರಾಜ್‌ ಪಾಲ್ಗೊಂಡರು.

ಶುಕ್ರವಾರ ಮತದಾನದ ದಿನವಾದ ಕಾರಣ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಕಾರ್ಯಕರ್ತರು, ಮುಖಂಡರನ್ನು ಭೇಟಿಯಾಗಿ ಮನೆಗೆ ಬರುವಾಗ ತಡರಾತ್ರಿಯಾಗಿತ್ತು. ಆದರೂ ಶನಿವಾರ ಬೆಳಗ್ಗೆ 9 ಗಂಟೆಗೆ ಎದ್ದಿದ್ದಾರೆ. ಅಷ್ಟು ವೇಳೆಗಾಗಲೇ ಮನೆಗೆ ಅನೇಕ ಹಿತೈಷಿಗಳ ಆಗಮನವಾಗಿತ್ತು. ನಿತ್ಯದಂತೆ ದೇವರ ಪೂಜೆ ಮುಗಿಸಿ, ಹಿತೈಷಿಗಳೊಂದಿಗೆ ಮಾತುಕತೆ ನಡೆಸಿ, ಮನೆಮಂದಿಯೊಂದಿಗೆ ಸಮಯ ಕಳೆದು ಮನೆಯಿಂದ ಹೊರ ಹೊರಟವರು ಮರಳಿ ಮನೆಗೆ ಬಂದದ್ದು ರಾತ್ರಿಯೇ.

ಮಧ್ಯಾಹ್ನ ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರನ್ನು ಭೇಟಿಯಾಗಿ ಮತದಾನೋತ್ತರ ಸಾಧ್ಯತೆಗಳ ಬಗ್ಗೆ ಗಂಭೀರ ಮಾತುಕತೆ ನಡೆಸಿದರು. 3 ಗಂಟೆಗೆ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು. ಅಲ್ಲಿಂದ ನೇರವಾಗಿ ಬಂಟ್ವಾಳಕ್ಕೆ ತೆರಳಿ ತನ್ನ ರಾಜಕೀಯ ಗುರು, ಹಿರಿಯ ಕಾಂಗ್ರೆಸಿಗ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ, ಹುಟ್ಟುಹಬ್ಬದ ಶುಭಾಶಯ ಕೋರಿ ಗುರುವಿನ ಜತೆ, ಮನೆಮಂದಿಯೊಂದಿಗೆ ಕೆಲ ಕಾಲ ಕಳೆದರು.ಅಲ್ಲಿಂದ ಮಾಣಿಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರು. ರಾತ್ರಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು. ದಾರಿ ಮಧ್ಯೆ ಅಲ್ಲಲ್ಲಿ ಪಕ್ಷದ ಮುಖಂಡರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹೀಗೆ ಮತದಾನದ ಮರುದಿನವೂ ಪದ್ಮರಾಜ್‌ ದಿನಚರಿ ಚಟುವಟಿಕೆಯಿಂದಲೇ ಕೂಡಿತ್ತು.