ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ನೇಕಾರಿಕೆ ವೃತ್ತಿ ಅಭಿವೃದ್ಧಿ ಪಥದತ್ತ ಸಾಗಲು ಮಹತ್ತರ ಪಾತ್ರ ವಹಿಸಿರುವ ಬಿಜೆಪಿ ಗೆಲ್ಲಿಸಲು ನೇಕಾರ ಸಮಾಜದವರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನೇಕಾರ ಪ್ರಕೋಷ್ಠ ರಾಜ್ಯ ಸಂಚಾಲಕ ಬಿ.ಎಸ್.ಸೋಮಶೇಖರ ಮನವಿ ಮಾಡಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರಿಕೆ ಉದ್ಯೋಗವನ್ನು ಪುನಶ್ಚೇತನಗೊಳಿಸಲು ಬಿಜೆಪಿ ನಾಯಕರು ಕೈಮಗ್ಗ ದಿನಾಚರಣೆ ಘೋಷಣೆ ಮಾಡಿದ್ದಾರೆ. ಇದರಿಂದ ನಶಿಸಿ ಹೋಗುತ್ತಿದ್ದ ನೇಕಾರಿಕೆ ಉದ್ಯೋಗದಲ್ಲಿ ಚೇತರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಾಡಲು ನೇಕಾರರು ಮುಂದಾಗಬೇಕು ಎಂದು ಕೋರಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಆಡಳಿತದಲ್ಲಿ ನೇಕಾರರಿಗೆ ಅನುಕೂಲವಾಗಲಿ ಎಂದು ಸಾಲಮನ್ನಾ ಮತ್ತು ನೇಕಾರ ಸಮ್ಮಾನ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇದೇ ವೇಳೆಯಲ್ಲಿ ನೇಕಾರ ಅಭಿವೃದ್ಧಿ ನಿಗಮವೂ ಸ್ಥಾಪನೆಯಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಸಹಾಯ ಮಾಡಿರುವ ಬಿಜೆಪಿಗೆ ಬೆಂಬಲಿಸಬೇಕು ಎಂದು ವಿನಂತಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಆಡಳಿತ ನೀಡಿದ್ದಾರೆ. ಒಂದೇ ಕಾನೂನು ಅಡಿಯಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸುವ ಯೋಜನೆಗಳನ್ನು ನೇಕಾರರಿಗೆ ಪೂರಕವಾಗಿವೆ ಎಂದು ತಿಳಿಸಿದರು.ಈ ವೇಳೆ ನೇಕಾರ ಸಮಾಜದ ಪ್ರಮುಖರಾದ ಗಜಾನನ ಗುಂಜೇರಿ, ಶ್ರೀನಿವಾಸ ಕುರುಡಗಿ, ಶಂಕ್ರಣ್ಣ ಮುರುಡಿ, ನಾಮದೇವ ಸೂರಿ ಇತರರು ಇದ್ದರು.ಕೋಟ್...ಏ.30 ರಂದು ಬೆಳಗಾವಿ ಲೋಕಸಭೆಯ ಅಭ್ಯರ್ಥಿ ಜಗದೀಶ ಶೆಟ್ಟರ ನೇಕಾರ ಪೇಟೆಯಲ್ಲಿ ಸಂಜೆ 5ಕ್ಕೆ ಹಮ್ಮಿಕೊಂಡಿರುವ ನೇಕಾರರ ಸಮಾವೇಶದಲ್ಲಿ ಮತಯಾಚನೆ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ನೇಕಾರರು ಸಮಾವೇಶದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಬೇಕು.-ಬಿ.ಎಸ್.ಸೋಮಶೇಖರ, ಬಿಜೆಪಿ ನೇಕಾರ ಪ್ರಕೋಷ್ಠ ರಾಜ್ಯ ಸಂಚಾಲಕ.