ಶಿಬರೂರು ಕೊಡಮಣಿತ್ತಾಯ ಕ್ಷೇತ್ರ ನಾಗಮಂಡಲ

| Published : Apr 28 2024, 01:18 AM IST

ಸಾರಾಂಶ

ಏ.30ರ ವರೆಗೆ ನಡೆಯಲಿರುವ ವಿಶೇಷ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ನೂತನ ಧ್ವಜಸ್ತಂಭದಲ್ಲಿ ಬೆಳಗ್ಗೆ ಧ್ವಜಾರೋಹಣ ನೆರವೇರಿತು.

ಮೂಲ್ಕಿ: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಶ್ರೀ ಉಳ್ಳಾಯ, ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ಬ್ರಹ್ಮ ಕುಂಭಾಭಿಶೇಕ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಕೃಷ್ಣ ಪ್ರಸಾದ್‌ ವೈದ್ಯ ಬಳಗದವರ ಸಹಯೋಗದಲ್ಲಿ ಅಷ್ಟಪವಿತ್ರ ನಾಗಮಂಡಲ ಜರುಗಿತು.

ಸಂಜೆ ಹಾಲಿಟ್ಟು ಸೇವೆಯಾದ ಬಳಿಕ ರಾತ್ರಿ ನಾಗಮಂಡಲ ಸೇವೆ, ಪ್ರಸಾದ ವಿತರಣೆ ನಡೆಯಿತು. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಬ್ರಹ್ಮಕುಂಭಾಭಿಷೇಕ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಜಾಲುಗುತ್ತು, ಶಿಬರೂರು ಗುತ್ತು ಉಮೇಶ್‌ ಎನ್‌. ಶೆಟ್ಟಿ, ಸಮಿತಿಯ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ಜಾತ್ರೆ ಧ್ವಜಾರೋಹಣ: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಏ.30ರ ವರೆಗೆ ನಡೆಯಲಿರುವ ವಿಶೇಷ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ನೂತನ ಧ್ವಜಸ್ತಂಭದಲ್ಲಿ ಬೆಳಗ್ಗೆ ಧ್ವಜಾರೋಹಣ ನೆರವೇರಿತು. ಬಳಿಕ ಉಳ್ಳಾಯ ದೈವದ ನೇಮೋತ್ಸವ, ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮ, ರಥೋತ್ಸವ ನೆರವೇರಿತು.

ಭಾನುವಾರ ಸಂಜೆ 6 ಗಂಟೆಗೆ ಕಾಂತೇರಿ ಧೂಮಾವತಿ ನೇಮೋತ್ಸವ, ರಾತ್ರಿ 10 ಗಂಟೆಗೆ ಸರಳ ಧೂಮಾವತಿ ನೇಮೋತ್ಸವ, 29ರಂದು ಸಂಜೆ 6ಕ್ಕೆ ಜಾರಂದಾಯ ದೈವದ ನೇಮೋತ್ಸವ, ರಾತ್ರಿ 10ಕ್ಕೆ ಕ್ಯೆಯ್ಯೂರು ಮರಳ ಧೂಮವತಿ ದೈವದ ನೇಮೋತ್ಸವ, 30ರಂದು ಸಂಜೆ 6ಕ್ಕೆ ಪಿಲಿ ಚಾಮುಂಡಿ ದೈವದ ನೇಮೋತ್ಸವ, ರಾತ್ರಿ 10ಕ್ಕೆ ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.