ಸಾರಾಂಶ
ಶಹಾಪುರ ಸಮೀಪದ ಭೀಮರಾಯನಗುಡಿ ಮಲೇರಿಯಾ ನಿಯಂತ್ರಣ ಘಟಕದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಚಳಿ, ಜ್ವರ, ನಡುಕ ಮಲೇರಿಯಾ ಲಕ್ಷಣಗಳಾಗಿದ್ದು, ಇವುಗಳು ಕಂಡುಬಂದರೆ ನಿರ್ಲಕ್ಷ್ಯಮಾಡದೆ ಮುಂಜಾಗ್ರತೆ ವಹಿಸಬೇಕೆಂದು ಮಲೇರಿಯಾ ನಿಯಂತ್ರಣ ಘಟಕ ಆರೋಗ್ಯಧಿಕಾರಿ ಡಾ. ರಾಜಕುಮಾರ ಹೇಳಿದರು.ಸಮೀಪದ ಭೀಮರಾಯನಗುಡಿಯ ಮಲೇರಿಯಾ ನಿಯಂತ್ರಣ ಘಟಕದಲ್ಲಿ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಮಲೇರಿಯಾ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷದಂತೆ ಈ ವರ್ಷವು ಸಹ ವಿಶ್ವ ಮಲೇರಿಯಾ ದಿನಾಚರಣೆಯನ್ನು "ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧ ಹೋರಾಟ ತೀವ್ರ "ಎಂಬ ಘೋಷಣೆಯೊಂದಿಗೆ ನಡೆಸಲಾಗುತ್ತಿದೆ ಎಂದರು.ಸೋಂಕಿತ ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಕಾಯಿಲೆ ಉಂಟಾಗುತ್ತಿದ್ದು, ಈ ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತಿದ್ದು, ಮನೆ ಸುತ್ತಲೂ ನೀರು ಸಂಗ್ರಹವಾಗದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಬೇಕು ಮತ್ತು ನೀರಿನ ಸಂಗ್ರಹವನ್ನು ಭದ್ರವಾಗಿ ಮುಚ್ಚಿಡುವುದು, ಸೊಳ್ಳೆ ಪರದೆ ಮತ್ತು ನಿರೋಧಕಗಳನ್ನು ಬಳಸುವುದು, ಸಮತೋಲಿತ ಆಹಾರ ಸೇವನೆ, ಮಳೆಯಲ್ಲಿ ನೆನೆಯದಂತೆ ಲಕ್ಷ್ಯವಹಿಸುವುದು ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಮೂಲಕ ಮಲೇರಿಯಾ ಕಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಡಾ. ಬಸವರಾಜ, ಡಾ. ದತ್ತಾತ್ರೇಯ, ಡಾ. ರಾಜಾಸಾಬ್, ಮಲ್ಲಯ್ಯಸ್ವಾಮಿ, ಚಂದ್ರಶೇಖರ, ಬಸಣಗೌಡ, ಅಬುಬಕರ್, ಜೂರೇದ್ ಸೇರಿದಂತೆ ಸಿಬ್ಬಂದಿಗಳು ಇದ್ದರು.