ಸ್ಟ್ರಾಂಗ್‌ರೂಮ್‌ನಲ್ಲಿ ಭದ್ರಗೊಂಡ ಹಾವೇರಿ ಕ್ಷೇತ್ರದ ಮತಯಂತ್ರಗಳು

| Published : May 09 2024, 01:01 AM IST

ಸ್ಟ್ರಾಂಗ್‌ರೂಮ್‌ನಲ್ಲಿ ಭದ್ರಗೊಂಡ ಹಾವೇರಿ ಕ್ಷೇತ್ರದ ಮತಯಂತ್ರಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಮತ ಎಣಿಕೆ ಕೇಂದ್ರವಾದ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಬಿಗಿಭದ್ರತೆಯಲ್ಲಿ ಇರಿಸಲಾಗಿದೆ.

ಹಾವೇರಿ:ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ೧೮ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದಲ್ಲಿ ಶೇ. ೭೭.೬೦ರಷ್ಟು ಮತದಾನವಾಗಿದೆ. ಮತ ಎಣಿಕೆ ಕೇಂದ್ರವಾದ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಬಿಗಿಭದ್ರತೆಯಲ್ಲಿ ಇರಿಸಲಾಗಿದೆ.

ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಮ್ ಭದ್ರಗೊಳಿಸಿದ ಬಳಿಕ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ, ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ದಾಸ್ತಾನು ಮಾಡಲಾಗಿದೆ. ಕೊಠಡಿ ಸುತ್ತಲೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಕೊಠಡಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಹೊರ ಭಾಗದಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ದಿನದ ೨೪ ತಾಸು ಪಾಳಿ ಪ್ರಕಾರ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ ಹಾಗೂ ಕೇಂದ್ರ ಸಶಸ್ತ್ರಪಡೆ ಹಾಗೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.ಭದ್ರತೆಯಲ್ಲಿ ಮತಯಂತ್ರ: ಹಾವೇರಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಪ್ರತ್ಯೇಕ ಎಂಟು ಕೊಠಡಿಗಳಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಭದ್ರಕಾವಲಿನಲ್ಲಿ ಕಾಯ್ದಿರಿಸಲಾಗಿದೆ. ಅಂಚೆ ಮತಪತ್ರ, ಇಡಿಸಿ, ಎ.ವಿ.ಇ.ಎಸ್. ಮತಪತ್ರಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕಾಯ್ದಿರಿಸಿ ಸೀಲ್ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಜಿಲ್ಲೆಗೆ ನಿಯೋಜನೆಗೊಂಡ ಸಾಮಾನ್ಯ ವೀಕ್ಷಕರಾದ ಐಎಎಸ್ ಅಧಿಕಾರಿ ತಿತರ್‌ಮರೆ ಅವರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್‌ರೂಂ ಒಳಗೆ ಹಾಗೂ ಹೊರಗಿನ ಭದ್ರತಾ ಕ್ರಮ, ಪ್ರತಿ ಮತಯಂತ್ರಗಳ ವೀಕ್ಷಣೆ ನಡೆಸಿ ಭದ್ರತಾ ಕೊಠಡಿಗೆ ಸೀಲ್‌ಗಳನ್ನು ಮಾಡಲಾಯಿತು. ನಂತರ ಪ್ರತಿ ಕೊಠಡಿ ಬಾಗಿಲಿಗೆ ಪ್ಲೈವುಡ್‌ಗಳಿಂದ ಮುಚ್ಚಿ ಭದ್ರತೆಯನ್ನು ಕೈಗೊಳ್ಳಲಾಯಿತು.ಪ್ರತಿ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಕೆ, ಅಗ್ನಿನಿರೋಧಕ, ಜಲನಿರೋಧಕ, ಬೆಳಕಿನ ಕಿರಣಗಳು ಕೊಠಡಿಯೊಳಗೆ ನುಸುಳದಂತೆ ಎಲ್ಲ ಕಿಟಕಿ ಬಾಗಿಲುಗಳನ್ನು ಫ್ಲೈವುಡ್‌ಗಳಿಂದ ಭದ್ರಪಡಿಸಿ ಅತಿ ಸುರಕ್ಷತಾ ಕ್ರಮಗಳನ್ನು ಪಕ್ಷದ ಏಜೆಂಟರ ಸಮ್ಮುಖದಲ್ಲಿ ಖಚಿತಪಡಿಸಲಾಗಿದೆ. ಮುಖ್ಯ ದ್ವಾರದಲ್ಲಿ ಡಿಎಫ್‌ಎಂಡಿ ಅಳವಡಿಸಲಾಗಿದೆ. ಒಂದು ಅಗ್ನಿಶಾಮಕ ವಾಹನ ನಿಯೋಜಿಸಲಾಗಿದೆ. ಬೆಂಕಿ ಪ್ರತಿಬಂಧಕ ಅಳವಡಿಸಲಾಗಿದೆ. ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಹೆಸ್ಕಾಂ ಅಭಿಯಂತರರು ಸ್ಟ್ರಾಂಗ್‌ರೂಮ್ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ. ಮೇಲುಸ್ತುವಾರಿಗಾಗಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳನ್ನು ಪಾಳೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿಯೋಜಿಸಿದ್ದಾರೆ. ಗರಿಷ್ಠ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದ್ದಾರೆ.ಉಸ್ತುವಾರಿ ಅಧಿಕಾರಿಗಳು: ಸ್ಟ್ರಾಂಗ್ ರೂಂಗಳ ಉಸ್ತುವಾರಿಗಾಗಿ ಮೇ 7ರಿಂದ ಜೂ. ೪ರವರೆಗೆ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲು ಆರು ಜನ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಸಹಕಾರಿ ಸಂಘಗಳ ಉಪ ನಿಬಂಧಕ ಅಜಮತ್ ಉಲ್ಲಾಖಾನ (೯೯೮೦೬೪೮೨೭೭) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ (೯೭೪೦೦೩೪೬೧೨) ಅವರು ಬೆಳಗ್ಗೆ ೭ರಿಂದ ಮಧ್ಯಾಹ್ನ ೩ಗಂಟೆ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.ರಾಣಿಬೆನ್ನೂರು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ರೇವಣಸಿದ್ದನಗೌಡ (೮೨೭೭೯೩೧೮೦೨) ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆ ಉಪನಿರ್ದೇಶಕ ಅಸ್ಪಾಕ ಅಹಮದ ತಹಶೀಲ್ದಾರ (೭೮೯೨೫೭೮೫೨೩) ಅವರನ್ನು ಮಧ್ಯಾಹ್ನ ೩ರಿಂದ ರಾತ್ರಿ ೧೧ ಗಂಟೆ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ (೯೪೮೦೯೪೦೨೩೫) ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ (೯೪೪೮೯೯೯೩೪೩) ಅವರು ರಾತ್ರಿ ೧೧ ಗಂಟೆಯಿಂದ ಬೆಳಗ್ಗೆ ೭ ಗಂಟೆ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.ಪೊಲೀಸ್ ಭದ್ರತೆ: ಸ್ಟ್ರಾಂಗ್ ರೂಂಗಳ ಭದ್ರತೆಗೆ ಎಂಟು ಸ್ಟ್ರಾಂಗ್ ರೂಂ ಡೋರ್‌ಗಳಿಗೆ ಸಿಎಪಿಎಫ್ ಒಂದು (ಐಟಿಬಿಪಿ) ಫ್ಲಟುನ್, ಕಾಲೇಜಿನ ಮುಖ್ಯದ್ವಾರ ಒಂದು ಮತ್ತು ಎರಡು, ಔಟ್‌ಸೈಡ್ ಸ್ಟ್ರಾಂಗ್ ರೂಂ, ಹೊರವಲಯದ ಚೆಕ್ ಪೋಸ್ಟ್, ಕಾಲೇಜಿನ ಮುಂಭಾಗ, ಕಾಲೇಜಿನ ಎಡ, ಬಲ ಹಾಗೂ ಹಿಂಬದಿ ಮತ್ತು ಮುಖ್ಯ ಬದಿಗೆ ಬಿಗಿ ಪೊಲೀಸ್ ಪಹರೆ ಹಾಕಲಾಗಿದ್ದು, ಮತಯಂತ್ರಗಳ ಭದ್ರತೆಗೆ ಸಿಸಿ ಕ್ಯಾಮೆರಾಗಳ ಜತೆಗೆ ಪೊಲೀಸ್‌ರ ಹದ್ದಿನಕಣ್ಣು ಇರಿಸಲಾಗಿದೆ. ಓರ್ವ ಡಿಎಸ್‌ಪಿ, ಇಬ್ಬರು ಸಿಪಿಐ, ಆರು ಜನ ಪಿಎಸ್‌ಐ, ಎಂಟು ಜನ ಎಎಸ್‌ಐ, ಹೆಡ್ ಕಾನ್‌ಸ್ಟೇಬಲ್ ಹಾಗೂ ಪಿಸಿ ೩೬ ಜನ, ಎರಡು ಜಿಲ್ಲಾ ಶಸ್ತ್ರ ಮೀಸಲು ಪಡೆ, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಸ್ಟ್ರಾಂಗ್‌ರೂಂಗಳ ಭದ್ರತಾ ಪ್ರಕ್ರಿಯೆಯಲ್ಲಿ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿ.ಪಂ. ಮುಖ್ಯ ಕಾರ್ಯನಿರ್ವಹಾಣಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮನಗೌಡ, ಗದಗ ಜಿಪಂ ಸಿಇಒ ಭರತ್ ಎಸ್., ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರಗಳು, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.