ಸಾರಾಂಶ
ವಿಶ್ವ ಕಾರ್ಮಿಕರ ದಿನಾಚರಣೆ । ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜನೆ
ಕನ್ನಡಪ್ರಭ ವಾರ್ತೆ ಹಿರಿಯೂರು:
ಪ್ರತಿನಿತ್ಯ ನಗರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪೌರಕಾರ್ಮಿಕರ ಸೇವೆ ಅಪಾರವಾದುದ್ದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ತಿಮ್ಮಾಪುರ ಹೇಳಿದರು.ನಗರದಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅಭಿಯೋಜನಾ ಇಲಾಖೆ ನೇತೃತ್ವದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕಾರ್ಮಿಕರು ಕಾನೂನು ತಿಳಿದುಕೊಳ್ಳಬೇಕು. ನೀವು ಮಾಡುವ ಕೆಲಸದ ಬಗ್ಗೆ ನಿಮ್ಮ ನಿಮ್ಮ ಮನಸ್ಸುಗಳಿಗೆ ತೃಪ್ತಿಯಿದ್ದರೆ ಸಾಕು. ಪ್ರತಿಫಲ ದೇವರು ಕೊಡುತ್ತಾನೆ. ಸಮಾಜದಲ್ಲಿ ಕಾರ್ಮಿಕರಿಗೆ ಹೆಚ್ಚಿನ ಮಾನ್ಯತೆ, ಗೌರವ ಹಾಗೂ ಸೌಲಭ್ಯ ಸಿಗುವಂತಾಗಲಿ ಎಂದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಚಿತ್ರಲಿಂಗಪ್ಪ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ವಿಶ್ವದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಬದಲು ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಮಕ್ಕಳ ಕೈಯಲ್ಲಿ ಅಪಾಯಕಾರಿ ಕೆಲಸ ಮಾಡಿಸುವವರನ್ನು ಉಗ್ರವಾದ ಶಿಕ್ಷೆಗೆ ಒಳಪಡಿಸಿ ದಂಡ ವಿಧಿಸಲಾಗುತ್ತದೆ ಎಂದರು.
ಈ ವೇಳೆ ಕಾರ್ಮಿಕ ಇಲಾಖೆ ನಿರೀಕ್ಷಕ ಅಲ್ಲಾಭಕ್ಷ್, ನಗರ ಸಭೆಯ ರೆಹಮತ್ ಉನ್ನೀಸಾ, ವಕೀಲರ ಸಂಘದ ಉಪಾಧ್ಯಕ್ಷೆ ಭೀನಾರಾಣಿ, ಖಜಾಂಚಿ ಸೈಯದ್ ನವಾಜ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ದುರ್ಗಪ್ಪ ಹಾಗೂ ಹಲವಾರು ಪೌರಕಾರ್ಮಿಕರು ಹಾಜರಿದ್ದರು.