ಸಾರಾಂಶ
ಮುಧೋಳ : ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನೇ ಹಿಂದಿಕ್ಕಿವೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯ ಬಳಸಿಕೊಂಡು ಅಧ್ಯಯನ ಮಾಡಿದರೆ ಉತ್ತಮ ಅಂಕ ಪಡೆದು ಉತ್ತೀರ್ಣರಾಗಬಹುದು ಎಂಬುದಕ್ಕೆ ಅಂಕಿತಾ ಕೊಣ್ಣೂರ ಸಾಕ್ಷಿ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಶ್ಲಾಘನೆ ವ್ಯಕ್ತಪಡಿಸಿದರು.
ಗುರುವಾರ ತಾಲೂಕಿನ ವಜ್ಜರಮಟ್ಟಿ ಗ್ರಾಮಕ್ಕೆ ಭೇಟಿ ನೀಡಿಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ ಮನೆಗೆ ತೆರಳಿ ಸನ್ಮಾನಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂಕಿತಾ ಕೊಣ್ಣೂರ ಬಡ ಹಾಗೂ ಕೃಷಿಕ ಕುಟುಂಬದಲ್ಲಿ ಜನಿಸಿ ಸತತ ಪ್ರಯತ್ನದಿಂದ ಶಿಕ್ಷಕರ ಮಾರ್ಗದರ್ಶನ ಪಡೆದು ರಾಜ್ಯವೇ ಅವಳ ಕಡೆಗೆ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ. ಈ ಸಾಧನೆ ಮುಧೋಳ ತಾಲೂಕಿಗಷ್ಟೇ ಅಲ್ಲದೆ ಇಡೀ ರಾಜ್ಯದ ಸಾಧನೆಯಾಗಿದೆ. ಅವಳ ಸಾಧನೆಯ ಹೆಮ್ಮೆ ತಂದಿದೆ ಸಂತಸ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿನಿಯ ಉನ್ನತ ಅಧ್ಯಯನಕ್ಕೆ ಸಹಕಾರ, ಪ್ರೊತ್ಸಾಹ ಮತ್ತು ಬೆಂಬಲ ನೀಡುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದ, ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ನಾನು ಕ್ಷೇತ್ರದ ಶಾಸಕನಾಗಿ, ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮುಧೋಳ ತಾಲೂಕಿನಲ್ಲಿ ಒಟ್ಟು 9 ವಸತಿ ಶಾಲೆ, ಹಾಸ್ಟೆಲ್ಗಳನ್ನು ಸರ್ಕಾರಿ ಪದವಿ ಮತ್ತು ಪಪೂ ಹಾಗೂ ಮಹಿಳಾ ಕಾಲೇಜುಗಳಲ್ಲದೆ ತಾಂತ್ರಿಕ ಕಾಲೇಜು ತಂದಿದ್ದೇನೆ. ಒಟ್ಟು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.