ಸಾರಾಂಶ
ಬೆಂಗಳೂರು: ಹಣಕಾಸು ಸಮಸ್ಯೆ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ನಗರದ ಮೆಜೆಸ್ಟಿಕ್ ಬಳಿಯ ಆನಂದ್ ರಾವ್ ಮೇಲ್ಸೇತುವೆಯಿಂದ ಜಿಗಿದು ಹೋಟೆಲ್ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.
ವಿಜಯನಗರದ ನಿವಾಸಿ ತಿಮ್ಮರಾಜು (35) ಮೃತ ದುರ್ದೈವಿ. ಆನಂದ್ ರಾವ್ ವೃತ್ತದ ಮೇಲ್ಸೇತುವೆಗೆ ನಸುಕಿನ 3ಗಂಟೆ ಸುಮಾರಿಗೆ ಬಂದು ಜಿಗಿದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಹಣಕಾಸು ಸಮಸ್ಯೆ ಕಾರಣ ಎಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲ ದಿನಗಳಿಂದ ವಿಜಯನಗರ ಸಮೀಪದ ಹೋಟೆಲ್ನಲ್ಲಿ ಹಾಸನ ಜಿಲ್ಲೆಯ ತಿಮ್ಮರಾಜು ಕೆಲಸ ಮಾಡುತ್ತಿದ್ದ. ಆತನ ಪತ್ನಿ ಹಾಗೂ ಮಕ್ಕಳು ಹಾಸನದಲ್ಲೇ ನೆಲೆಸಿದ್ದಾರೆ. ಕೆಲ ದಿನಗಳಿಂದ ತನ್ನ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ತಿಮ್ಮರಾಜು ಸಾಲ ಪಡೆದಿದ್ದ. ಆದರೆ ಸಕಾಲಕ್ಕೆ ಸಾಲ ತೀರಿಸಲಾಗದೆ ಆತ ಸಂಕಷ್ಟಕ್ಕೆ ಸಿಲುಕಿದ್ದ. ಇದರಿಂದ ತೀವ್ರ ಮಾನಸಿಕ ಯಾತೆಗೊಳಗಾಗಿದ್ದ ಆತ, ಇದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.