ಸಾರಾಂಶ
ನವಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಐದು ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಅದರಲ್ಲೂ ಮಹಿಳೆಯರು ಕಾಂಗ್ರೆಸ್ಸಿಗೆ ಮತ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ಕನಕಗಿರಿ ತಾಲೂಕಿನ ನವಲಿ ಗ್ರಾಮದ ಆದಾಪುರ ರಸ್ತೆಯ ಪಕ್ಕದ ಆವರಣದಲ್ಲಿ ನವಲಿ ಜಿಪಂ ವ್ಯಾಪ್ತಿಯಲ್ಲಿ ಬರುವ ಕರಡೋಣಾ, ಜೀರಾಳ, ಚಿಕ್ಕಡಂಕನಕಲ್, ನವಲಿ ಭಾಗದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಹೀಗಾಗಿ ಜನರ ವಿಶ್ವಾಸ ಗಳಿಸಿದ್ದೇವೆ ಎಂದರು.ಕಳೆದ ಚುನಾವಣೆಯಲ್ಲಿ ನಾವು ಕೊಟ್ಟ ಗ್ಯಾರಂಟಿಗಳನ್ನು ಕೇವಲ ಒಂಭತ್ತು ತಿಂಗಳಲ್ಲಿ ಜಾರಿಗೆ ತಂದಿದ್ದೇವೆ. ಹೀಗಾಗಿ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ನಮ್ಮ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವಿಗೆ ವರದಾನವಾಗಲಿದೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ಕ್ಷೇತ್ರದ ಸೇವೆಗೆ ಮತದಾರರು ಆಶೀರ್ವಾದ ಮಾಡಬೇಕು ಎಂದು ಕೋರಿದರು. ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು.ಕಾಂಗ್ರೆಸ್ ಮುಖಂಡರಾದ ಹನುಮೇಶ ನಾಯಕ, ಸಿದ್ಧಪ್ಪ ನಿರ್ಲೂಟಿ, ರಡ್ಡಿ ಶ್ರೀನಿವಾಸ, ಗಂಗಾಧರಸ್ವಾಮಿ, ರಾಮನಗೌಡ ಬುನ್ನಟ್ಟಿ, ನವಲಿ ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷ ನಾಗರಾಜ್ ತಳವಾರ, ಬಸವಂತಗೌಡ ಪಾಟೀಲ್, ಲಿಂಗರಾಜ ಹೂಗಾರ, ರೇಣುಕಪ್ಪ, ಮಲ್ಲಿಕಾರ್ಜುನ ಗೌಡ, ವಿರೂಪಣ್ಣ ಕಲ್ಲೂರು, ಗಂಗಾಧರಗೌಡ, ಶಿವರೆಡ್ಡಿ ಖ್ಯಾಡೇದ, ಸಿದ್ಧನಗೌಡ ಮಾಲಿಪಾಟೀಲ್, ಪ್ಯಾಟೇಪ್ಪ ನಾಯಕ, ಜಡಿಯಪ್ಪ ಭೋವಿ, ಯಂಕಪ್ಪ ನರಹರಿ ಉಪಸ್ಥಿತರಿದ್ದರು.