ಗ್ಯಾರಂಟಿ, ಹಣ ಪ್ರಭಾವ ವರ್ಕೌಟ್‌ ಆಗಿಲ್ಲ: ಜಗದೀಶ ಶೆಟ್ಟರ

| Published : May 09 2024, 01:01 AM IST

ಗ್ಯಾರಂಟಿ, ಹಣ ಪ್ರಭಾವ ವರ್ಕೌಟ್‌ ಆಗಿಲ್ಲ: ಜಗದೀಶ ಶೆಟ್ಟರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಗ್ರಾಮೀಣ ಕ್ಷೇತ್ರ ಸೇರಿಸಿ 8 ವಿಧಾನಸಭೆ ಕ್ಷೇತ್ರಗಳಲ್ಲಿ ಲೀಡ್‌ ಬರುವ ವಿಶ್ವಾಸವಿದೆ ಎಂದು ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೋಕಸಭೆ ಚುನಾವಣೆ ಕೇಂದ್ರಕ್ಕೆ ಸಂಬಂಧಿಸಿದ್ದು, ಮೋದಿ ಮತ್ತೆ ಪ್ರಧಾನಿಯಾಗುವ ಹಿನ್ನೆಲೆಯಲ್ಲಿ ಈ ಗ್ಯಾರಂಟಿ, ಹಣದ ಪ್ರಭಾವ ವರ್ಕೌಟ್ ಆಗಿಲ್ಲ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಹಣದ ಪ್ರಭಾವ ಎಲ್ಲಿಯೂ ಆಗಿಲ್ಲ. ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಸಿಮೀತವಾಗಿವೆ. ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಆದರೆ, ಗೆಲುವಿನ ಅಂತರದ ಲೆಕ್ಕಾಚಾರ ಹಾಕಿಲ್ಲ. ನಾನು ಮಾರ್ಚ್ 27ಕ್ಕೆ ಬೆಳಗಾವಿ ಬಂದ ನಂತರ ನಿರಂತರವಾಗಿ ಪ್ರವಾಸ ಮಾಡಿ ಇಡೀ ಕ್ಷೇತ್ರ ಸುತ್ತಿದ್ದೇನೆ. ದಿನದಿಂದ ದಿನಕ್ಕೆ ಜನರ ಬೆಂಬಲ ಜಾಸ್ತಿ ಆಗುತ್ತ ಹೋಯಿತು. ಅದು ಕಡಿಮೆ ಆಗಲಿಲ್ಲ. ನಮ್ಮ ವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದರು.

ಮಂಗಳವಾರ ಬೆಳಗ್ಗೆ ಎಲ್ಲ ಕಡೆ ನಾನು ಸುತ್ತು ಹಾಕಿದಾಗ ನಮ್ಮ ಕಾರ್ಯಕರ್ತರಲ್ಲಿ ಒಂದು ಆತ್ಮವಿಶ್ವಾಸ ಮೂಡಿತ್ತು. ಜನ ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಕಾರಣದಿಂದ ಹಣ ಎಲ್ಲಿ ಹಂಚಿದ್ದಾರೋ ಅಲ್ಲಿ ಹಣದ ಪ್ರಭಾವ ಆಗಿಲ್ಲ. ನೂರಕ್ಕೆ ನೂರು ಬಿಜೆಪಿ ಗೆಲ್ಲುವ ವಾತಾವರಣ ಇಡೀ ಕ್ಷೇತ್ರದಲ್ಲಿ ನಿರ್ಮಾಣ ಆಗಿತ್ತು. ಗೋಕಾಕ, ಅರಬಾವಿ ಮುಗಿಸಿ ಮತದಾನ ಮುಗಿದ ಬಳಿಕ ಬೆಳಗಾವಿಗೆ ಬಂದಾಗ ಹಲವು ನಾಯಕರು ಭೇಟಿಯಾಗಿ ಮತ್ತೆ ಕೆಲವರು ನನಗೆ ಕರೆ ಮಾತನಾಡಿ ನಮಗೆ ಆಶ್ಚರ್ಯ ಆಗಿದೆ ಎಂದರು.

8 ಚುನಾವಣೆಗಳಲ್ಲಿ ಹಣ ಹಂಚಿಲ್ಲ:

ಹಣ ಹಂಚಿ ಚುನಾವಣೆ ಮಾಡುವುದಾದರೇ ರಾಜಕೀಯ ಎಂಬುವುದು ಒಂದು ವ್ಯವಹಾರ ಆಗುತ್ತದೆ. ದುಡ್ಡು ಹೂಡಿಕೆ ಮಾಡಿ ದುಡ್ಡು ತೆಗೆಯುವುದು ಆಗುತ್ತದೆ. ಅಲ್ಲದೇ ಜನರನ್ನು ಕೆಡಿಸಿದಂತೆ ಆಗುತ್ತದೆ. ಈ ರೀತಿ ನೀವು ಜನರಿಗೆ ಹಣ ಕೊಡುವ ಚಟ ಹಚ್ಚಿಸಿದರೇ ರಾಜಕಾರಣ ಒಂದು ವ್ಯವಹಾರ ಆಗುತ್ತದೆ. ಆದರೆ, ರಾಜಕಾರಣಕ್ಕೆ ನಾವೆಲ್ಲ ಬಂದಿರೋದು ಜನರ ಸೇವೆ ಮಾಡಲು. ಹಾಗಾಗಿ ಈ ರೀತಿ ದುಡ್ಡು ಹಂಚಿದರೇ ರಾಜಕಾರಣಕ್ಕೆ ಅರ್ಥವೇ ಉಳಿಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಕತ್ತನ್ನು ಹಿಸುಕಿದಂತಾಗುತ್ತದೆ. ನನ್ನ 8 ಚುನಾವಣೆಗಳಲ್ಲಿ ಮತದಾರರಿಗೆ ಯಾವತ್ತೂ ಹಣ ಹಂಚಿಲ್ಲ. ಕಾರ್ಯಕರ್ತರಿಗೆ ಚಹ, ತಿಂಡಿ ಸೇರಿ ಸಣ್ಣ ಪುಟ್ಟ ಖರ್ಚು ಮಾಡಿರಬಹುದು ಎಂದು ಸ್ಪಷ್ಟಪಡಿಸಿದರು.

ಚಾರಿತ್ರ್ಯ ಹರಣ ಮಾಡುವ ಕೆಲಸ ಸರಿಯಲ್ಲ:

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಸಾರ್ವಜನಿಕ ಬದುಕಿಗೆ ಬಂದಾಗ ಈ ರೀತಿ ವ್ಯವಸ್ಥೆಗೆ ಆಸ್ಪದ ಕೊಡಬಾರದು. ಆ ಘಟನೆ ಆದ ಮೇಲೆ ರಾಜ್ಯ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ. ಈಗ ಡಿ.ಕೆ.ಶಿವಕುಮಾರ ಹೆಸರು ಬಂದಿದೆ. ಹಿಂದೆಯೂ ಅನೇಕ ಬಾರಿ ಅವರ ಹೆಸರು ಕೇಳಿ ಬಂದಿದೆ. ಆದರೆ, ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದಾರೆ. ಇನ್ನು ದೇವರಾಜೇಗೌಡ ಹೇಳಿಕೆ ನೀಡಿದ ಮೇಲೆ ಡಿಕೆಶಿ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಸತ್ಯವಾಯಿತು. ಆದರೂ, ಅದನ್ನು ಅಲ್ಲಗಳೆಯಲು ಡಿ.ಕೆ.ಶಿವಕುಮಾರ ಮುಂದಾಗಿದ್ದಾರೆ ಎಂದು ದೂರಿದರು.

ಯಾರೂ ಕೂಡ ಒಬ್ಬರ ಚಾರಿತ್ರ್ಯ ಹರಣ ಮಾಡಲು ಹೋಗಬಾರದು. ರಾಜಕೀಯವಾಗಿ ಯಾರನ್ನೋ ಮುಗಿಸುವ ಕಾರಣದಿಂದ ಅವರ ದೋಷಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ಯಾವುದೇ ಪಕ್ಷದಲ್ಲೂ ಈ ರೀತಿ ಬ್ಲಾಕ್‌ಮೇಲ್ ಮಾಡುವುದಕ್ಕೆ ಆಸ್ಪದ ಕೊಡಬಾರದು. ಇನ್ನು ಪೆನ್‌ಡ್ರೈವ್ ಪ್ರಕರಣದಲ್ಲಿ ಯಾರಿಗೆ ಅನ್ಯಾಯ ಆಗಿದೆಂಬ ಬಗ್ಗೆ ನ್ಯಾಯಯುತವಾಗಿ ತನಿಖೆ ಆಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅವರು ವೈಯಕ್ತಿವಾಗಿ ಹೋರಾಟ ಮಾಡಲಿ‌. ಅದನ್ನು ಬಿಟ್ಟು ಈ ವಿಚಾರವನ್ನು ಸಾರ್ವಜನಿಕವಾಗಿ ರಾಜಕೀಯಗೊಳಿಸುವುದು, ಒಂದು ರೀತಿ ವೈಯಕ್ತಿಕವಾಗಿ ಚಾರಿತ್ರ್ಯ ಹರಣ ಮಾಡುವ ಕೆಲಸ ಸರಿಯಲ್ಲ ಎಂದು ತಿಳಿಸಿದರು.

----------------------------------------------------

ವಿರೋಧಿಗಳ ಹಣದ ಹಂಚಿಕೆ ನಮಗೆ ಸಮಸ್ಯೆ ಆಗಿತ್ತು. ಜನರು ಎಲ್ಲಿ ಬದಲಾಗುತ್ತಾರೋ ಎಂಬ ಅಳಕು ಇತ್ತು. ಆದರೆ, ಹಣಕ್ಕೆ ಜನ ಮರಳು ಆಗಲಿಲ್ಲ. ತತ್ವ, ಸಿದ್ಧಾಂತ, ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎನ್ನುವುದಕ್ಕೆ ಜನ ಬೆಂಬಲಿಸಿದರು. ಹಣಕ್ಕೆ ಬೆಂಬಲ ಕೊಡಲಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನೂ ಸೇರಿಸಿ 8 ವಿಧಾನಸಭೆ ಕ್ಷೇತ್ರಗಳಲ್ಲಿ ಲೀಡ್ ಆಗುತ್ತದೆ‌.

-ಜಗದೀಶ ಶೆಟ್ಟರ, ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ.