ಸಾರಾಂಶ
ಮಹಿಳೆಯರಿಗೆ ಗ್ಯಾರಂಟಿ ಎನ್ನುವ ಹೆಸರಿನಲ್ಲಿ ಕಾಂಗ್ರೆಸ್ ಆಸೆ ತೋರಿಸುತ್ತಿದೆ. ಮಹಿಳೆಯರು ಜಾಗ್ರತರಾಗಬೇಕು ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ ದೇಸಾಯಿ ಎಚ್ಚರಿಸಿದ್ದಾರೆ.
ಕನಕಗಿರಿ: ಕಾಂಗ್ರೆಸ್ ಗ್ಯಾರಂಟಿಗಳು ರಾಜ್ಯವನ್ನು ದಿವಾಳಿ ಮಾಡುತ್ತಿದ್ದು, ಮಹಿಳೆಯರು ಜಾಗೃತರಾಗಿ ಮತ ಚಲಾಯಿಸಬೇಕು ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ ದೇಸಾಯಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರಿಗೆ ಗ್ಯಾರಂಟಿ ಎನ್ನುವ ಹೆಸರಿನಲ್ಲಿ ಕಾಂಗ್ರೆಸ್ ಆಸೆ ತೋರಿಸುತ್ತಿದೆ. ಮಹಿಳೆಯರು ಜಾಗ್ರತರಾಗಬೇಕು. ಮೋದಿ ಅವರಂತಹ ನಾಯಕರಿಂದ ಮಾತ್ರ ಭಾರತ ಅಭಿವೃದ್ಧಿಯೆಡೆಗೆ ಸಾಗುತ್ತದೆ. 10 ವರ್ಷದಲ್ಲಿ ದೇಶದಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ನೆರೆ-ಹೊರೆ ದೇಶಗಳಿಗೆ ಲಸಿಕೆ ನೀಡಿದ್ದಾರೆ. ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ರಕ್ಷಣೆ ಮಾಡಿರುವುದು, ರೈತರ, ಕಾರ್ಮಿಕರ ಹಾಗೂ ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಮೋದಿ ಸರ್ಕಾರ ಅನುಷ್ಠಾನಗೊಳಿಸಿದೆ. ದೇಶಕ್ಕಾಗಿ ಮತ್ತೊಮ್ಮೆ ಮೋದಿ ಅವರನ್ನು ಆಯ್ಕೆ ಮಾಡೋಣ ಎಂದರು.ಮನೆ-ಮನೆಗೆ ಭೇಟಿ: ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಉದ್ಯಮಿ ಮಹಾಬಳೇಶ ಮಹಾಂತಗೊಂಡ, ಹರೀಶ ಪೂಜಾರ, ಗ್ಯಾನಪ್ಪ ಗಾಣದಾಳ, ವಿನಯ ಚಿತ್ರಕಿ, ಮಹಾಂತೇಶ ಸಜ್ಜನ ಹಾಗೂ ಹಲವು ಮುಖಂಡರ ಮನೆಗಳಿಗೆ ಭೇಟಿ ನೀಡಿ, ಕಮಲದ ಚಿಹ್ನೆಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ ಪರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರತ್ನಕುಮಾರಿ, ಹುಲಿಗೆಮ್ಮ ನಾಯಕ, ದೇವಮ್ಮ ಹುಲಿಹೈದರ, ಉಮಾ ಕ್ಯಾವಟರ್, ಭ್ರಮರಾಂಬಾ, ಸರಸ್ವತಿ ಎಂ., ಸುಮಾ ಎಂ., ಅಕ್ಷತಾ ಎಂ. ಇದ್ದರು.