ನೆಹರೂ ಕ್ರೀಡಾಂಗಣ ಅಭಿವೃದ್ಧಿ ಅಗಾಧ: ರಾಘವೇಂದ್ರ

| Published : Apr 27 2024, 01:19 AM IST

ಸಾರಾಂಶ

ಶಿವಮೊಗ್ಗದ ಗಾಂಧಿ ಬಜಾರ್‌ ಬಡಾವಣೆಯಲ್ಲಿ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಮತ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ನೆಹರೂ ಕ್ರೀಡಾಂಗಣ ಸಾಕಷ್ಟು ಅಭಿವೃದ್ಧಿಯಾಗಿದೆ. ಆ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶುಕ್ರವಾರ ನಗರದ ನೆಹರೂ ಕ್ರೀಡಾಂಗಣ, ಅಲ್ಲಮಪ್ರಭು ಮೈದಾನ ಹಾಗೂ ಕುಂಬಾರಗುಂಡಿ ಸಿನಿಮಾ ರಸ್ತೆ, ಬಟ್ಟೆ ಮಾರುಕಟ್ಟೆಗೆ ತೆರಳಿ ಅಲ್ಲಿರುವವರನ್ನು ಸಂಪರ್ಕಿಸಿ ಮತಯಾಚಿಸಿ ಮಾತನಾಡಿದ ಅವರು, ಗೋಪಾಳ ಬಡಾವಣೆಯಲ್ಲಿ ಒಳಾಂಗಣ ಕ್ರೀಡಾಂಗಣ ಟೆನ್ನಿಸ್‍ಕೋರ್ಟ್, ಈಜುಕೊಳ ಮುಂತಾದವುದನ್ನು ನಿರ್ಮಿಸುವ ಮೂಲಕ ಆ ಭಾಗದ ಜನತೆಗೆ ಅನುಕೂಲ ಮಾಡಿಕೊಡಲಾಗಿದೆ. ವಾಜಪೇಯಿ ಬಡಾವಣೆಯಲ್ಲಿ ಹಾಕಿ ಸ್ಟೇಡಿಯಂ ಸೇರಿ ಕ್ರೀಡಾಚಟುವಟಿಕೆಗಳಿಗೆ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ನೆಹರೂ ಒಳಾಂಗಣ ಕ್ರೀಡಾಂಗಣ ಕೂಡ ಸಾಕಷ್ಟು ಅಭಿವೃದ್ಧಿ ಪಡಿಸಲಾಗಿಯಿತು. ಇದು ಈ ಹಿಂದೆ ಇದ್ದ ಬಿಜೆಪಿ ಸರ್ಕಾರಕ್ಕೆ ಕ್ರೀಡೆ ಬಗ್ಗೆ ಇರುವ ಆಸಕ್ತಿ ತೋರಿಸುತ್ತದೆ ಎಂದು ಹೇಳಿದರು.

ಕೇವಲ ಜಿಲ್ಲಾ ಕೇಂದ್ರಕ್ಕೆ ಮಾತ್ರ ನಮ್ಮ ಸರ್ಕಾರ ಕ್ರೀಡಾಂಗಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿಲ್ಲ, ಶಿಕಾರಿಪುರ, ಶಿರಾಳಕೊಪ್ಪ ಸೇರಿ ತಾಲೂಕು ಕೇಂದ್ರಗಳಲ್ಲಿಯೂ ಕೂಡ ಕ್ರೀಡಾಪಟುಗಳಿಗೆ ಉತ್ತೇಜನ ಕೊಡುವಂತಹ ಅಭಿವೃದ್ಧಿ ಯೋಜನೆ ರೂಪಿಸಿದೆ ಎಂದ ಅವರು, ನೆಹರೂ ಕ್ರೀಡಾಂಗಣ ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಬಾರಿ ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರ ಮುಂದಿಟ್ಟುಕೊಂಡು ನಡೆಯುತ್ತಿರುವ ಚುನಾವಣೆಯಾಗಿದೆ. ಪ್ರತಿಯೊಬ್ಬ ಕೂಲಿ ಕಾರ್ಮಿಕ, ಆಟೋಚಾಲಕ, ಪಾನಿಪೂರಿ ಅಂಗಡಿಯವರು ಹೀಗೆ ಎಲ್ಲಾ ಸಮುದಾಯದವರು ಈ ರಾಷ್ಟ್ರಕ್ಕೆ ಮೋದಿ ಬೇಕು ಎಂದು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗ ಲೋಕಸಬಾ ಕ್ಷೇತ್ರ ಮೋದಿಯವರಿಗೆ ದೊಡ್ಡ ಮಟ್ಟದ ಬೆಂಬಲ ಈ ಚುನಾವಣೆಯಲ್ಲಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್‍ರೆಡ್ಡಿ, ಎಸ್.ಎಸ್,ಜ್ಯೋತಿಪ್ರಕಾಶ್, ದಿವಾಕರ್‍ಶೆಟ್ಟಿ, ರಾಜೇಶ್ ಕಾಮತ್, ಬಾಳೆಕಾಯಿ ಮೋಹನ್, ಮಹೇಶ್‍ಮೂರ್ತಿ, ವಿನೋದ್ ಕುಮಾರ್, ದೀನ್ ದಯಾಳ್, ಮಾಲತೇಶ್, ಸೋಮೇಶ್, ಭಾನುಮತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಕುಂಬಾರಗುಂಡಿ, ಸಿನಿಮಾರಸ್ತೆ, ಬಟ್ಟೆ ಮಾರುಕಟ್ಟೆ, ನೆಹರೂ ಕ್ರೀಡಾಂಗಣ, ಅಲ್ಲಮಪ್ರಭು ಮೈದಾನ ಈ ಭಾಗದಲ್ಲಿ ಮತಯಾಚನೆಗೆ ತೆರಳಿದಾಗ ಅಲ್ಲಿ ನೆರೆದಿದ್ದವರು ರಾಘವೇಂದ್ರರನ್ನು ಆತ್ಮೀಯವಾಗಿ ಬರಮಾಡಿಕೊಂಡರಲ್ಲದೇ ಮತ್ತೊಮ್ಮೆ ರಾಘಣ್ಣ, ಮತ್ತೊಮ್ಮೆ ಮೋದಿ ಎಂಬ ಘೋಷಣೆ ಕೂಗಿದರು. ಅಲ್ಲದೇ ಸಂಸದರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.