ನೀತಿ ಸಂಹಿತೆ ಉಲ್ಲಂಘನೆಗೆ ಕ್ರಮ: ಪ್ರಕಾಶ

| Published : Apr 27 2024, 01:00 AM IST

ಸಾರಾಂಶ

ಸಹಾಯಕ ಚುನಾವಣಾ, ನೋಡಲ್ ಅಧಿಕಾರಿಗಳೊಂದಿಗೆ ಸಭೆ

ಕನ್ನಡಪ್ರಭ ವಾರ್ತೆ ಯಾದಗಿರಿಲೋಕಸಭಾ ಚುನಾವಣೆ ಹಾಗೂ ಶೋರಾಪುರ ವಿಧಾನಸಭಾ ಉಪ ಚುನಾವಣೆಗೆ ನಿಯೋಜಿಸಿದ ವಿವಿಧ ತಂಡಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಜೊತೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಯಚೂರು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಅಜಯ ಪ್ರಕಾಶ ಸೂಚಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಚುನಾವಣೆಗಾಗಿ ನೇಮಿಸಲಾದ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡದ ಹಾಗೆ ಕಾರ್ಯನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಚೆಕ್ ಪೋಸ್ಟ್ ಗಳಲ್ಲಿ ನಿಯಮಾವಳಿಗಳಂತೆ 10 ಲಕ್ಷ ರು. ಮೇಲ್ಪಟ್ಟು ಹಣ ಸಾಗಣೆ ಮಾಡುವ ಸಾರ್ವಜನಿಕರ ದಾಖಲಾತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಳಕ್ಕೆ ಗಮನ ನೀಡುವಂತೆ ತಿಳಿಸಿದರು.ಪಾರದರ್ಶಕ ಚುನಾವಣೆಗೆ ಅನುಕೂಲವಾಗುವಂತೆ ಎಲ್ಲಾ ಎಫ್ಎಸ್ ಟಿ, ಎಸ್ಎಸ್ ಟಿ, ವಿವಿಟಿ, ಎಂಸಿಸಿ, ಸಾಮಾಜಿಕ ಜಾಲ ತಾಣಗಳ ಮೇಲಿನ ನಿಗಾ ತಂಡಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ. ಸುಶೀಲಾ ಮತ್ತು ಜಿಪಂ ಸಿಇಒ ಗರಿಮಾ ಪನ್ವಾರ ಮಾತನಾಡಿ, ಚುನಾವಣೆಗಾಗಿ ಜಿಲ್ಲಾಡಳಿತದಿಂದ ಸಕಲ ತಯಾರಿ ಕೈಗೊಳ್ಳಲಾಗಿದ್ದು, ಎಂಸಿಸಿ ತಂಡಗಳು ಸಕ್ರಿಯವಾಗಿವೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಉಪಸ್ಥಿತರಿದ್ದರು.