ನಾನು ಮತ ಹಾಕಿದವರು ಗೆದ್ದೇ ಗೆಲ್ಲುತ್ತಾರೆ: ರಕ್ಷಿತ್ ಶೆಟ್ಟಿ

| Published : Apr 27 2024, 01:15 AM IST

ನಾನು ಮತ ಹಾಕಿದವರು ಗೆದ್ದೇ ಗೆಲ್ಲುತ್ತಾರೆ: ರಕ್ಷಿತ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ಮುಗಿಸಿ ಹೊರಬಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಸುತ್ತುವರಿದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ರಕ್ಷಿತ್ ಎಲ್ಲ ಅಭಿಮಾನಿಗಳನ್ನು ಮಾತನಾಡಿಸಿ, ಎಲ್ಲರೊಂದಿಗೆ ಪೋಟೊಕ್ಕೆ ಫೋಸ್ ಕೊಟ್ಟರು.

ಕನ್ನಡಪ್ರಭ ವಾರ್ತೆ ಉಡುಪಿ

ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೆಂಗಳೂರಿನಿಂದ ಆಗಮಿಸಿ, ನಗರದ ಅಲೆವೂರಿನ ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರ ಜೊತೆ ತೆರಳಿ ಮತದಾನ ಮಾಡಿದರು.

ರಕ್ಷಿತ್ ಮನೆಯ ಮುಂಭಾಗದಲ್ಲೇ ಇರುವ ಈ ಶಾಲೆಗೆ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ, ಅಣ್ಣ ರಂಜಿತ್ ಶೆಟ್ಟಿ ಜೊತೆಯಾಗಿ ಆಗಮಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಕ್ಷಿತ್, ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು, ಅಂಥವರಿಗೆ ನನ್ನ ಮತ. ನಾನು ಮತ ಹಾಕಿದವರು ಶೇ.100 ಗೆಲ್ಲುತ್ತಾರೆ ಡೌಟೇ ಇಲ್ಲ, ನಾನು ಯಾರಿಗೆ ಮತ ಹಾಕಿದ್ದೇನೆ ಎಂದು ಮುಂದಿನ ವರ್ಷ ಹೇಳುತ್ತೇನೆ ಎಂದು ನಕ್ಕರು.

ನಾನು ಬೆಂಗಳೂರು ಸೇರಿ 18 ವರ್ಷ ಆಗಿದೆ, ಆದರೆ ಪ್ರತಿ ಬಾರಿ ವೋಟಿಗಾಗಿ ನಾನು ಉಡುಪಿಗೆ ಬರುತ್ತೇನೆ. ವೋಟು ನಮ್ಮ ಹಕ್ಕು ನಮ್ಮ ಜವಾಬ್ದಾರಿಯಾಗಿದೆ. ಮತ ಹಾಕದವರು ಯಾರನ್ನು ದೂರುವ ಹಕ್ಕು ಇಲ್ಲ. ಕಡ್ಡಾಯ ಮತದಾನ ಬಹಳ ಒಳ್ಳೆಯ ಯೋಚನೆಯಾಗಿದೆ. ಆದರೆ ಶೇ.100 ಮತದಾನ, ಕಡ್ಡಾಯ ಮತದಾನ ಜಾರಿಗೆ ತರಲು ಸ್ವಲ್ಪ ಕಷ್ಟ ಇದೆ. ಎಲ್ಲ ಜನರನ್ನು ಮತಗಟ್ಟೆಗೆ ತರುವುದು ಕಷ್ಟದ ಕೆಲಸ, ಮುಂದೆ ಐದು- ಹತ್ತು ವರ್ಷದಲ್ಲಿ ಅದನ್ನು ಜಾರಿಗೆ ತರಬಹುದು. ಅಂತರ್ಜಾಲದ ಮೂಲಕ ಮತ ಹಾಕುವ ವ್ಯವಸ್ಥೆ ಬಂದರೆ ಇದು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

ಮತದಾನ ಮುಗಿಸಿ ಹೊರಬಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಸುತ್ತುವರಿದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ರಕ್ಷಿತ್ ಎಲ್ಲ ಅಭಿಮಾನಿಗಳನ್ನು ಮಾತನಾಡಿಸಿ, ಎಲ್ಲರೊಂದಿಗೆ ಪೋಟೊಕ್ಕೆ ಫೋಸ್ ಕೊಟ್ಟರು.