ಮತದಾನ ಮಾಡಿ ಕೊನೆಯುಸಿರೆಳೆದ ವೃದ್ಧೆ

| Published : Apr 28 2024, 01:18 AM IST

ಸಾರಾಂಶ

ಬನಹಟ್ಟಿ: ಮನೆಯಲ್ಲಿ ಮತದಾನ ಮಾಡಿದ ಬಳಿಕ ವೃದ್ಧೆಯೋರ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಶುಕ್ರವಾರ ನಡೆದಿದೆ.

ರಬಕವಿ-ಬನಹಟ್ಟಿ: ಮನೆಯಲ್ಲಿ ಮತದಾನ ಮಾಡಿದ ಬಳಿಕ ವೃದ್ಧೆಯೋರ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಶುಕ್ರವಾರ ನಡೆದಿದೆ.

ಕಾಶವ್ವ ಬಾಲಚಂದ್ರಪ್ಪ ಸಣಕಾಲ(೮೫) ಮೃತರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲಿಯೇ ಇದ್ದರು. ಲೋಕಸಭೆ ಚುನಾವಣೆಯಲ್ಲಿ ರಬಕವಿಯ ವಾರ್ಡ್ ನಂ.೨೪ರ ಕನ್ನಡ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ ೧೦೦ರಲ್ಲಿ ಮತದಾನ ಮಾಡಬೇಕಿತ್ತು. ಆರೋಗ್ಯ ಹದಗೆಟ್ಟಿದ್ದರಿಂದ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಿದ ಕಾರಣ ವಿಶೇಷ ಮತಗಟ್ಟೆ ತಂಡ ಸಣಕಾಲ ಅವರ ಮನೆಗೆ ತೆರಳಿ ಮತದಾನ ಮಾಡಿಸಿಕೊಂಡಿತ್ತು.

ಶುಕ್ರವಾರ ಸಂಜೆ ೪ ಗಂಟೆ ವೇಳೆಗೆ ಮತದಾನ ಮಾಡಿದ್ದು, ನಂತರ ಒಂದು ಗಂಟೆಯಲ್ಲಿ ವೃದ್ಧೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಸಮಾಜ ಸೇವಕ ಪ್ರಕಾಶ ಸಣಕಾಲ ಸೇರಿ ಬಂಧು-ಬಳಗ ಇದೆ. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ ೧೧ ಗಂಟೆಗೆ ರಬಕವಿಯ ಹಿಂದು ರುದ್ರಭೂಮಿಯಲ್ಲಿ ನಡೆಯಿತು.