ಸಾರಾಂಶ
ಚೆನ್ನೈ: ಕೆನಡಾದ ಟೊರೊಂಟೊ ನಗರದಲ್ಲಿ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತದ ಗ್ರ್ಯಾಂಡ್ಮಾಸ್ಟರ್ ಡಿ.ಗುಕೇಶ್ ಗುರುವಾರ ಮುಂಜಾನೆ 3 ಗಂಟೆಗೆ ತಮ್ಮ ಹುಟ್ಟೂರು ಚೆನ್ನೈಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಗುಕೇಶ್ ಕಲಿತ ಶಾಲೆಯ ನೂರಾರು ವಿದ್ಯಾರ್ಥಿಗಳು, ಗುಕೇಶ್ ತಾಯಿ, ಕುಟುಂಬಸ್ಥರು, ಅಭಿಮಾನಿಗಳು ಯುವ ಚೆಸ್ ತಾರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಶಾಲಾ ವಿದ್ಯಾರ್ಥಿಗಳು ಗುಕೇಶ್ರ ಮುಖವಾಡ ಧರಿಸಿದ್ದು ಪ್ರಮುಖ ಆಕರ್ಷಣೆ ಎನಿಸಿಕೊಂಡಿತು. ಇದೇ ವೇಳೆ ಗುಕೇಶ್ಗೆ ಶಾಲು ಹೊದಿಸಿ, ಬೃಹತ್ ಹೂ ಹಾರ ಹಾಕಿ, ಪೇಟ ಧರಿಸಿ ಸನ್ಮಾನಿಸಲಾಯಿತು.
ಸಾಧನೆಗೆ ಆನಂದ್ ಸ್ಫೂರ್ತಿ: ಡಿ.ಗುಕೇಶ್
ಚೆನ್ನೈಗೆ ಆಗಮಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗುಕೇಶ್, ‘ವಿಶ್ವನಾಥನ್ ಆನಂದ್ ಅವರು ನನಗೆ ದೊಡ್ಡ ಸ್ಫೂರ್ತಿ. ಆನಂದ್ರ ಬೆಂಬಲ, ಮಾರ್ಗದರ್ಶನ ಇಲ್ಲದಿದ್ದರ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು. ‘ವಿಶ್ವ ಚಾಂಪಿಯನ್ಶಿಪ್ ಪಂದ್ಯದ ಬಗ್ಗೆ ತುಂಬಾ ನಿರೀಕ್ಷೆಗಳಿವೆ. ನನಗೆ ನನ್ನ ಮೇಲೆ ಸಂಪೂರ್ಣ ನಂಬಿಕೆಯಿದೆ ಮತ್ತು ಅದೇ ತಂತ್ರಗಾರಿಕೆಯೊಂದಿಗೆ ಚಾಂಪಿಯನ್ಶಿಪ್ ಆಡುತ್ತೇನೆ. ಗೆಲ್ಲುವ ವಿಶ್ವಾಸವೂ ಇದೆ’ ಎಂದು ಹೇಳಿದರು.
17 ವರ್ಷದ ಗುಕೇಶ್ ಅವರು 2020ರಿಂದಲೂ ವಿಶ್ವನಾಥನ್ ಆನಂದ್ ಅವರ ಅಕಾಡೆಮಿಯಲ್ಲಿ ತರಬೇತಿ ನಡೆಸುತ್ತಿದ್ದಾರೆ. ಗುಕೇಶ್ಗೂ ಮುನ್ನ ಕ್ಯಾಂಡಿಡೇಟ್ಸ್ ಗೆದ್ದ ಏಕೈಕ ಭಾರತೀಯ ವಿಶ್ವನಾಥನ್ ಆನಂದ್. ಅವರು 2014ರಲ್ಲಿ ಈ ಸಾಧನೆ ಮಾಡಿದ್ದರು.