ಕುಡಿವ ನೀರಿನ ಸಮಸ್ಯೆ: ಮತದಾನ ಬಹಿಷ್ಕಾರದ ಬೆದರಿಕೆ

| Published : Apr 25 2024, 01:01 AM IST

ಸಾರಾಂಶ

ಕರವೇ, ದಲಿತ ಮುಖಂಡರ ಸಭೆ ಕರೆದು ಸಮಸ್ಯೆಗೆ ಸ್ಪಂದಿಸಲು ಮುಖ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಮತದಾನ ಬಹಿಷ್ಕಾರ ಕರೆ ವಾಪಸ್‌ ಪಡೆಯಲು ತಹಸೀಲ್ದಾರ್‌ ಡಾ.ಮಲ್ಲಪ್ಪ ಯರಗೋಳ ಮನವಿ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಮುದಗಲ್

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜಟಿಲಗೊಳ್ಳುತ್ತಿರುವ ಸಮಸ್ಯೆಗೆ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸುವ ಕರೆ ಕೊಡುವುದಾಗಿ ಎಚ್ಚರಿಕೆ ನೀಡಿದ್ದು, ತಹಸೀಲ್ದಾರ್‌ ಹಾಗೂ ಕ್ಲೀನ್ ಸ್ವೀಪ್ ಆಡಳಿತ ಮಂಡಳಿಯ ಮುಖ್ಯಸ್ಥರು ಕರವೇ ಹಾಗೂ ದಲಿತ ಮುಖಂಡರ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಸ್ಪಂದಿಸಲು ಮುಖ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಮತದಾನ ಬಹಿಷ್ಕಾರ ಕರೆ ವಾಪಸ್‌ ಪಡೆಯಲು ತಹಸೀಲ್ದಾರ್‌ ಡಾ.ಮಲ್ಲಪ್ಪ ಯರಗೋಳ ಮನವಿ ಮಾಡಿಕೊಂಡರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಈ ಕುರಿತು ಕರೆದ ಸಭೆಯಲ್ಲಿ ಭಾಗವಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರ ಸಭೆ ಕರೆದು ಬೇಡಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಸಭೆಯುದ್ದಕ್ಕೂ ಪುರಸಭೆ ಮುಖ್ಯಾಧಿಕಾರಿಗಳ ಮತ್ತು ಅಧಿಕಾರಿಗಳ ಕಾರ್ಯ ವೈಖರಿಯಿಂದ ಪಟ್ಟಣದಲ್ಲಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಯಲ್ಲಿ ಅಧಿಕಾರಿಗಳೇ ಸಂಪೂರ್ಣ ವೈಫಲ್ಯ ತಾಳಿದ್ದಾರೆ ಎಂದು ದೂರಿದರು.

ತಹಸೀಲ್ದಾರರು ಪುರಸಭೆಯ ಮುಖ್ಯಾಧಿಕಾರಿ ಮತ್ತು ಕಿರಿಯ ಅಭಿಯಂತರರಿಗೆ ಖಡಕ್ ವಾರ್ನಿಂಗ್ ನೀಡುತ್ತ ಪಟ್ಟಣದಲ್ಲಿ ಎಲ್ಲಾ 23 ವಾರ್ಡ್‌ಗಳಲ್ಲಿಯ ಗುಮ್ಮಿಗಳ ಪರಿಸ್ಥಿತಿಯ ವರದಿ ಸಮೇತ ತಾತ್ಕಾಲಿಕ ವ್ಯವಸ್ಥೆಯ ಕುರಿತು ಸಮಗ್ರ ಮಾಹಿತಿಯನ್ನು ಎರಡು ದಿನಗಳಲ್ಲಿ ನೀಡಬೇಕು. ಶನಿವಾರ ನಡೆಯುವ ಸಭೆಯಲ್ಲಿ ವರದಿ ಸಲ್ಲಿಸಬೇಕು, ವಿಶೇಷವಾಗಿ ಸಹಾಯಕ ಆಯುಕ್ತರ ಗಮನಕ್ಕೆ ತಂಡು ಇದನ್ನೇ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದರು.

ಸಭೆಯಲ್ಲಿ ಪುರಸಭೆ ಅಧಿಕಾರಿ, ಸಿಬ್ಬಂದಿ, ಸಂಘಟನೆಯ ಕಾರ್ಯಕರ್ತರು ಇದ್ದರು.