ಸಾರಾಂಶ
ಆನೇಕಲ್ : ತಾಲೂಕಿನಾದ್ಯಂತ ಒಟ್ಟು 381 ಬೂತ್ಗಳಲ್ಲಿ ಶೇ. 60 ಮತದಾನವಾಗಿದೆ. ಶಾಂತಿಯುತ ಮತದಾನಕ್ಕೆ ಸಹಕಾರ ನೀಡಿದ ಮತದಾರರಿಗೆ ಚುನಾವಣಾಧಿಕಾರಿ ಚಂದ್ರಶೇಖರ್ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಅವರು ಅಲಯನ್ಸ್ ಕಾಲೇಜಿನ ಚುನಾವಣಾ ಕೇಂದ್ರದಲ್ಲಿ ಮಾಹಿತಿ ನೀಡಿ ತಾಲೂಕಿನಲ್ಲಿ ಒಟ್ಟು 4,23,844 ಮತದಾರರಿದ್ದು, ಸಂಜೆಯ ವೇಳೆಗೆ 2,43,804 ಮತಗಳು ಚಲಾವಣೆಯಾಗಿ ಶೇ. 60% ಮತದಾನವಾಗಿದೆ ಎಂದರು.ತಾಲೂಕಿನ ಬೊಮ್ಮಸಂದ್ರ, ಯಡವನಹಳ್ಳಿ ಕೇಂದ್ರಗಳಲ್ಲಿ ಮತ ಯಂತ್ರ ಕೈ ಕೊಟ್ಟ ಕಾರಣ ಸ್ವಲ್ಪ ತಡವಾಗಿ ಮತದಾನ ಪ್ರಾರಂಭವಾಯಿತು.
ಸರ್ಜಾಪುರದ ಮತಗಟ್ಟೆಯೊಂದರಲ್ಲಿ ಅಲ್ಪಸಂಖ್ಯಾತ ಮಹಿಳೆಯರು ಮತ ಚಲಾವಣೆಗೆ ಬಂದಾಗ ಬೂತ್ ಏಜೆಂಟರು ಮತದಾರರನ್ನು ಗುರುತಿಸಲು ಕಷ್ಟವಾಗುತ್ತದೆ ಎಂದಾಗ ಅಧಿಕಾರಿ ಮುಖ ಪರದೆಯನ್ನು ಸರಿಸಬಹುದಾ ಎಂದು ಕೇಳಿದರು. ಸ್ಥಳದಲ್ಲಿ ಹಾಜರಿದ್ದ ಮುಸ್ಲಿಂ ಪುರುಷರು ಇದು ನಮ್ಮ ಪದ್ಧತಿಯನ್ನು ಪ್ರಶ್ನಿಸಿದಂತೆ ಎಂದು ವಾಗ್ವಾದ ನಡೆದು ಮಾತಿನ ಚಕಮಕಿಗೆ ಕಾರಣವಾಯಿತು. ವಿಚಾರ ತಿಳಿದ ತಹಸೀಲ್ದಾರ್ ಮಾಡ್ಯಾಳ್ ಸ್ಥಳಕ್ಕೆ ಧಾವಿಸಿ ಬಂದು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಮತಪಟ್ಟಿ ಹಾಗೂ ಯಾವುದಾದರೂ ದಾಖಲೆ ಇದ್ದಲ್ಲಿ ಮತದಾನಕ್ಕೆ ಅವಕಾಶ ಕೊಡಿ ಎಂದು ತಿಳಿಸಿದರು.
ಬೂತ್ ಏಜೆಂಟರು ಮುಖ ಪರದೆಯಿಂದಾಗಿ ಅವರು ಸ್ಥಳೀಯರೂ ಅಲ್ಲವೋ ಎಂಬುದರ ಜೊತೆಗೆ ಪ್ರಾಪ್ತರೋ ಅಪ್ರಾಪ್ತರೋ ಎಂಬುದೂ ತಿಳಿಯುತ್ತದೆ ಎಂದಾಗ ಚುನಾವಣಾ ನೀತಿಯನ್ನು ಪಾಲಿಸಬೇಕು ಎಂದು ಮನವರಿಕೆ ಮಾಡಿದರು.