ಸಾರಾಂಶ
ಮುಂಬೈ: ಯಾವುದೇ ಪಂದ್ಯವಿದ್ದರೂ ಆಯಾಯ ತಂಡಗಳ ನಾಯಕರು, ತಾರಾ ಆಟಗಾರರ ಜೆರ್ಸಿಗಳು ಕ್ರೀಡಾಂಗಣದ ಹೊರಗಡೆ ಮಾರಾಟಕ್ಕಿಟ್ಟಿರುತ್ತಾರೆ. ಅಪಾರ ಪ್ರಮಾಣದ ಅಭಿಮಾನಿಗಳು ತಮ್ಮಿಷ್ಟದ ಆಟಗಾರರ ಹೆಸರಿನ ಜೆರ್ಸಿಯನ್ನು ಧರಿಸಿ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಆದರೆ ಮಂಗಳವಾರ ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ವಾಂಖೇಡೆ ಕ್ರೀಡಾಂಗಣದ ಬಳಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯರ ಜೆರ್ಸಿ ಮಾರಾಟಕ್ಕೆ ಇರಲಿಲ್ಲ.
ಬೀದಿ ಬದಿ ವ್ಯಾಪಾರಿಗಳು ರೋಹಿತ್ ಶರ್ಮಾ ಹೆಸರಿನ ಜೆರ್ಸಿಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದ್ದರು. ಹಾರ್ದಿಕ್ರ ಜೆರ್ಸಿ ಕೇಳಿದರೂ ಇಲ್ಲ ಎನ್ನುವ ಉತ್ತರ ಬರುತ್ತಿತ್ತು ಎಂದು ಹಲವರು ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಪಾಂಡ್ಯರನ್ನು ಕಿಚಾಯಿಸಿದ ಫ್ಯಾನ್ಸ್ಗೆ ಸಂಜಯ್ ಕಿವಿಮಾತು
ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಕೂಡಾ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯರನ್ನು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಕಿಚಾಯಿಸಿದ್ದಾರೆ. ಟಾಸ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರೇಕ್ಷಕರು ರೋಹಿತ್, ರೋಹಿತ್ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಈ ವೇಳೆ ಟಾಸ್ ಪ್ರಕ್ರಿಯೆ ನಡೆಸಿಕೊಡುತ್ತಿದ್ದ ಸಂಜಯ್ ಮಂಜ್ರೇಕರ್ ಅವರು ಸರಿಯಾಗಿ ನಡೆದುಕೊಳ್ಳಿ ಎಂದು ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಬಳಿಕ ಹಾರ್ದಿಕ್ ಮಾತನಾಡುವಾಗಲೂ ಹಲವರು ಹಾರ್ದಿಕ್ರನ್ನು ಕಿಚಾಯಿಸಿದ್ದು, ರೋಹಿತ್ ಪರ ಘೋಷಣೆ ಕೂಗಿದ್ದಾರೆ. ಈ ಮೊದಲು ಅಹಮದಾಬಾದ್, ಹೈದರಾಬಾದ್ನಲ್ಲೂ ಹಾರ್ದಿಕ್ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದರು.