ಸಾರಾಂಶ
ಕೋಲ್ಕತಾ: ರಾಮನವವಿ ಹಬ್ಬದ ಹಿನ್ನೆಲೆಯಲ್ಲಿ ಏ.17ರಂದು ಕೋಲ್ಕತಾದಲ್ಲಿ ನಿಗದಿಯಾಗಿರುವ ಕೋಲ್ಕತಾ ಹಾಗೂ ರಾಜಸ್ಥಾನ ನಡುವಿನ ಪಂದ್ಯದ ದಿನಾಂಕ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಏ.17ರಂದೇ ರಾಮನವಮಿ ಆಚರಣೆ ಇದೆ. ಅಲ್ಲದೆ ಲೋಕಸಭೆ ಚುನಾವಣೆ ಕಾರಣದಿಂದಲೂ ಏ.17ರ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಅನಾನುಕೂಲವಾಗಿದೆ. ಹೀಗಾಗಿ ಪಂದ್ಯವನ್ನು ಏ.16 ಅಥವಾ ಏ.18ರಂದು ನಡೆಸಲು ಬೆಂಗಾಲ್ ಕ್ರಿಕೆಟ್ ಸಂಸ್ಥೆಗೆ ಕೋಲ್ಕತಾ ಪೊಲೀಸರು ಮನವಿ ಮಾಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಏ.16ರಂದು ಐಪಿಎಲ್ ತಂಡಗಳ ಮಾಲಿಕರ ಸಭೆ
ನವದೆಹಲಿ: ಏ.16ರಂದು ಅಹಮದಾಬಾದ್ನಲ್ಲಿ ಐಪಿಎಲ್ನ ಎಲ್ಲಾ 10 ತಂಡಗಳ ಮಾಲಿಕರ ಸಭೆಯನ್ನು ಬಿಸಿಸಿಐ ಕರೆದಿದೆ. ಇದೊಂದು ಅನೌಪಚಾರಿಕ ಸಭೆಯಾಗಿದ್ದು, ಯಾವುದೇ ನಿರ್ದಿಷ್ಟ ಅಂಶಗಳನ್ನು ಚರ್ಚಿಸುವ ಬಗ್ಗೆ ಬಿಸಿಸಿಐ ತಿಳಿಸಿಲ್ಲ.ಆದರೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ, ಆಟಗಾರರ ಉಳಿಸಿಕೊಳ್ಳುವಿಕೆ, ಆಟಗಾರರ ಖರೀದಿಗೆ ಬಜೆಟ್ ಹೆಚ್ಚಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಪಾಲ್ಗೊಳ್ಳಲಿದ್ದಾರೆ.