ಕರ್ನಾಟಕಕ್ಕೆ 3 ಲಕ್ಷ ಕೋಟಿ ರು. ಕೊಟ್ಟಿದ್ದೇವೆ: ಪ್ರಧಾನಿ ಮೋದಿ

| Published : Apr 21 2024, 02:28 AM IST / Updated: Apr 21 2024, 07:20 AM IST

ಕರ್ನಾಟಕಕ್ಕೆ 3 ಲಕ್ಷ ಕೋಟಿ ರು. ಕೊಟ್ಟಿದ್ದೇವೆ: ಪ್ರಧಾನಿ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನೀ ನರೇಂದ್ರ ಮೋದಿ ಅವರ ಸಂರ್ಶನದ ಭಾಗ 

ಕರ್ನಾಟಕದಿಂದ ಬಂದಿದ್ದೀನಿ, ಕರ್ನಾಟಕದ ಬಗ್ಗೆ ಒಂದು ಪ್ರಶ್ನೆ ಇದೆ. ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀವು ಹೇಗೆ ನೋಡ್ತೀರಾ? ಈಗ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ 1 ಲಕ್ಷ ಕೊಡ್ತೀವಿ ಅಂದಿದ್ದಾರೆ. 25 ಗ್ಯಾರಂಟಿ ಬಗ್ಗೆ ಮಾತಾಡ್ತಿದ್ದಾರೆ. ಇದನ್ನು ಹೇಗೆ ನೋಡ್ತೀರಾ?

ನಿರಾಶದಾಯಕತೆಯಲ್ಲಿ ಮುಳುಗಿರುವ ರಾಜಕೀಯ ಪಕ್ಷ ಎಲ್ಲರಿಗೂ ಪ್ರೀತಿಯನ್ನು ಹಂಚಲು ಕಷ್ಟ ಪಡ್ತಿದೆ. ನಾನು ನನ್ನ ಬಗ್ಗೆ ಮಾತಾಡ್ತೀನಿ. ತುಂಬಾ ದೀರ್ಘ ಸಮಯದವರೆಗೂ ಗುಜರಾತ್ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. 10 ವರ್ಷದಿಂದ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ದೊರೆತಿದೆ. ನನ್ನ ಬಳಿ ಇಷ್ಟು ದೊಡ್ಡ ಅನುಭವವಿದೆ. ನಾವು ಎಂದು ಕೂಡ ನಮ್ಮ ದೇಶದ ನಾಗರಿಕರ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬಾರದು. ನಾನು ಒಂದು ಬಾರಿ ಕೆಂಪುಕೋಟೆಯಿಂದ ಹೇಳಿದೆ. ಯಾರಿಗೆ ಸಾಮರ್ಥ್ಯವಿದೆಯೋ ಅವರು ಗ್ಯಾಸ್ ಸಬ್ಸಿಡಿ ತ್ಯಜಿಸಬೇಕು ಅಂತ. ದೇಶದಲ್ಲಿ ಒಂದು ಕೋಟಿಗಿಂತ ಹೆಚ್ಚಿನವರು ಗ್ಯಾಸ್ ಸಬ್ಸಿಡಿಯನ್ನು ತ್ಯಜಿಸಿದ್ದರು.

ನಮಗಿಂತ ಜನರು ದೇಶವನ್ನು ಹೆಚ್ಚಾಗಿ ಪ್ರೀತಿಸ್ತಾರೆ. ನಮಗಿಂತ ದೇಶಕ್ಕೆ ಹೆಚ್ಚು ಕೆಲಸ ಮಾಡಲು ತಯಾರಿದ್ದಾರೆ. ನಾವು ಅವರನ್ನು ಎಂದೂ ಕೆಳಮಟ್ಟದಲ್ಲಿ ನೋಡಬಾರದು. ನೋಡಿ, ಕೋವಿಡ್ ಸಮಯದಲ್ಲಿ ಪಾರ್ಲಿಮೆಂಟ್‌ನಲ್ಲಿ ಸಂಸದರಿಗೆ ನಿಮ್ಮ ಸಂಬಳ ತ್ಯಜಿಸಿ ಎಂದು ಮನವಿ ಮಾಡಿದ್ದೆ. ನನ್ನ ಮಾತು ಕೇಳಿ ಸಂಸದರೆಲ್ಲಾ ಅವರ ಸಂಬಳವನ್ನು ಬಿಟ್ಟುಕೊಟ್ಟರು. ಇಂಥಾ ವಿಷಯಗಳಿಂದ ಪ್ರೇರಣೆ ಸಿಗುತ್ತದೆ. ಬಡವರನ್ನು ಕಷ್ಟದಲ್ಲಿ ನಾವು ಕೈ ಹಿಡಿಯಬೇಕು. ದೇಶದ ನಾಗರೀಕರ ಕೈಯನ್ನು ನಾವು ಹಿಡಿಯಬೇಕು. ನಮ್ಮ ಮಾಡೆಲ್ ಯಾವುದು ಅಂದರೆ ದೇಶದ ಪ್ರತಿಯೊಬ್ಬ ನಾಗರಿಕನನ್ನು ಸಶಕ್ತನ್ನಾಗಿ ಮಾಡಬೇಕು. ಅದರಲ್ಲೂ ಬಡವರನ್ನು ವಿಶೇಷ ರೂಪದಲ್ಲಿ ಸಶಕ್ತರನ್ನಾಗಿಸಬೇಕು. ಇದಕ್ಕೆ ವ್ಯವಸ್ಥಿತ ಯೋಜನೆಗಳನ್ನ ರೂಪಿಸಬೇಕು. ಜನರನ್ನ ಜೀವನ ಸುಧಾರಿಸುವುದು ಸರ್ಕಾರದ ಜವಾಬ್ದಾರಿ. ಇದೇನು ಉಪಕಾರವಲ್ಲ.. ನಮ್ಮ ಜವಾಬ್ದಾರಿ

ಅದನ್ನು ಸಾಧಿಸುವುದು ಹೇಗೆ?

ನಾವು ಜನೌಷಧಿ ಕೇಂದ್ರಗಳನ್ನು ತೆರೆದೆವು. ಸುಮಾರು 11 ಸಾವಿರ ಜನೌಷಧಿ ಕೇಂದ್ರಗಳನ್ನು ತೆರೆದಿದ್ದೇವೆ. 25 ಸಾವಿರ ಕೇಂದ್ರಗಳನ್ನು ತೆರೆಯಬೇಕು ಅಂತಿದ್ದೇವೆ. ಜನೌಷಧಿ ಕೇಂದ್ರದಲ್ಲಿ ಸುಮಾರು 2 ಸಾವಿರ ಔಷಧಗಳು ಸಿಗುತ್ತವೆ. 300ಕ್ಕೂ ಅಧಿಕ ಔಷಧ ಉಪಕರಣಗಳು ನಿಮಗೆ ಅಲ್ಲಿ ಸಿಗುತ್ತವೆ. ಅಲ್ಲಿ ನಿಮಗೆ ಶೇಕಡ 80ರಷ್ಟು ಡಿಸ್ಕೌಂಟ್‌ಗೆ ಸಿಗುತ್ತೆ. ಉದಾಹರಣೆಗೆ ಒಂದು ಪರಿವಾರಕ್ಕೆ ತಿಂಗಳಿಗೆ 2-3 ಸಾವಿರದ ಔಷಧಗಳು ಅಗತ್ಯವಿದ್ದರೆ, ಮಧ್ಯಮ ವರ್ಗಕ್ಕೆ ಅವರ ಬಜೆಟ್‌ಗೆ ಅದು ದೊಡ್ಡದಾಗುತ್ತೆ. ಹೀಗಾಗಿ 80 ಪರ್ಸೆಂಟ್ ಡಿಸ್ಕೌಂಟ್ ನೀಡಲಾಗ್ತಿದೆ. ಇದರಿಂದ ತಂದೆ-ತಾಯಿಯರ ಸೇವೆ ಮಾಡಬಹುದು ಅಲ್ವಾ?

ಕರೆಂಟ್ ಬಿಲ್ ಕಡಿಮೆ ಮಾಡೋಕೆ ನಾವು ಎಲ್ಇಡಿ ಬಲ್ಬ್ ಯೋಜನೆ ತಂದೆವು. ಕಾಂಗ್ರೆಸ್ ಸರ್ಕಾರವಿದ್ದಾಗ ಯಾವ ಎಲ್ಇಡಿ ಬಲ್ಬ್ 400 ರುಪಾಯಿಗೆ ಸಿಗುತ್ತಿತೋ, ಇಂದು ಅದೇ ಬಲ್ಬ್ 40 ರುಪಾಯಿಗೆ ಸಿಗುತ್ತೆ.. ಎಲ್ಇಡಿ ಬಲ್ಬ್‌ನಿಂದಾಗಿ ಕರೆಂಟ್ ಬಿಲ್‌ನಲ್ಲಿ ಶೇ.20 ರಿಂದ 30ರಷ್ಟು ಉಳಿತಾಯವಾಗುತ್ತೆ. ಈಗ ನಾವು ಪಿಎಂ ಸೂರ್ಯಘರ್ ಯೋಜನೆ ತಂದಿದ್ದೇವೆ. 

ನೀವು ಸೋಲಾರ್ ಪ್ಯಾನೆಲ್ ಹಾಕಿಸಿದ್ರೆ, ಕರೆಂಟ್ ಬಿಲ್ ಸಂಪೂರ್ಣ ಇಲ್ಲವಾಗುತ್ತೆ. ಅಷ್ಟೇ ಅಲ್ಲ ಆ ವಿದ್ಯುತ್ತನ್ನು ನೀವು ಮನೆಗೆ ಮಾತ್ರವಲ್ಲ, ನಿಮ್ಮ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ಗೆ ಸಹ ಬಳಬಹುದು. ಇದರಿಂದ ನಿಮ್ಮ ಸಂಚಾರ ವೆಚ್ಚವಿಲ್ಲದೇ ನಡೆಯಲಿದೆ.ಇದು ಜನರನ್ನು ಸಶಕ್ತರನ್ನಾಗಿ ಮಾಡುತ್ತೆ. ಜತೆಗೆ ಅವರ ಖರ್ಚನ್ನೂ ಕಡಿಮೆ ಮಾಡುತ್ತೆ. 

ಈ ಎಲ್ಲಾ ಯೋಜನೆಗಳ ಪರಿಣಾಮ ಏನಾಗುತ್ತೆ? 

ಗರೀಬಿ ಹಠಾವೋ ಘೋಷಣೆಯನ್ನು 5 ದಶಕಗಳಿಂದ ಕೇಳಿದ್ದೇವೆ. ಈಗ ದೇಶ ಮೊದಲ ಬಾರಿಗೆ ಕೇಳುತ್ತಿದೆ. 25 ಕೋಟಿ ಜನ ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ ಅಂತ. ಇದು ಜನರನ್ನು ಸಶಕ್ತರನ್ನಾಗಿ ಮಾಡುವುದರಿಂದ ಸಾಧ್ಯವಾಗುತ್ತೆ. ದೇಶದ ಸಾಮಾನ್ಯ ನಾಗರಿಕರಿಗೆ ಬಹಳ ಸಾಮರ್ಥ್ಯವಿದೆ. ನಾನು ದೇಶದ ಸಾಮಾನ್ಯ ನಾಗರಿಕರ ಮೇಲೆ ಹೆಚ್ಚು ಭರವಸೆ ಇಟ್ಟಿದ್ದೇನೆ. 

ನಾವು ಕೊಡುವಷ್ಟು ತೆರಿಗೆ ಹಣ ವಾಪಸ್‌ ಬರುತ್ತಿಲ್ಲ, ಇದು ಮುಂದುವರಿದರೆ ಪ್ರತ್ಯೇಕ ರಾಷ್ಟ್ರದ ಬಗ್ಗೆ ಯೋಚಿಸಬೇಕಾಗುತ್ತೆಂದು ಕರ್ನಾಟಕ ಸರ್ಕಾರ ಹೇಳುತ್ತಿದೆಯಲ್ಲಾ?

ನಾವೆಲ್ಲಾ ಇರೋದು ಭಾರತ ಮಾತೆಯ ಸೇವೆ ಮಾಡಲು. ವ್ಯವಸ್ಥೆಯಲ್ಲಿ ಬೇರೆ ಬೇರೆ ಜನರಿಗೆ ಬೇರೆ ಬೇರೆ ಕೆಲಸ ಸಿಕ್ಕಿದೆ. ನಮ್ಮೆಲ್ಲರ ಗುರಿ ಏನಾಗಬೇಕು ಅಂದರೆ, ಕೇರಳದ ಯಾವುದೋ ಒಂದು ಹಳ್ಳಿಯ ವ್ಯಕ್ತಿಗೆ ಯೋಜನೆಗಳ ಲಾಭ ಸಿಗುವಂತಿದ್ದರೆ ಅದು ಸಿಗುವಂತೆ ನೋಡಿಕೊಳ್ಳೋದು. ಕರ್ನಾಟಕದ ಯಾವುದಾದರೂ ವ್ಯಕ್ತಿಗೆ ಲಾಭ ಸಿಗಬೇಕಿದ್ರೆ ಅದು ಸಿಗಲೇಬೇಕು. ಇದು ಸಂವಿಧಾನದ ಮೂಲ ಉದ್ದೇಶ. ನೀವು ನನಗೆ ಹೇಳಿ.. ಹಿಮಾಲಯದಿಂದ ನದಿಗಳು ಹರಿಯುತ್ತವೆ. ಹಿಮಾಲಯದ ರಾಜ್ಯಗಳು ನಮ್ಮ ನೀರನ್ನು ಯಾರೂ ಬಳಸುವಂತಿಲ್ಲ ಎಂದು ಹೇಳಿದರೆ, ದೇಶವನ್ನ ನಡೆಸಲು ಆಗುತ್ತಾ? 

ಕಲ್ಲಿದ್ದಲು ಗಣಿಗಳಿರುವ ರಾಜ್ಯಗಳು ನಾವು ಕಲ್ಲಿದ್ದಲನ್ನು ಹೊರಗೆ ಕೊಡುವುದಿಲ್ಲ ಎಂದರೆ ಬೇರೆ ರಾಜ್ಯಗಳು ಕತ್ತಲಲ್ಲಿ ಮುಳುಗಬೇಕಾಗುತ್ತೆ. ಈ ರೀತಿ ಯೋಚಿಸೋಕೆ ಆಗಲ್ಲ. ಈ ಸಂಪತ್ತು ದೇಶದ್ದು. ಯಾರೂ ಕೂಡ ಇದರ ಮಾಲೀಕರಲ್ಲ.ಎರಡನೇ ವಿಷಯ, ಈ ವ್ಯವಸ್ಥೆ ಸಂವಿಧಾನದ ನಿಯಮದಂತೆ ನಡೆಯುತ್ತದೆ. ಯಾವುದೇ ಸರ್ಕಾರದ ಅಣತಿಯಂತೆ ನಡೆಯಲ್ಲ. ರಾಜ್ಯಗಳಿಗೆ ಹಂಚಿಕೆ ಮಡಲಾಗುತ್ತಿದ್ದ 32% ಅನುದಾನವನ್ನು 14ನೇ ಹಣಕಾಸು ಆಯೋಗ ಶೇ.42ಕ್ಕೆ ಏರಿಕೆ ಮಾಡಿತು. ಇದರಿಂದ ನನ್ನ ಮೇಲೆ ಒತ್ತಡ ಬಿತ್ತು. ಕೇಂದ್ರ ಸರ್ಕಾರಕ್ಕೆ ಅಧಿಕಾರವಿತ್ತು. ಅದರಲ್ಲಿ ಹೆಚ್ಚೂ ಕಡಿಮೆ ಮಾಡುವ ಅಧಿಕಾರ ಪಾರ್ಲಿಮೆಂಟ್‌ಗೆ ಇತ್ತು. ಈ ರೀತಿ ಹಂಚಿಕೆ ಮಾಡಿದರೆ ತುಂಬಾ ಕಷ್ಟವಾಗುತ್ತದೆ, ಸರ್ಕಾರ ನಡೆಸಲು ಕಷ್ಟವಾಗುತ್ತೆ ಎಂದ ಅನಿಸಿದರೂ ನಾನು ಹೆದರಲಿಲ್ಲ. 

ರಾಜ್ಯಗಳ ಮೇಲೆ ನನಗೆ ಭರವಸೆ ಇತ್ತು. ರಾಜ್ಯಗಳಿಗೆ ಹಣ ಕೊಟ್ಟರೆ ಅವರು ಅಭಿವೃದ್ಧಿ ಕೆಲಸ ಮಾಡ್ತಾರೆ. 14ನೇ ಹಣಕಾಸು ಆಯೋಗ ಹೇಳಿದಂತೆ 32 ರಿಂದ 42 ಪರ್ಸೆಂಟ್ ಏರಿಕೆಯನ್ನು ಅವರು ಹೇಗೆ ಹೇಳಿದ್ದರೋ ಹಾಗೇ ಅದನ್ನು ಸ್ವೀಕಾರ ಮಾಡಿದೆ.ಅದೇ ಯುಪಿಎ ಕಾಲಘಟ್ಟದಲ್ಲಿ, ಮನಮೋಹನ್ ಸಿಂಗ್ ಅವರ ರಿಮೋಟ್ ಕಂಟ್ರೋಲ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಕರ್ನಾಟಕಕ್ಕೆ ಕೇಂದ್ರದ ಪಾಲಿನಲ್ಲಿ 10 ವರ್ಷದಲ್ಲಿ 80 ಸಾವಿರ ಕೋಟಿ ಸಿಕ್ಕಿತ್ತು. 

ನಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚೂ ಕಡಿಮೆ 3 ಲಕ್ಷ ಕೋಟಿ ರು. ಕೊಟ್ಟಿದ್ದೇವೆ. ಕೇರಳಕ್ಕೆ ಯುಪಿಎ ಸಮಯದಲ್ಲಿ 46 ಸಾವಿರ ಕೋಟಿ ನೀಡಲಾಗಿತ್ತು ನಮ್ಮ ಸರ್ಕಾರ 1.5 ಲಕ್ಷ ಕೋಟಿ ನೀಡಿದೆ. ತಮಿಳುನಾಡಿಗೆ ಯುಪಿಎ ಸರ್ಕಾರ 95 ಸಾವಿರ ಕೋಟಿ ನೀಡಿತ್ತು. ಆ ಸರ್ಕಾರದಲ್ಲಿ ಅವರೇ ಪಾಲುದಾರರಾಗಿದ್ರು. ಕೇರಳದವರು ಕೂಡ ದೆಹಲಿಯಲ್ಲಿ ಸರ್ಕಾರದಲ್ಲಿದ್ರು. ಆ ಸಮಯದಲ್ಲಿ ತಮಿಳುನಾಡಿಗೆ 95 ಸಾವಿರ ಕೋಟಿ ರು. ಸಿಕ್ಕಿತ್ತು. ಈಗ ಅವರಿಗೆ ಸುಮಾರು 3 ಲಕ್ಷ ಕೋಟಿ ಅಂದ್ರೆ 2 ಲಕ್ಷದ 90 ಸಾವಿರ ಕೋಟಿ ಅಧಿಕವಾಗಿ ಸಿಕ್ಕಿದೆ.

ಈಗ ಎಂಥೆಂಥಾ ಸುಳ್ಳು ಹಬ್ಬಿಸುತ್ತಿದ್ದಾರೆ. ಸ್ವಾರ್ಥ ರಾಜಕಾರಣಕ್ಕೆ ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ. ದೌರ್ಭಾಗ್ಯ ಅಂದ್ರೆ ಕಾಂಗ್ರೆಸ್ ಕೂಡ ಇಂತಾ ಜನರ ಜತೆಗೆ ನಿಂತಿದೆ. ಒಂದು ರಾಷ್ಟ್ರೀಯ ಪಕ್ಷವಾಗಿ 5-6 ದಶಕಗಳ ಕಾಲ ದೇಶವನ್ನು ನಡೆಸಿದ ಕಾಂಗ್ರೆಸ್ ಇಂಥಾ ಕೊಳಕು ಮನಸ್ಥಿತಿಗೆ ಬಂದಿದೆ.ಉತ್ತರ ಹಾಗೂ ದಕ್ಷಿಣ ವಿಭಜನೆ ಚರ್ಚೆ ನಡೆಯುತ್ತಿದೆ. 

ಕರ್ನಾಟಕದ ಸಂಸದರೊಬ್ಬರು ಹಣ ಹಂಚಿಕೆ ವಿಚಾರದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ಹೇಗೆ ನೋಡ್ತೀರಾ? ಹೇಗೆ ನಿರ್ವಹಿಸುತ್ತೀರಾ?

ದೇಶದ ರಾಜಕೀಯ ಪಕ್ಷಗಳು ಸಂವಿಧಾನಕ್ಕೆ ತಮ್ಮನ್ನು ಮೊದಲು ಸಮರ್ಪಿಸಿಕೊಳ್ಳಬೇಕು. ಭಾರತದ ಸಂವಿಧಾನ ನಮಗೆ ಏಕತೆ ಹಾಗೂ ಅಖಂಡತೆಯ ಜವಾಬ್ದಾರಿ ನೀಡಿದೆ. ಯಾರಾದರೂ ಇಂಥ ಪ್ರವೃತ್ತಿ ಮಾಡಿದರೆ, ಅಂತಹ ರಾಜಕೀಯ ಪಕ್ಷಗಳೇ ಗಂಭೀರವಾಗಿ ಪರಿಗಣಿಸಬೇಕು. ಏನೋ ಮಾತನಾಡುವಾಗ ಹೇಳಿದ್ದಾರೆ ಎನ್ನುವುದು ಇದೆಯಲ್ಲಾ, ಅದು ಬೀಜವಿದ್ದಂತೆ. ತಮ್ಮ ಕೈಯಿಂದಲೇ ನೀರು ಹಾಕಿ ಬೆಳೆಸಿದರೆ ಅದು ಯಾವಾಗ ವಟವೃಕ್ಷವಾಗುತ್ತೆ ಅಂತ ಗೊತ್ತಾಗೋದಿಲ್ಲ. ಇಂಥಾ ಸ್ವಾರ್ಥದ ಮಾತುಗಳು ಹಾಗೂ ಇಂಥಾ ಭಾಷೆಯಿಂದ ನಾವು ರಕ್ಷಿಸಿಕೊಳ್ಳಬೇಕಿದೆ. ಇಂಥಾ ಮಾತುಗಳಿಂದ ದೇಶಕ್ಕೆ ಕೆಟ್ಟದ್ದು. ಯಾವುದೇ ಸರ್ಕಾರ ಇರಲಿ ಇಂಥಾ ಮಾತುಗಳಿಂದ ಲಾಭವಾಗಲ್ಲ.ನಾನು ಗುಜರಾತ್‌ನಲ್ಲಿದ್ದಾಗ ಕೇಂದ್ರ ಸರ್ಕಾರದಿಂದ ನನಗೆ ಸಾಕಷ್ಟು ಅನ್ಯಾಯಗಳಾದವು, ಪ್ರತಿಯೊಂದರಲ್ಲೂ ಅನ್ಯಾಯ ಮಾಡಿದರು. ಆದ್ರೆ ನನ್ನದು ಒಂದೇ ಮಂತ್ರ ಇದ್ದಿದ್ದು ಭಾರತದ ವಿಕಾಸಕ್ಕಾಗಿ ಗುಜರಾತಿನ ವಿಕಾಸ. ನಾವೆಲ್ಲಾ ಒಟ್ಟಾಗಿ ದೇಶವನ್ನು ಮುಂದೆ ತರಬೇಕು. ಇದರಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಬಾರದು.-

-ಕರ್ನಾಟಕದಲ್ಲಿ ಬರ ಇದೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಬರ ಪರಿಹಾರ ಬಂದಿಲ್ಲ ಅಂತ ರಿಟ್ ಅರ್ಜಿ ಹಾಕಿದ್ದಾರೆ. ತುಂಬಾ ಚರ್ಚೆ ನಡೀತಿದೆ.. ಏನಾಗಿದೆ?

ಇದು ನಮ್ಮ ಸಮಯದಲ್ಲಿ ಅಲ್ಲ. ತುಂಬಾ ಹಿಂದೆಯೇ ಒಂದು ವ್ಯವಸ್ಥೆಯಿಂದ ನಿರ್ಧಾರಿತವಾಗಿದೆ. ಯಾವುದೇ ವಿಪತ್ತನ್ನು ಕೇವಲವಾಗಿ ತೆಗೆದುಕೊಳ್ಳುವಂತಿಲ್ಲ. ಸಮಸ್ಯೆಯನ್ನು ಸಂವೇದನಶೀಲವಾಗಿ, ಗಂಭೀರವಾಗಿ ಪರಿಗಣಿಸಬೇಕು. ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತೆ ಅಂತ ಇರಲೇಬಾರದು. ಬರಗಾಲವಾಗಲೀ, ಅತಿವೃಷ್ಟಿಯಾಗಲಿ ಸಮಸ್ಯೆಯಾಗೋದು ಅಲ್ಲಿನ ಜನಸಾಮಾನ್ಯರಿಗೆ. ನಮ್ಮೆಲ್ಲರ ಜವಾಬ್ದಾರಿ ನಾಗರಿಕರನ್ನು ಕಾಪಾಡುವುದು. ಇದು ರಾಜಕೀಯ ಮಾಡುವ ವಿಷಯವಲ್ಲ. ರಾಜಕೀಯ ಮಾಡಬಾರದು. ಅತ್ಯಂತ ಸಂವೇದನಾಶೀಲ ವಿಚಾರವಿದು.

ನಿಯಮ ಏನಿದೆ..?  

900 ಕೋಟಿ ರು. ಹಣವನ್ನು ಈ ರೀತಿಯ ಸಂದರ್ಭಕ್ಕಾಗಿ ಸಮಯಕ್ಕೆ ಸರಿಯಾಗಿ ಈಗಾಗಲೇ ನೀಡಲಾಗಿದೆ. ಇದು ಬಾಕಿಯಲ್ಲ. ಬರಗಾಲವಾಗಲಿ, ಅತಿವೃಷ್ಟಿಯಾಗಲಿ ಅಂತರ್ ಇಲಾಖಾ ತಂಡದವರು ಬಂದು ಸರ್ವೇ ಮಾಡುತ್ತಾರೆ. ಅಲ್ಲಿನ ಸರ್ಕಾರ ಮನವಿ ಕೊಡುತ್ತೆ. ಒಂದು ಕಮಿಟಿ ನಿರ್ಧಾರ ಮಾಡುತ್ತೆ. ಅದರಲ್ಲಿ ರಾಜಕಾರಣಿಗಳು ಇರುವುದಿಲ್ಲ. ತಜ್ಞರು ಇರುತ್ತಾರೆ. ವಿಶೇಷ ಪರಿಸ್ಥಿತಿಯಲ್ಲಿ 900 ಕೋಟಿ ಹಣಕ್ಕಿಂತ ಹೆಚ್ಚಿನದ್ದು ಅವಶ್ಯಕತೆ ಇದ್ದರೆ ಅವರು ಕೊಡ್ತಾರೆ.ಭಾರತ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಿತು. ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ನಮಗೆ ಅನುಮತಿ ಕೊಡಿ ಅಂತ. ಆದರೆ ಈಗ ರಾಜಕಾರಣಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕೋದು ಒಂದು ಫ್ಯಾಷನ್ ಆಗಿದೆ. ಕೇರಳದವರು ಹೋಗಿದ್ರು. ಅಲ್ಲಿ ಅವರಿಗೆ ಏನಾಯಿತು, ಕೋರ್ಟ್ ಚಾಟಿ ಬೀಸಿತು. ಸುಪ್ರೀಂಕೋರ್ಟ್‌ನಲ್ಲಿ ಅವರಿಗೆ ಎಷ್ಟೆಲ್ಲಾ ಅವಮಾನ ಆಯ್ತು. ಅವರಿಗೆ ಸುಪ್ರೀಂ ಕೋರ್ಟ್‌ ಏನೆಲ್ಲಾ ಹೇಳಿತು. ರಾಜಕೀಯ ಲಾಭ ಪಡೆಯೋಕೆ ಏನೆಲ್ಲಾ ಮಾಡಿದ್ರು ಜನರಿಗೆ ಗೊತ್ತಾಗಬೇಕು. ಮಾಧ್ಯಮಗಳು ಈ ಷಡ್ಯಂತ್ರವನ್ನ ಸರಳವಾಗಿ ಜನರ ಮುಂದಿಡಬೇಕು. ಇದರಿಂದ ದೇಶಕ್ಕೆ ನಷ್ಟವಾಗಬಾರದು. ಜನರ ಮುಂದೆ ಸತ್ಯವನ್ನ ಇಡಬೇಕು.

 ನೀವು ಮಧ್ಯಪ್ರಾಚ್ಯ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸೋಕೆ ಮುಂದಾಗಿದ್ದೀರಾ. ಇದು ಯಾಕೆ ಮುಂಚೆಯೇ ಆಗಲಿಲ್ಲ?

ಇದು ನಮ್ಮ ದೇಶದ ದೌರ್ಭಾಗ್ಯ. ಹಿಂದಿನ ಸರ್ಕಾರಗಳು ಮಧ್ಯ ಪ್ರಾಚ್ಯ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಲು ಗಮನ ಕೊಡಲಿಲ್ಲ. ನಾವು ಮೊದಲು ಎರಡು ಕೆಲಸ ಮಾಡುತ್ತಿದ್ದೆವು. ತೈಲ ಆಮದು ಮಾಡಿಕೊಳ್ಳುತ್ತಿದ್ದೆವು ಹಾಗೂ ಕಡಿಮೆ ಬೆಲೆಗೆ ಮಾನವ ಸಂಪನ್ಮೂಲವನ್ನ ರಫ್ತು ಮಾಡುತ್ತಿದ್ದೆವು. ಇದು ಸರಿಯಾದ ಕೆಲಸ ಆಗಿರಲಿಲ್ಲ. ಆದರೆ ಈಗ ನಮ್ಮ ರಸ್ತೆ ತುಂಬಾ ಬಲವಾಗಿದೆ. ಕೊಳ್ಳುವವರು ಹಾಗೂ ಮಾರುವವರ ವ್ಯವಸ್ಥೆ ಬಿಟ್ಟು ಒಂದು ಒಳ್ಳೆಯ ಅಭಿವೃದ್ಧಿಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರೊಂದಿಗೆ ವ್ಯಾಪಾರ ಒಪ್ಪಂದಗಳಾಗಿವೆ. ಜತೆಗೆ ಹಲವು ಆಯಾಮಗಳಲ್ಲಿ ಕೆಲಸಗಳು ನಡೆಯುತ್ತಿದೆ. 

ಈಗ ನಾವು ತಂತ್ರಜ್ಞಾನ ಹಾಗೂ ಸೇವೆಗಳನ್ನು ಸಹ ರಫ್ತು ಮಾಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಅಲ್ಲಿ ಕೆಲಸ ಮಾಡುತ್ತಿವೆ. ಕೃಷಿ ಉತ್ಪನ್ನಗಳಿಗಾಗಿ ಒಪ್ಪಂದ ಆಗಿದೆ. ಆಹಾರ ಸಂಸ್ಕರಣೆಗಾಗಿ ಅವರು ಹೂಡಿಕೆ ಮಾಡುತ್ತಿದ್ದಾರೆ. ನಾನು ಪ್ರಧಾನಿಯಾದ ಮೇಲೆ 2015ರಲ್ಲಿ ಯುಎಇಗೆ ಹೋಗಿದ್ದೆ. ನಿಮಗೆ ಒಂದು ವಿಷಯ ಗೊತ್ತಾದ್ರೆ ಅಚ್ಚರಿ ಪಡ್ತೀರಾ. ಆ ದೇಶದಲ್ಲಿ ನನ್ನ ದೇಶದ 30 ರಿಂದ 50 ಲಕ್ಷ ಜನರಿದ್ದಾರೆ. ನಮ್ಮ ಕೇರಳದ ಜನರೇ ಅಲ್ಲಿ ಹೆಚ್ಚಿಗೆ ಇದ್ದಾರೆ. ನಮ್ಮ ದೇಶದ ಪ್ರಧಾನ ಮಂತ್ರಿಗಳು 30 ವರ್ಷಗಳ ಕಾಲ ಆ ದೇಶಕ್ಕೆ ಹೋಗಿಲ್ಲ. 30 ವರ್ಷಗಳ ಕಾಲ ನಮ್ಮ ದೇಶದ ಪ್ರಧಾನ ಮಂತ್ರಿ ಆ ದೇಶಕ್ಕೆ ಹೋಗಿಲ್ಲ ಅಂದ್ರೆ.. ನನ್ನ ಭಾರತೀಯ ಅಣ್ಣ-ತಂಗಿಯರು ಅಲ್ಲಿ ಕೆಲಸ ಮಾಡ್ತಿದ್ದಾರೆ ಅವರಿಗೆ ಎಂಥಾ ಗೌರವ ಸಿಗುತ್ತೆ ಅಲ್ಲಿ. ಅವರಿಗೆ ಯಾವ ಹಕ್ಕು ಸಿಗುತ್ತೆ ಯಾವ ಥರ ನೋಡ್ತಾರೆ ಅಲ್ಲಿ. ನನ್ನ ಮನಸ್ಸಿನಲ್ಲಿ ಒಂದು ನೋವಿತ್ತು. 

ನಮ್ಮ ಕೇರಳದ ಜನ ಇಷ್ಟು ಸಂಖ್ಯೆಯಲ್ಲಿ ಕೆಲಸ ಮಾಡ್ತಾರೆ. ನಾನು ಅವರ ಯೋಗ ಕ್ಷೇಮ ವಿಚಾರಿಸಬೇಕು ಅಂತಾ ಹೋದೆ.ಕಳೆದ 10 ವರ್ಷದಲ್ಲಿ ನಾನು 13 ಬಾರಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಹೋಗಿದ್ದೇನೆ. ನಾನು ನಂಬ್ತೀನಿ.. ಕೋವಿಡ್ ಸಮಯದಲ್ಲಿ, ಅಲ್ಲಿಂದ ಜನ ಓಡಿ ಹೋಗುತ್ತಿದ್ರು. ಆದರೆ ಆಗ ಅಲ್ಲಿನವರು ಸಂದೇಶ ನೀಡಿದ್ರು. ಮೋದಿ ಜೀ ನೀವು ಚಿಂತೆ ಮಾಡಬೇಡಿ. ಇವರು ನಮ್ಮ ಸಹೋದರರು. ಇವರ ಜವಾಬ್ದಾರಿ ನಮ್ಮದು ಅಂತಾ. ನಾವು ನಮ್ಮ ದೇಶದಲ್ಲಿ ಕೋವಿಡ್ ಬಂದವರನ್ನು ಹೇಗೆ ಕೇರ್ ಮಾಡಿದ್ದೆವೋ ಅದೇ ಥರ ನೋಡಿದ್ರು.

ಯೆಮೆನ್ನಲ್ಲಿ ಯುದ್ಧ ಶುರುವಾದಾಗ 5000 ಜನರನ್ನು ಮೊದಲು ಯುಎಇಗೆ ಕರೆತಂದೆವು. ಈ ಸಂಬಂಧದಿಂದ ನಾವು ಆ ನಂತರ ಅವರನ್ನ ಮುಂಬೈಗೆ ಕರೆಸಿಕೊಂಡೆವು. 2023 ಸೂಡಾನ್‌ನಲ್ಲಿ ಆಂತರಿಕ ವಿಚಾರಕ್ಕೆ ಅವರದ್ದೇ ಎರಡು ಸೇನೆಗಳು ಯುದ್ಧಕ್ಕೆ ಇಳಿದವು. ನಾವು ಅಲ್ಲಿ ಭಾರತೀಯರನ್ನು ಕರೆದುಕೊಂಡು ಬಂದೆವು. ಸೌದಿ ಜೈಲುಗಳಲ್ಲಿ ನಮ್ಮ 850 ಜನರಿದ್ದರು. ಅದರಲ್ಲಿ ಕೇರಳಿಗರೇ ಹೆಚ್ಚಿದ್ರು. ನಾನು ಸೌದಿ ಜತೆ ಮಾತಾಡಿದೆ. ನನ್ನ ಮನವಿ ಹಿನ್ನೆಲೆ 850 ಜನರನ್ನ ಅವರು ಬಿಡುಗಡೆ ಮಾಡಿದರು. ಎಲ್ಲರೂ ವಾಪಸ್ ಭಾರತಕ್ಕೆ ಬಂದ್ರು. ಈಗ ಅವರ ಕುಟುಂಬದ ಜೊತೆ ಇದ್ದಾರೆ.

ಕತಾರ್‌ನಲ್ಲಿ 8 ನಿವೃತ್ತ ನೌಕಾ ಸಿಬ್ಬಂದಿಗೆ ಗಲ್ಲುಶಿಕ್ಷೆಯಾಗಿತ್ತು. ನಾನು ಅಲ್ಲಿನ ರಾಜನ ಬಳಿ ಕ್ಷಮಾಧಾನ ಕೇಳಿದೆ. ಇದು ನಮ್ಮ ಸಂಬಂಧದ ತಾಕತ್ತು ಅಂದ್ರೆ. ಹಜ್ ಯಾತ್ರೆ.. ಆಗ ಸೌದಿ ರಾಜಕುಮಾರ ಇಲ್ಲಿಗೆ ಬಂದಿದ್ರು. ನಾನು ಅವರಿಗೆ ಹೇಳಿದೆ ನಮ್ಮ ಜನಸಂಖ್ಯೆ ತುಂಬಾ ಇದೆ. ನಮ್ಮ ಮುಸ್ಲಿಂ ಅಣ್ಣ ಹಾಗೂ ತಂಗಿಯರ ಕೋಟಾ ಹೆಚ್ಚು ಮಾಡಿ ಅಂತಾ. ಅವರು ನನ್ನ ಮನವಿ ನೋಡಿ ಕೋಟಾ ಹೆಚ್ಚು ಮಾಡಿದ್ರು.

ಯುಎಇಯಲ್ಲಿ ಭಾರತೀಯ ಸಮುದಾಯದವರು ಮಂದಿರ ಕಟ್ಟುವ ಆಸೆ ಹೊಂದಿದ್ದರು.. ನಾನು ಯುಎಇಗೆ ಮನವಿ ಮಾಡಿದೆ. ನಮ್ಮ ಜನರು ಮಂದಿರ ಕಟ್ಟಬೇಕೆಂಬ ಆಸೆ ಹೊಂದಿದ್ದಾರೆ, ಜಮೀನು ನೀಡಿ, ಅನುಮತಿ ಕೊಡಿ ಅಂತಾ. ಅವರು ಜಮೀನು ಕೊಟ್ಟು ಮಂದಿರ ಕಟ್ಟೋಕೆ ಎಲ್ಲ ಸಹಾಯ ಮಾಡಿದರು. ಈಗ ಯುಎಇಯಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ. ಲಕ್ಷಾಂತರ ಜನರು ದರ್ಶನ ಪಡೆಯುತ್ತಿದ್ದಾರೆ. ನನಗೆ ಅಲ್ಲಿ ಉದ್ಘಾಟನೆ ಮಾಡುವ ಅವಕಾಶ ಸಹ ಸಿಕ್ಕಿತ್ತು. ಅವರ ದೇಶದಲ್ಲಿ ಅತ್ಯುನ್ನತ ನಾಗರಿಕ ಗೌರವ ನೀಡಿದರು. ಅದು ನನಗೆ ಮಾಡಿದ್ದಲ್ಲ.. 140 ಕೋಟಿ ಭಾರತೀಯರಿಗೆ ಮಾಡಿದ್ದು. ನಮ್ಮ ಸಂಬಂಧ ಇಷ್ಟು ಚೆನ್ನಾಗಿ ಬೆಳೆದಿದೆ. ಇದರ ಹೆಚ್ಚು ಲಾಭ ನಮ್ಮ ಕೇರಳದ ಅಣ್ಣ-ತಂಗಿಯರಿಗೆ ಸಿಗುತ್ತಿದೆ.ಉಕ್ರೇನ್‌ನಿಂದ ಬಂದ ಹುಡುಗರ ಜತೆ ಮಾತಾಡಿದೆ. ತ್ರಿವರ್ಣ ಧ್ವಜ ತೋರಿಸಿದ್ದಕ್ಕೆ ನಮ್ಮನ್ನು ಬಿಟ್ಟರು ಎಂದು ಹೇಳಿದರು. 

ಇವೆಲ್ಲಾ ಕಷ್ಟದ ಮಿಷನ್‌ಗಳು ಅಲ್ಲವೇ? 

ನೋಡಿ ಇದು ಭಾರತದ ವಿಶ್ವಾಸಾರ್ಹತೆ. ಇಡೀ ವಿಶ್ವ ಭಾರತವನ್ನು ವಿಶ್ವಬಂಧು ಎನ್ನುವ ರೀತಿ ಭಾವಿಸುತ್ತೆ. ಅದು ಶಬ್ಧದಲ್ಲಿ ಅಲ್ಲ, ಭಾವನೆಯಲ್ಲಿ ವ್ಯಕ್ತಪಡಿಸುತ್ತೆ. ಎಂಥದ್ದೇ ಸಂಕಷ್ಟದ ಸಮಯದಲ್ಲಿ ಭಾರತ ಮೊದಲು ಪ್ರತಿಸ್ಪಂದನೆ ನೀಡುತ್ತೆ. ಕಾವೇರಿ ಆಪರೇಷನ್ ನಡೆಯುವಾಗ .. ಕರ್ನಾಟಕದ ತುಂಬಾ ಜನರು ಅಲ್ಲಿದ್ದರು. ಅವರನ್ನ ವಾಪಸ್ ಕರೆದುಕೊಂಡು ಬರಲಾಯಿತು. ಸೂಡಾನ್‌ನಿಂದ ಕೆಲವರನ್ನು ಕರೆತರಲಾಯ್ತು. ಅಲ್ಲಿ ತುಂಬಾ ಕಷ್ಟದ ಕೆಲಸ ಮಾಡ್ತಿದ್ರು. ಅಲ್ಲಿ ಕೆಲಸ ಇಲ್ಲ ಅಂದ್ರೆ ಊಟಕ್ಕೂ ಕಷ್ಟವಿತ್ತು. ಎಲ್ಲರನ್ನೂ ವಾಪಸ್ ಕರೆತರಲಾಯ್ತು. ವಿದೇಶಿ ನೀತಿಯ ದೃಷ್ಟಿಕೋನವನ್ನು ನಾವು ಸಂಪೂರ್ಣವಾಗಿ ಬದಲಿಸಿದ್ದೇವೆ. ನಮ್ಮ ನೀತಿಯಲ್ಲಿ ಅನಿವಾಸಿ ಭಾರತೀಯರಿಗೆ ಮಹತ್ವ ನೀಡಲಾಗಿದೆ. ಪಾಸ್‌ಪೋರ್ಟ್‌ನ ಬಣ್ಣ ಯಾವುದೇ ಇರಲಿ. ನನ್ನ ಪ್ರಕಾರ ಅವರು ಹಿಂದೂಸ್ತಾನಿಯರು, ಅವರದ್ದು ಹಿಂದೂಸ್ತಾನಿ ರಕ್ತ. ಹಿಂದೂಸ್ತಾನದ ರಕ್ತವಾಗಿದ್ರೆ ಅವರಿಗೆ ಸಹಾಯ ಮಾಡ್ತೀವಿ. ಮೊದಲು ವಿದೇಶಿ ನೀತಿ ಅನಿವಾಸಿ ಭಾರತೀಯರ ಪರ ಇರಲೇ ಇಲ್ಲ. ಜನ ಅವರ ಜೀವನಕ್ಕಾಗಿ ಹೋಗಿದ್ದಾರೆ ಏನಾದರೂ ಆಗಲಿ ಅನ್ನುವ ಸ್ಥಿತಿ ಇತ್ತು. ಅವರು ಹೋಗಿದ್ದಾರೆ, ಅವರನ್ನು ಕರೆತರುವುದು ನನ್ನ ಕೆಲಸ ಎಂದು ಯೋಚಿಸುತ್ತೇನೆ. ಕೊನೆವರೆಗೂ ಪ್ಲಾನ್ ಮಾಡಿಕೊಂಡು ಹೋಗುತ್ತೇವೆ.

ಬೇರೆ ದೇಶದ ಜನರಲ್ಲೂ ನಮ್ಮ ಬಗ್ಗೆ ವಿಶ್ವಾಸರ್ಹತೆ ಹೆಚ್ಚಾಗಿದೆ. ತಿರಂಗಾ ಹಿಡಿದುಕೊಂಡು ಭಾರತ್ ಮಾತಾ ಕೀ ಜೈ ಅಂದ್ರೆ ನೀವು ಯಾವ ದೇಶದವರು ಎಂದು ಯಾರೂ ಕೂಡ ಕೇಳೋದಿಲ್ಲ ದಾರಿ ಬಿಟ್ಟು ಕಳಿಸುತ್ತಾರೆ. 2015ರ ಯೆಮೆನ್ ಸಂಕಷ್ಟ ಇರಬಹುದು. ಆಗ ಸೌದಿ ರಾಜನ ಜೊತೆ ಮಾತಾಡಿ ಸಾವಿರಾರು ಜನರನ್ನ ರಕ್ಷಣೆ ಮಾಡಿದ್ದೆವು. ಉಕ್ರೇನ್ ಸಂಕಷ್ಟ ಕೂಡ ಜನರಿಗೆ ಗೊತ್ತಿದೆ.