ಮೋದಿ ಸತ್ತರೇ ಯಾರೂ ಪ್ರಧಾನಿ ಆಗಲ್ವ?: ರಾಜು ಕಾಗೆ

| Published : May 02 2024, 09:36 AM IST

Congress MLA Raju Kage

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸತ್ತರೆ ಈ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.

ಕಾಗವಾಡ :  ಪ್ರಧಾನಿ ನರೇಂದ್ರ ಮೋದಿ ಸತ್ತರೆ ಈ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.

ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮದಬಾವಿ ಗ್ರಾಮದಲ್ಲಿ ಮಂಗಳವಾರ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಮೋದಿ ವಿರುದ್ಧ ಹರಿಹಾಯ್ದರು. ‘ಮೋದಿ ಸತ್ತರೆ ನಾಳೆ ಇನ್ಯಾರು ದೇಶದ ಪ್ರಧಾನಿ ಆಗಂಗಿಲ್ಲೇನು? ಮೋದಿಯವರು ತೀರ್ಕೋಂಡರು ಅಂದ್ರೆ ದೇಶದ 140 ಕೋಟಿ ಜನಸಂಖ್ಯೆಯೊಳಗೆ ಪ್ರಧಾನ ಮಂತ್ರಿ ಆಗೋರು ಯಾರೂ ಇಲ್ವಾ? ಇದೊಳ್ಳೆ ಕಥೆ ಆಯಿತಲ್ಲ’ ಎಂದು ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.

‘ಈಗಿನ ಯುವಕರು ಮೋದಿ, ಮೋದಿ ಎನ್ನುತ್ತಿದ್ದಾರೆ, ಮೋದಿನ ತೆಗೆದುಕೊಂಡು ನೆಕ್ಕುತ್ತಿರಾ? ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಮೋದಿ ಕಳೆದ 10 ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಲಕ್ಷಾಂತರ ಯುವಕರು ಪದವಿ ಪಡೆದು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗ ಕೊಡಿ ಎಂದರೇ ಪಕೋಡಾ ಮಾರಿ ಎನ್ನುತ್ತಿದ್ದಾರೆ’ ಎಂದು ಶಾಸಕ ಕಿಡಿಕಾರಿದರು.

‘ರಾಜ್ಯದಲ್ಲಿ ಮತದಾರರು ಕಾಂಗ್ರೆಸ್‌ ಸರ್ಕಾರ ಬೇಕು ಎನ್ನುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ಮೋದಿ ಇಲ್ಲಿ ಬಂದು ನಿಮ್ಮ ಸಮಸ್ಯೆ ಆಲಿಸುತ್ತಾರಾ? ಇಲ್ಲಿ ಏನಾದರೂ ನಿಮಗೆ ಸಮಸ್ಯೆಯಾದರೇ ಮೋದಿ ಬರೋದಿಲ್ಲ, ನಾನೇ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವವನು’ ಎಂದರು.

‘ನರೇಂದ್ರ ಮೋದಿಯವರು ₹3000 ಕೋಟಿಗಳ ವಿಮಾನದಲ್ಲಿ ಓಡಾಡುತ್ತಾರೆ. 4 ಲಕ್ಷ ರು. ವೆಚ್ಚದ ಸೂಟು, ಬೂಟು ಹಾಕಿಕೊಳ್ಳುತ್ತಾರೆ. ಅವರು ಎಂದೂ ಬಡವರ, ಹಿಂದೂಳಿದವರ, ದಲಿತರ ಪರವಾಗಿಲ್ಲ. ಅವರು ಏನಿದ್ದರೂ ಅದಾನಿ, ಅಂಬಾನಿಯಂಥಹ ಉದ್ಯಮಿಗಳ ಪರವಾಗಿ ಇರುವವರು’ ಎಂದು ದೂರಿದರು.