ಅನುಶ್ರೀ ಹತ್ಯೆ, ಆರೋಪಿಗಳ ಬಂಧನಕ್ಕೆ ಆಗ್ರಹ

| Published : Apr 28 2024, 01:20 AM IST

ಸಾರಾಂಶ

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಳೆದವಾರ ಅನುಶ್ರೀ ಎಂಬ ಬಾಲಕಿಯನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸುವಂತೆ ಕಿನ್ನಾಳ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಳೆದವಾರ ಅನುಶ್ರೀ ಎಂಬ ಬಾಲಕಿಯನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸುವಂತೆ ಕಿನ್ನಾಳ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಕರಕುಶಲತೆಯಲ್ಲಿ ದೇಶದಲ್ಲೆ ಹೆಸರು ಮಾಡಿರುವ ಕಿನ್ನಾಳ ಗ್ರಾಮದಲ್ಲಿ ಪುಟ್ಟ ಬಾಲಕಿ ಹತ್ಯೆಯಾಗಿರುವುದು ಇಡಿ ಗ್ರಾಮಸ್ಥರ ನಿದ್ದೆಗೆಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗ್ರಾಮದಲ್ಲಿ ಇಂತಹ ಕೃತ್ಯ ನಡೆದಿರುವುದು ದುರಂತ. ಇದು ಗ್ರಾಮಸ್ಥರ ಮಾನಸಿಕ ನೆಮ್ಮದಿ ಹಾಳುಗೆಡವಿದೆ. ಇತ್ತೀಚೆಗೆ ಗ್ರಾಮದಲ್ಲಿ ಅಕ್ರಮ ಚಟುವಟಿಕೆ ಹೆಚ್ಚುತ್ತಿದೆ. ಇವುಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಮ್ಮ ಗ್ರಾಮದ ಘನತೆಗೆ ಪೆಟ್ಟು ಬೀಳಲಿದೆ.

ಏ. 19ರಂದು ಕಾಣೆಯಾದ ಬಾಲಕಿ ಅನುಶ್ರೀ ಮಡಿವಾಳರ ಶವವಾಗಿ ಪತ್ತೆಯಾಗಿದ್ದು, ನಮ್ಮ ಗ್ರಾಮಕ್ಕೆ ಇದೊಂದು ಕಪ್ಪುಚುಕ್ಕೆಯಾಗಿದೆ. ಆದಷ್ಟು ಬೇಗ ಈ ಕೃತ್ಯಕ್ಕೆ ಕಾರಣ ಆದವರನ್ನು ಪತ್ತೆಹಚ್ಚಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಕಿನ್ನಾಳ ಗ್ರಾಮದಲ್ಲಿ ಅಕ್ರಮ ಮರುಳು ಸಾಗಾಣಿಕೆ ಪ್ರಾರಂಭವಾದ ಬಳಿಕ ಗ್ರಾಮದಲ್ಲಿ ಡ್ರಗ್ಸ್ ಮಾಫಿಯಾ, ಗಾಂಜಾ ಸೇವನೆ ಮತ್ತು ಸಲಿಂಗ ಕಾಮಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ೧೬-೨೫ ವರ್ಷದ ಯುವಕರು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೂಡಲೆ ಅಂಥವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಿನ್ನಾಳ ಗ್ರಾಮಸ್ಥರಾದ ಬಾಷಾ ಹಿರೇಮನಿ, ಬಸವರಾಜ ಚಿಲವಾಡಗಿ, ಅನಿಲ್‌ ಬೋರಟ್ಟಿ, ಮಂಜು ಹುದ್ದಾರ, ಮಂಜುನಾಥ ಗೊಂಡಬಾಳ, ವೀರೇಶ ತಾವರಗೇರಿ, ಇತರರು ಇದ್ದರು.