ಸಾರಾಂಶ
ಶಿರಸಿ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಬಹುದೊಡ್ಡ ಬದಲಾವಣೆಯಾಗಿದ್ದು, ಪಂಚ ಗ್ಯಾರಂಟಿಯಿಂದ ೧.೧೦ ಲಕ್ಷ ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿದೆ. ಈ ಕಾರಣದಿಂದ ರಾಜ್ಯದ ಮತದಾರರು ಕಾಂಗ್ರೆಸ್ಸಿನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಮತ್ತು ಅನ್ನ ಭಾಗ್ಯ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಶಕ್ತಿ ಬಂದಿದೆ. ಪ್ರತಿ ಕುಟುಂಬಕ್ಕೆ ಶಕ್ತಿ, ಯುವ ನಿಧಿ, ಅನ್ನಭಾಗ್ಯ, ೫ ಸಾವಿರ ಆದಾಯ ಹೆಚ್ಚಿಸಿದೆ ಎಂದರು.
ಒಂದು ಹಂತದ ಮತದಾನ ರಾಜ್ಯದಲ್ಲಿ ಪೂರ್ಣಗೊಂಡಿದೆ. ಎಲ್ಲ ಕಡೆಗಳಲ್ಲಿಯೂ ಕಾಂಗ್ರೆಸ್ಸಿಗೆ ಗೆಲ್ಲುವ ಉತ್ತಮ ವಾತಾವರಣವಿದ್ದು, ಬದುಕು-ಭಾವನೆಗಳ ಮಧ್ಯೆ ಈ ಚುನಾವಣೆಯಿದ್ದು, ಕಾಂಗ್ರೆಸ್ ಬದುಕಿನ ಕ್ಷೇತ್ರಕ್ಕೆ ಒತ್ತು ನೀಡಿದರೆ, ಬಿಜೆಪಿಯವರು ಭಾವನೆಗೆ ಒತ್ತು ನೀಡಿ, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಭರಣ ಶ್ರೀಮಂತರಿಗೆ
ಭಾರತ ಮಾತೆಯ ಆಭರಣ ಎಂದು ನಾವೆಲ್ಲರೂ ಕರೆಯುವ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಕ್ರೀಡಾಂಗಣಗಳನ್ನು ಕಿತ್ತು ಅದಾನಿ, ಅಂಬಾನಿಯಂತಹ ಶ್ರೀಮಂತರಿಗೆ ನೀಡಿರುವ ನರೇಂದ್ರ ಮೋದಿ ಸರ್ಕಾರದ ನಡೆ ಖಂಡನೀಯ. ನರೇಂದ್ರ ಮೋದಿ ಪ್ರತಿ ಭಾಷಣದಲ್ಲಿಯೂ ಸುಳ್ಳು ಹಾಗೂ ದ್ಬೇಷ ಹುಟ್ಟಿಸುವುದನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಉತ್ತರ ಕನ್ನಡದಲ್ಲಿ ಕಾಂಗ್ರೆಸ್ಗೆ ಬಹುದೊಡ್ಡ ಬದಲಾವಣೆಯಾಗಿದ್ದು, ಅಂಜಲಿ ನಿಂಬಾಳ್ಕರ ಅವರಿಗೆ ಪ್ರಜ್ಞಾವಂತ ಮತದಾರರು ಬಲ ನೀಡಬೇಕು. ಅರಣ್ಯ ಸಾಗುವಳಿ ಹಕ್ಕನ್ನು ಅನುಷ್ಠಾನ ಮಾಡಲು ಬಿಜೆಪಿ ಅವಕಾಶ ನೀಡಿಲ್ಲ. ಅರಣ್ಯ ಭೂಮಿನ್ನು ಅರ್ಹ ಪ್ರಯೋಜನದಾರರಿಗೆ ನೀಡಿಸುವಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರ ನಾಯ್ಕ, ಎಸ್.ಕೆ. ಭಾಗ್ವತ್, ಜ್ಯೋತಿ ಪಾಟೀಲ ಇದ್ದರು.
ವಿಶೇಷ ಕೋರ್ಟ್ ಸ್ಥಾಪನೆ
ಕೊಲೆ ಪ್ರಕರಣಗಳು ಇತ್ಯರ್ಥವಾಗಿ ಅಪರಾಧಿಗಳಿಗೆ ಶೀಘ್ರ ಶಿಕ್ಷೆಯಾಗುವಂತೆ ಮಾಡಲು ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಇದರ ಕುರಿತು ಕಾನೂನು ತಜ್ಞರ ಸಲಹೆ-ಸೂಚನೆ ಪಡೆಯಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.