ನೇಕಾರರ ಸಂಕಷ್ಟಕ್ಕೆ ಧಾವಿಸಲು ಆಗ್ರಹ

| Published : Apr 27 2024, 01:26 AM IST / Updated: Apr 27 2024, 09:06 AM IST

ಸಾರಾಂಶ

 ನೇಕಾರರು ಸಂಕಷ್ಟದಲ್ಲಿದ್ದಾರೆ. ಪಾರಂಪರಿಕ ವೃತ್ತಿಯಲ್ಲಿರುವ ಅವರತ್ತ ಸರ್ಕಾರ ಗಮನ ಹರಿಸಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ನೇಕಾರ ಮುಖಂಡ ಅಶೋಕ ಹೆಗಡೆ ಸರ್ಕಾರವನ್ನು ಒತ್ತಾಯಿಸಿದರು.

 ಗುಳೇದಗುಡ್ಡ :  ನೇಕಾರರು ಸಂಕಷ್ಟದಲ್ಲಿದ್ದಾರೆ. ಪಾರಂಪರಿಕ ವೃತ್ತಿಯಲ್ಲಿರುವ ಅವರತ್ತ ಸರ್ಕಾರ ಗಮನ ಹರಿಸಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ನೇಕಾರ ಮುಖಂಡ ಅಶೋಕ ಹೆಗಡೆ ಸರ್ಕಾರವನ್ನು ಒತ್ತಾಯಿಸಿದರು.

ಶುಕ್ರವಾರ ಸ್ಥಳೀಯ ಹ್ಯಾಂಡ್‌ ಲೂಮ್‌ ಮತ್ತು ಪಾವರ್‌ಲೂಮ್ ಬಡಕೂಲಿ ನೇಕಾರರ ಸಂಘದ ಅಶ್ರಯದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿ, ನೇಕಾರರು ಅನೇಕ ಸಮಸ್ಯೆಗಳಿಂದ ತತ್ತರಿಸಿದ್ದು. ಅವರ ಸಮಸ್ಯೆಯನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವಾಗಬೇಕಿದೆ ಎಂದರು.

ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ ಶೇಖಾ, ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಮಾಜಿ ಸದಸ್ಯ ಎಂ.ಎಂ. ಜಮಖಾನಿ ಮಾತನಾಡಿ, ಸರ್ಕಾರದಿಂದ ನೇಕಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ನೇಕಾರರ ಕಡೆಗೆ ಗಮನ ಹರಿಸಿ ಅವರ ಸಂಕಷ್ಟ ದೂರ ಮಾಡಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ನೇಕಾರ ಮುಖಂಡರಾದ ಶ್ರೀಕಾಂತ ಹುನಗುಂದ, ಮಾಗುಂಡಪ್ಪ ಹಾನಾಪೂರ, ರಾಘವೇಂದ್ರ ಚೌಡಾಪೂರ, ಶ್ರೀಕಾಂತ ಕಲ್ಯಾಣಿ, ಹನುಮಂತ ಪಲಮಾರಿ, ಮಂಜುನಾಥ ಹಣಗಿ, ಹಣಮಂತಪ್ಪ ಕಟಗೇರಿ, ಲೋಕೇಶ ಉಂಕಿ, ಶಿವಾನಂದ ಹಾದಿಮನಿ, ಅಶೋಕ ಚಾರಕಾನಿ, ರಾಘವೇಂದ್ರ ಅರಕಾಲಚಿಟ್ಟಿ, ಮಯೂರ ಮುರನಾಳ ಇತರರು ಮಾತನಾಡಿದರು. ಸಭೆಯಲ್ಲಿ ನೂರಾರು ನೇಕಾರ ಬಾಂಧವರು ಉಪಸ್ಥಿತರಿದ್ದು, ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು.ಸಭೆಯಲ್ಲಿ 10 ನಿರ್ಣಯ ತೆಗೆದುಕೊಂಡು, ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು.

ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಸಿಗಬೇಕು. ಪವರಲೂಮ್ ನೇಕಾರರ ಬಾಕಿ ಉಳಿದ ವಿದ್ಯುತ್ ಬಿಲ್ ಸರ್ಕಾರವೇ ಭರಿಸಬೇಕು. ನೇಕಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯಧನ ಒದಗಿಸಬೇಕು. ನೇಕಾರರು ಉದ್ಯೋಗಕ್ಕಾಗಿ ಪಟ್ಟಣಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ತುರ್ತು ಕ್ರಮ ಜರುಗಿಸಬೇಕು, ನೇಕಾರರ ದುಡಿಮೆಯ ಬಂಡವಾಳ ಹೆಚ್ಚಿಸಬೇಕು. ಆರೋಗ್ಯ ಯೋಜನೆಗಳನ್ನು ಸರಳೀಕರಿಸಬೇಕು ಹಾಗೂ ವಸತಿ ಯೋಜನೆಯಲ್ಲಿ ಪಕ್ಕಾಮನೆ ನಿರ್ಮಿಸಿಕೊಡಬೇಕು. ಎಸ್.ಸಿ, ಎಸ್.ಟಿ. ಜನರಿಗೆ ಇದ್ದ ನೇಕಾರಿಕೆಯ ಸಬ್ಸಿಡಿಯನ್ನು ಇನ್ನುಳಿದ ಜನಾಂಗದ ನೇಕಾರರಿಗೆ ವಿಸ್ತರಿಸಬೇಕು. ನೇಕಾರಿಕೆ ಸಮ್ಮಾನ ಯೋಜನೆಯ ₹ 5000 ರಿಂದ ₹ 24,000ಕ್ಕೆ ಹೆಚ್ಚಿಸಬೇಕು. ನೇಕಾರಿಕೆ ಘಟಕವು ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಆಗಿರಬೇಕೆಂದು ನಿಯಮ ತೆಗೆದು ಹಾಕಬೇಕು. ನೇಕಾರರ ಕಚ್ಚಾ ಮಾಲು ವಿತರಣೆಗೆ ಡಿಪೋ ಪ್ರಾರಂಭಿಸಬೇಕು. ಪ್ರತಿವರ್ಷ ಬಜಟ್ ನಲ್ಲಿ ರಾಜ್ಯ ನೇಕಾರರ ಕ್ಷೇಮಾಭಿವೃದ್ಧಿಗಾಗಿ ₹ 1500 ಕೋಟಿ ತೆಗೆದಿರಿಸಬೇಕು.