ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿಬಂಜಾರ ಸಮುದಾಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ನಿಂದ ಬಂಜಾರ ಸಮುದಾಯಕ್ಕೆ ಯಾವುದೇ ಅನುಕೂಲ ಆಗಿಲ್ಲ. ಈ ಸಮುದಾಯ ಎಸ್ಸಿ ಸೇರ್ಪಡೆಯಾಗಿದ್ದು ಮೈಸೂರು ಅರಸರ ಕಾಲದಲ್ಲಿಯೇ, ಅದರಲ್ಲಿ ಕಾಂಗ್ರೆಸ್ನವರ ಯಾವುದೇ ಕೊಡುಗೆ ಇಲ್ಲ ಎಂದು ಬಂಜಾರ ಸಮಾಜದ ಮುಖಂಡ ಭೀಮಸಿಂಗ್ ರಾಠೋಡ ಹಾಗೂ ಡಾ.ರಮೇಶ ರಾಠೋಡ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ. ಸೇವಾಲಾಲರ ಜನ್ಮಭೂಮಿಯನ್ನು ಅಭಿವೃದ್ಧಿಪಡಿಸಿದ್ದು ಬಿಜೆಪಿ ಸರ್ಕಾರ. ತಾಂಡಾಗಳಿಗೆ ಹಕ್ಕುಪತ್ರ ನೀಡಿದ್ದು ಬಿಜೆಪಿ ಸರ್ಕಾರ, ಬಂಜಾರ ಸಮಾಜಕ್ಕೆ ಕಾಂಗ್ರೆಸ್ನಿಂದ ಯಾವುದೇ ಲಾಭವಾಗಿಲ್ಲ ಎಂದಿದ್ದಾರೆ.ಬಂಜಾರ ಸಮಾಜದ ಕಾಶಿ ಎಂದೇ ಹೆಸರಾಗಿರುವ ಪೌರಾಗಡದ ಅಭಿವೃದ್ಧಿಗಾಗಿ ₹593 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಸ್ಥಳವನ್ನು 2 ನೇ ರಾಮಮಂದಿರ ಆಗಲಿದೆ ಎಂದ ಅವರು, ಒಳ ಮೀಸಲಾತಿಯನ್ನು ತಂದಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರ ಸಮುದಾಯವನ್ನು ಬಿಜೆಪಿಯವರು ಎಸ್ಸಿ ಮೀಸಲಾತಿಯಿಂದ ತೆಗೆಯುತ್ತಾರೆ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ ರಾಠೋಡ ಅವರು ತಾಂಡಾಗಳಲ್ಲಿ ಭಾಷಣ ಮಾಡಿದರು. ಈ ಮೂಲಕ ಮತ ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿನ 5 ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯವರು ಕಲಬುರಗಿಯಲ್ಲಿ ಬಂಜಾರ ಸಮಾಜಕ್ಕೆ ಟಿಕೆಟ್ ನೀಡಿದ್ದಾರೆ. ಆದರೆ ಕಾಂಗ್ರೆಸ್ನವರು ಎಲ್ಲಿಯೂ ನಮ್ಮ ಸಮಾಜಕ್ಕೆ ಟಿಕೆಟ್ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.ಬಂಜಾರ ಸಮಾಜ ಯಾವ ಮುಖಂಡನ ಸ್ವತ್ತು ಅಲ್ಲ. ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುವ ಮುಖಂಡರು ಬಂಜಾರ ಸಮಾಜದ ಮುಖಂಡರಲ್ಲ, ಅವರು ಕಾಂಗ್ರೆಸ್ ಪಕ್ಷದ ಮುಖಂಡರು, ಅವರ ಮಾತನ್ನು ಯಾರೂ ಕೇಳುವುದಿಲ್ಲ. ಈ ಬಾರಿ ಜಿಲ್ಲೆಯ 200ಕ್ಕೂ ಹೆಚ್ಚು ತಾಂಡಾಗಳಲ್ಲಿ ಬಿಜೆಪಿ ಪರವಾಗಿ ಮತ ಲಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಬಂಜಾರ ಸಮಾಜ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹೇಶ ನಾಯಕ ಮಾತನಾಡಿದರು. ಬಾಳು ರಾಠೋಡ, ನಾಮದೇವ ನಾಯಕ, ಗೋವಿಂದ ರಾಠೋಡ, ವಿಶ್ವನಾಥ, ರಾಜಕುಮಾರ ರಾಠೋಡ, ಪಿಂಟು ಜಾದವ, ಜಯರಾಮ ರಾಠೋಡ, ಯಶವಂತ ರಾಠೋಡ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.