ಉಡುಪಿಯಲ್ಲಿ ಸಿ.ಎನ್.ಜಿ. ನೂತನ ಸ್ಥಾವರ ನಿರ್ಮಾಣ: ಅದಾನಿ ಸಂಸ್ಥೆ ಭರವಸೆ

| Published : May 09 2024, 01:00 AM IST

ಉಡುಪಿಯಲ್ಲಿ ಸಿ.ಎನ್.ಜಿ. ನೂತನ ಸ್ಥಾವರ ನಿರ್ಮಾಣ: ಅದಾನಿ ಸಂಸ್ಥೆ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎನ್‌ಜಿ ಕೊರತೆ ನಿವಾರಿಸಲು ಹಿರಿಯಡ್ಕ, ಹೆಬ್ರಿ, ಮುಳ್ಳಿಕಟ್ಟೆಯಲ್ಲಿ ನೂತನ ಸ್ಥಾವರ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಸ್ಥಾವರ ನಿರ್ಮಿಸುವ ಭರವಸೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯ ಕುಂದಾಪುರ, ಬೈಂದೂರು ಮತ್ತು ಉಡುಪಿ ನಗರವೂ ಸೇರಿದಂತೆ ಇತರ ಭಾಗಗಳಲ್ಲಿ ಉಂಟಾಗಿದ್ದ ಸಿ.ಎನ್.ಜಿ. - ವಾಹನಗಳಿಗೆ ಬಳಸುವ ಇಂಧನ ಪೂರೈಕೆಯ ಕೊರತೆಯ ಬಗ್ಗೆ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್‌ದೀಪ್ ಸಿಂಗ್ ಪೂರಿ ಅವರಿಗೆ ಪತ್ರ ಬರೆದು ತುರ್ತು ಪರಿಹಾರಕ್ಕೆ ಆಗ್ರಹಿಸಿದ್ದರು.

ಜಿಲ್ಲೆಯಲ್ಲಿ ಈಗಿರುವ ಕೆಲವೇ ಸಿ.ಎನ್.ಜಿ. ಸ್ಥಾವರಗಳಲ್ಲಿ ಅನಿಲ ಕೊರತೆಯಿಂದಾಗಿ ಆಟೋ ರಿಕ್ಷಾ ಚಾಲಕರು ಮತ್ತು ಇತರ ಸಿ.ಎನ್.ಜಿ ವಾಹನಗಳು ಇಂಧನದ ಕೊರತೆಯಿಂದಾಗಿ ಕಿ.ಮೀ.ವರೆಗೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಮತ್ತು ಅದರಿಂದ ಉಂಟಾಗುವ ಟ್ರಾಫಿಕ್ ವ್ಯವಸ್ಥೆಯ ಬಗ್ಗೆಯೂ ಗಂಭೀರವಾಗಿ ಗಮನಿಸಬೇಕೆಂದು ಗಮನ ಸೆಳೆದಿದ್ದರು.

ಅದರಂತೆ ಕೇಂದ್ರ ಸಚಿವಾಲಯದ ಸೂಚನೆಯಂತೆ, ಉಡುಪಿ ಜಿಲ್ಲೆಯ ಸಿಎನ್‌ಜಿ ಇಂಧನ ಪೂರೈಕೆದಾರರಾದ ಅದಾನಿ ಸಂಸ್ಥೆಯು ವಿಪಕ್ಷ ನಾಯಕರಿಗೆ ಪತ್ರ ಬರೆದು, ತುರ್ತಾಗಿ ಈ ಸಮಸ್ಯೆ ಬಗೆಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಶ್ವತವಾಗಿ ಸಿ.ಎನ್.ಜಿ. ಕೊರತೆ ನಿವಾರಿಸಲು ಹಿರಿಯಡ್ಕ, ಹೆಬ್ರಿ, ಮತ್ತು ಮುಳ್ಳಿಕಟ್ಟೆಯಲ್ಲಿ ನೂತನ ಸ್ಥಾವರ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಸ್ಥಾವರಗಳನ್ನು ನಿರ್ಮಿಸಿ ಸಮಯಕ್ಕೆ ಸರಿಯಾಗಿ ಅನಿಲ ಪೂರೈಕೆ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.