ಸಾರಾಂಶ
ಹೊಸಕೋಟೆ: ಆಟವಾಡುತ್ತಿದ್ದ ಮಗುವನ್ನು ಎಳೆದೊಯ್ಯುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಗಜೇಂದ್ರ ಬಂಧಿತ ಆರೋಪಿ. ಕ್ಯಾಂಡಿ ಮಾರಲು ತಾವರೆಕೆರೆ ಗ್ರಾಮಕ್ಕೆ ಬಂದಿದ್ದ ಈತ, ತಾವರೆಕೆರೆಯ ಸರ್ಕಾರಿ ಶಾಲಾ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಮಗುವೊಂದನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ತಕ್ಷಣ ಸ್ಥಳದಲ್ಲಿದ್ದವರು ಮಗು ಕಿರಚುತ್ತಿರುವುದನ್ನು ಕಂಡು ವ್ಯಕ್ತಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಮಗು ನಡೆದ ಘಟನೆ ಬಗ್ಗೆ ಸ್ಥಳೀಯರಿಗೆ ತಿಳಿಸಿದೆ.
ಕೂಡಲೇ ಸ್ಥಳೀಯರು ಹಾಗೂ ಪೋಷಕರು 112ಗೆ ಕರೆ ಮಾಡಿ ನಂದಗುಡಿ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ. ಹಾಡಹಗಲೇ ಈ ರೀತಿಯ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಯಾರೇ ಅಪರಿಚಿತರು ಗ್ರಾಮಗಳಲ್ಲಿ ಬಂದರು ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು. ಮಕ್ಕಳ್ಳನ್ನು ಬೇಸಿಗೆ ಮುಗಿಯುವ ತನಕ ಹೊರಗಡೆ ಬಿಡಲು ಪೋಷಕರು ಭಯ ಪಡುವ ಸ್ಥಿತಿ ಉಂಟಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.