ರಾಮಮಂದಿರದಲ್ಲಿ ವಿಜೃಂಭಣೆಯ ಆಂಜನೇಯ ಉತ್ಸವ

| Published : Apr 28 2024, 01:21 AM IST

ರಾಮಮಂದಿರದಲ್ಲಿ ವಿಜೃಂಭಣೆಯ ಆಂಜನೇಯ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಶಂಕರಪುರ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನವಮಿ ಪಟ್ಟಾಭಿಷೇಕದ ಅಂಗವಾಗಿ ವಿಜೃಂಭಣೆಯಿಂದ ಆಂಜನೇಯ ಉತ್ಸವ ಮತ್ತು ಓಕುಳಿ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಶಂಕರಪುರ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನವಮಿ ಪಟ್ಟಾಭಿಷೇಕದ ಅಂಗವಾಗಿ ವಿಜೃಂಭಣೆಯಿಂದ ಆಂಜನೇಯ ಉತ್ಸವ ಮತ್ತು ಓಕಳಿ ಕಾರ್ಯಕ್ರಮ ಜರುಗಿತು. ಶ್ರೀ ರಾಮ ಮಂದಿರದ ಮುಂಭಾಗ ಹಾಗೂ ಶಂಕರಪುರ ಬಡಾವಣೆಯ ರಸ್ತೆಯಲ್ಲಿ ಮನೆ ಮನೆಯ ಮುಂಭಾಗ ಶುದ್ಧ ಬಣ್ಣದ ನೀರನ್ನು ಪರಸ್ಪರ ಎರಚುವ ಮೂಲಕ ಶ್ರೀ ಆಂಜನೇಯ ಓಕಳಿ ಕಾರ್ಯಕ್ರಮ ವೈಭವದಿಂದ ನಡೆಯಿತು. ಅರಿಶಿನ, ಕುಂಕುಮ, ಶ್ರೀಗಂಧ ಪನ್ನೀರು, ತುಳಸಿ, ದಾಸವಾಳ, ಬೇವಿನ ಎಲೆ, ಮಾವಿನ ಎಲೆ, ಪಾರಿಜಾತ ಎಲೆ, ಸೀಬೆ ಎಲೆ, ಮಲ್ಲಿಗೆ ಎಲೆ ಮುಂತಾದ ಪರಿಸರಯುಕ್ತ ಎಲೆಗಳ ರಸ ಹಾಗೂ ಶುದ್ಧ ಬಣ್ಣದ ಓಕಳಿ ನೀರನ್ನು ತಯಾರಿಸಿ ಪ್ರತಿ ಮನೆಗಳಲ್ಲೂ ವಯೋಮಾನ ಭೇದವಿಲ್ಲದೆ ಪರಸ್ಪರ ಎರಚಿ ಸಂಭ್ರಮದಿಂದ ಓಕಳಿಯ ಕಾರ್ಯಕ್ರಮ ನೋಡುಗರಿಗೆ ಹಾಗೂ ಭಾಗವಹಿಸಿದವರಿಗೆ ಪರಮಾನಂದವನ್ನು ಉಂಟುಮಾಡುತ್ತದೆ.

ಓಕಳಿ ಕಾರ್ಯಕ್ರಮದ ಕುರಿತು ಸಂಸ್ಕೃತಿ ಚಿಂತಕ ಸುರೇಶ ಎನ್ ಋಗ್ವೇದಿ ಮಾತನಾಡಿ, ಶಂಕರಪುರ ಶ್ರೀರಾಮ ಮಂದಿರದಲ್ಲಿ ಏಳು ದಶಕಗಳಿಂದಲೂ ನಿರಂತರವಾಗಿ ಶ್ರೀರಾಮನ ಉತ್ಸವ ನಡೆಯುತ್ತಿದ್ದು ೧೦ ದಿನಗಳ ಕಾಲ ನಡೆಯುವ ಶ್ರೀರಾಮ ಉತ್ಸವ ಅಂಗವಾಗಿ ಕೊನೆಯ ದಿನ ಆಂಜನೇಯ ಉತ್ಸವ ಪ್ರತಿ ಮನೆಮನೆಗಳಲ್ಲೂ ಆಂಜನೇಯನ ಮೆರವಣಿಗೆ ಹೋಗಿ ಪ್ರತಿ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ಕಾಣಿಕೆಗಳನ್ನು ಸ್ವೀಕರಿಸಿ ಶ್ರೀರಾಮ ಮಂದಿರಕ್ಕೆ ತೆರಳಿದ ನಂತರ ವಿಶೇಷವಾಗಿ ಓಕುಳಿ ಕಾರ್ಯಕ್ರಮ ನಡೆಯುತ್ತದೆ.

ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಯುವ ಪೀಳಿಗೆ ಪರಸ್ಪರ ಭಾವೈಕ್ಯತೆ ಏಕತೆ, ಪ್ರೀತಿ, ವಿಶ್ವಾಸ, ನಂಬಿಕೆ ಆಧ್ಯಾತ್ಮಿಕ ಭಾವನೆ ಹಾಗೂ ಭಗವಂತನಲ್ಲಿ ದೃಢವಾದ ವಿಶ್ವಾಸ ಹಾಗೂ ಬಡವ ಶ್ರೀಮಂತ ಎಂಬ ಭಾವವಿಲ್ಲದೆ ನಾನು ಎಂಬ ಅಹಂಕಾರವಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಪರಸ್ಪರ ಪಾಲ್ಗೊಳ್ಳುವ ಓಕಳಿಯ ಕಾರ್ಯಕ್ರಮ ನಿಜಕ್ಕೂ ಪರಿಶುದ್ಧವಾದ ಒಂದು ಸಂಪ್ರದಾಯವಾಗಿದೆ. ಶಂಕರಪುರ ಅಗ್ರಹಾರದ ಸುತ್ತ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದಲೂ ಹಾಗೂ ದೇಶ ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ವಿಶೇಷವಾಗಿ ಮಕ್ಕಳಿಗೆ ಹಾಗೂ ಯುವಕರಿಗೆ ವಿಶೇಷವಾದ ಆಧ್ಯಾತ್ಮಿಕ ಕಾರ್ಯಕ್ರಮವಾದ ಓಕಳಿ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ಶ್ರೀ ರಾಮ ಮಂದಿರದ ಪ್ರತಾಪ್, ಸತೀಶ್, ಕೇಶವಮೂರ್ತಿ, ರಾಜಗೋಪಾಲ್, ವತ್ಸಲ ರಾಜಗೋಪಾಲ್, ರಂಗನಾಥ್ ವಿಜಯಲಕ್ಷ್ಮಿ, ಸರಸ್ವತಿ, ರಾಧಾಕೃಷ್ಣ, ಸುದರ್ಶನ್, ಮುರುಗೇಶ್, ನವೀನ ಉಮೇಶ್, ರವಿ, ಶ್ರೇಯಸ್ ರಘುನಾಥ್, ಕಾರ್ತಿಕ್, ರಮೇಶ್, ಶರಣ್ಯ, ಶ್ರಾವ್ಯ ಋಗ್ವೇದಿ, ಸಾನಿಕ, ಸುಮನ್, ವರ್ಷಿಣಿ, ಶ್ರೇಯಸ್, ಮಾಲಾ, ವಾಣಿ ,ಪದ್ಮಿನಿ ಮೇಘನಾ, ಮಕ್ಕಳು ಹಾಗೂ ಯುವಕ ಮಿತ್ರರು ಇದ್ದರು.