ಲೋಕಸಭೆಯಲ್ಲಿ ಇತಿಹಾಸ ಸೃಷ್ಟಿ

| Published : May 08 2024, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ಈ ಬಾರಿ ಬೆಳಗಾವಿ ಲೋಕಸಭೆಯಲ್ಲಿ ಇತಿಹಾಸ ಸೃಷ್ಟಿಯಾಗುತ್ತದೆ. ಅಲ್ಲದೇ ಚಿಕ್ಕೋಡಿಯಲ್ಲೂ ಇತಿಹಾಸ ನಿರ್ಮಾಣ ಆಗುತ್ತದೆ. ಮೊದಲ ದಿನ ಏನಿದೆಯೋ, ಫಲಿತಾಂಶದ ದಿನವೂ ಅದೇ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ಬಾರಿ ಬೆಳಗಾವಿ ಲೋಕಸಭೆಯಲ್ಲಿ ಇತಿಹಾಸ ಸೃಷ್ಟಿಯಾಗುತ್ತದೆ. ಅಲ್ಲದೇ ಚಿಕ್ಕೋಡಿಯಲ್ಲೂ ಇತಿಹಾಸ ನಿರ್ಮಾಣ ಆಗುತ್ತದೆ. ಮೊದಲ ದಿನ ಏನಿದೆಯೋ, ಫಲಿತಾಂಶದ ದಿನವೂ ಅದೇ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿನ ವಿಜಯನಗರದ ಸರ್ಕಾರಿ ಮರಾಠಿ ಪ್ರಾಥಮಿಕ ಪಾಠ ಶಾಲೆಯ ಬೂತ್ ನಂಬರ್ 61ರಲ್ಲಿ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್, ಸೊಸೆ ಡಾ.ಹಿತಾ, ಸಚಿವರ ತಾಯಿ ಗಿರಿಜಾ ಹಟ್ಟಿಹೊಳಿ, ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಅವರ ಪತ್ನಿ ಜತೆಗೂಡಿ ಆಗಮಿಸಿ ಮತದಾನ ಮಾಡಿ ಮಾತನಾಡಿದ ಅವರು, ಭಾರತ ದೇಶದ ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಲೋಕಸಭೆ ಸಾರ್ವತ್ರಿಕ ಚುನಾವಣೆ. ದೇವರು ಮತ್ತು ಅಜ್ಜನ ಆಶೀರ್ವಾದ ತೆಗೆದುಕೊಂಡು ಕುಟುಂಬ ಸಮೇತ ಮತದಾನ ಮಾಡಿದ್ದೇನೆ. ಪ್ರಚಾರದ ಮೊದಲ ದಿನವೇ ನಾನು ಹೇಳಿದ್ದೆ ಈ ಬಾರಿ ಕಾಂಗ್ರೆಸ್ ಗೆಲ್ಲುತ್ತದೆ ಎಂದಿದ್ದೆ ಎಂದರು.ಹಣ ಹಂಚಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ನಮಗೆಲ್ಲ ಅದು ಗೊತ್ತಿಲ್ಲ. ಜೂ.4ರಂದು ಜನರೇ ಅದಕ್ಕೆ ಉತ್ತರ ಕೊಡುತ್ತಾರೆ. ಅಲ್ಲಿಯವರೆಗೂ ಕಾಯಬೇಕು ಎಂದು ತಿರುಗೇಟು ಕೊಟ್ಟರು.ಸಹೋದರ ಚನ್ನರಾಜ, ಎಲ್ಲ ಕಾಂಗ್ರೆಸ್ ಮುಖಂಡರು ಮತ್ತು ನನ್ನ ಅಜ್ಜ, ಮತದಾರರು ಮತ್ತು ನಮ್ಮ ಶಾಸಕರು ನನ್ನ ಶಕ್ತಿ. ಮಾವ ಅಳಿಯ ಜೋಡಿ ಖಂಡಿತವಾಗಲೂ ಹಿಟ್ ಆಗುತ್ತದೆ. ಇಂದು ನನ್ನ ತವರು ಮನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡುತ್ತೇನೆ. ಮೋದಿ ಅಲೆ ಬಗ್ಗೆ ಹೇಳುವುದಿಲ್ಲ. ಆದರೆ, 2014ರ ಲಕ್ಷ್ಮೀ ಹೆಬ್ಬಾಳಕರಗೂ 2024ರ ಲಕ್ಷ್ಮೀ ಹೆಬ್ಬಾಳಕರಗೂ ಬಹಳಷ್ಟು ವ್ಯತ್ಯಾಸವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮಾತನಾಡಿ, ಕುಟುಂಬ ಸಮೇತರಾಗಿ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದ್ದೇವೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸುಳೇಬಾವಿ ಮಹಾಲಕ್ಷ್ಮೀ ದೇವಿ, ಉಚಗಾಂವ ಮಳಿಕರಣಿದೇವಿ ಆಶೀರ್ವಾದ ಪಡೆದ ಮತ ಹಾಕಿದ್ದೇವೆ. ಈ ಬಾರಿ ಬೆಳಗಾವಿ ಸ್ವಾಭಿಮಾನ‌ ಗೆಲ್ಲುತ್ತದೆ. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಒಳಗೊಂಡು ಎಲ್ಲ ಕಾಂಗ್ರೆಸ್ ಮುಖಂಡರು, ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಆದ್ದರಿಂದ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬ ಮತದಾನದ ದಿನ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಉತ್ತಮ ಜನ ಪ್ರತಿನಿಧಿ ಆಯ್ಕೆ ಮಾಡಬೇಕು ಎಂದು ಕೋರಿದರು.

----------------------------------ಕೋಟ್‌.....ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರ ಉತ್ತಮ ಅಲೆಯಿದೆ. ಕ್ಷೇತ್ರದಲ್ಲಿ ಜಯ ದಾಖಲಿಸುವ ಮೂಲಕ ಕಾಂಗ್ರೆಸ್ ಹೊಸ ಇತಿಹಾಸ ಸೃಷ್ಟಿಸಲಿದೆ. ನನ್ನ ಸಹೋದರ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಪಡೆಯೇ ನನ್ನ ದೊಡ್ಡ ಶಕ್ತಿ. ಅರಬಾವಿ, ಗೋಕಾಕ, ಬೆಳಗಾವಿ ಉತ್ತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುನ್ನಡೆಗಳಿಸಲಿದೆ. ಅಜ್ಜಯ್ಯನವರ (ನೊಣವಿನಕೆರೆಯ ಕಾಡಾಸಿದ್ದೇಶ್ವರದ ಸ್ವಾಮೀಜಿ) ಆಶೀರ್ವಾದವಿದೆ.-ಲಕ್ಷ್ಮೀ ಹೆಬ್ಬಾಳಕರ್, ಸಚಿವೆ.

--------------------------------------

ಇದು ನಮ್ಮ ಹಕ್ಕು. ದೇಶ ಕಟ್ಟಲು ಮತ್ತು ಒಳ್ಳೆಯ ಸರ್ಕಾರ ಬರಲು ಪ್ರತಿಯೊಬ್ಬರು ಮತ ಹಾಕಬೇಕು. ಬಹಳ ವಾತಾವರಣ ಕ್ಷೇತ್ರದಲ್ಲಿದ್ದು, ಈ ಬಾರಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಬೆಳಗಾವಿ ಲೋಕಸಭೆಯಲ್ಲಿ ಇತಿಹಾಸ ನಿರ್ಮಾಣ ಆಗುತ್ತದೆ.- ಮೃಣಾಲ್‌ ಹೆಬ್ಬಾಳಕರ, ಬೆಳಗಾವಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ.

----------------------

ಲಕ್ಷ್ಮೀ ಹೆಬ್ಬಾಳಕರವರ 25 ವರ್ಷಗಳ ರಾಜಕೀಯ ಸಂಘರ್ಷ, ಜನರ ಜತೆಗಿನ ಅವರ ಸಂಬಂಧ ಮತ್ತು ಸಂಪರ್ಕ, ಜಿಲ್ಲಾದಾದ್ಯಂತ ಅವರ ಅಭಿಮಾನಿ ಬಳಗ ಸೇರಿ ಎಲ್ಲ ವರ್ಕೌಟ್ ಆಗುತ್ತದೆ. ಗೋಕಾಕ, ಅರಬಾವಿ, ಬೆಳಗಾವಿ ದಕ್ಷಿಣದಲ್ಲಿ ಅಚ್ಚರಿ ಫಲಿತಾಂಶ ಆಗುತ್ತದೆ.-ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್‌ ಸದಸ್ಯ.

-----------------------------------------