2 ಲಕ್ಷ ಮತಗಳ ಅಂತರದಿಂದ ಗೆದ್ದು ಬರುವೆ: ಕೆ.ಎಸ್‌.ಈಶ್ವರಪ್ಪ

| Published : May 06 2024, 01:32 AM IST / Updated: May 06 2024, 12:21 PM IST

KS Eshwarappa

ಸಾರಾಂಶ

8 ವಿಧಾನಸಭಾ ಕ್ಷೇತ್ರದಲ್ಲೂ ಒಂದೊಂದು ಸಮಸ್ಯೆ ಇದೆ. ಯಡಿಯೂರಪ್ಪ ಹಾಗೂ ಮಕ್ಕಳ ಮೇಲೆ ಜನಾಕ್ರೋಶ ಎದ್ದಿದೆ ಎಂದ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

 ಶಿವಮೊಗ್ಗ :  ಶಿವಮೊಗ್ಗ ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಚುನಾವಣೆಯನ್ನೂ ಸುತ್ತಿ ಬಂದ ನಂತರ 2 ಲಕ್ಷ ಮತಗಳ ಅಂತರದಿಂದ ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿಸಿದೆ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 8 ವಿಧಾನಸಭಾ ಕ್ಷೇತ್ರದಲ್ಲೂ ಒಂದೊಂದು ಸಮಸ್ಯೆ ಇದೆ. ಮುಖ್ಯವಾಗಿ ಶಿಕಾರಿಪುರದಲ್ಲಿ ಅನೇಕ ಬಾರಿ ಅಧಿಕಾರ ಕೊಟ್ಟರೂ ರೈತರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಮಕ್ಕಳ ಮೇಲೆ ಜನಾಕ್ರೋಶ ಇದೆ. ಇದರಿಂದ ಶಿಕಾರಿಪುರದಲ್ಲಿ ನನಗೆ 25 ಸಾವಿರ ಲೀಡ್‌ ಸಿಗಲಿದೆ ಎಂದರು.

ಸೊರಬದಲ್ಲಿ ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ, ನೀರಾವರಿ ಸಮಸ್ಯೆಗಳು ಚುನಾವಣೆ ಸಮಯದಲ್ಲಿ ಮಾತ್ರ ನೆನಪಾಗುತ್ತದೆ ಎಂದು ಜನ ಸಚಿವ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿ ದ್ದಾರೆ. ಹೀಗಾಗಿ ಇಲ್ಲೂ ಕೂಡ 25 ಸಾವಿರ ಲೀಡ್‌ ನನಗೆ ಸಿಗಲಿದೆ. ಇನ್ನು ಭದ್ರಾವತಿಯಲ್ಲಿ ಕಾರ್ಮಿಕರು ಪ್ರತಿ ಬಾರಿಯೂ ಬರುತ್ತಾರೆ. ವಿಐಎಸ್‌ಎಲ್‌, ಎಂಪಿಎಂ ಆರಂಭ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಲೇ ಇದ್ದಾರೆ ಎಂದು ಕಾಂಗ್ರೆಸ್‌ ಹಾಗೂ ಯಡಿಯೂರಪ್ಪರ ಮೇಲೆ ತುಂಬಾ ಸಿಟ್ಟಿನಲ್ಲಿ ಇದ್ದಾರೆ. ಉಳಿದ ಕಡೆಯಲ್ಲ ಹಿಂದುತ್ವದ ಅಲೆ ಇದೆ. ಪ್ರತಿಯೊಬ್ಬ ಕಾರ್ಯಕರ್ತನೂ ಹಿಂದುತ್ವವಾದಿಗಳಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವುದರಿಂದ ನನಗೆ ಪೂರ್ಣ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.

ಹಿಂದುತ್ವಕ್ಕೆ ಅನ್ಯಾಯ, ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಇರುವುದು. ಸಾಮೂಹಿಕ ನಾಯಕತ್ವಕ್ಕೆ ಮಂಗಳ ಆಡುತ್ತಿರುವ ಬಗ್ಗೆ ಜನಸಮಾನ್ಯರು ಮಾತನಾಡುತ್ತಿದ್ದಾರೆ. ಮತದಾರ ರಿಗೆ ಇಷ್ಟರಮಟ್ಟಿಗೆ ರಾಜಕೀಯ ಪ್ರಜ್ಞೆ ಇರುವುದು ಸಾಗತಾರ್ಹ. ಎಲ್ಲ ಸಮುದಾಯದವರ ಬೆಂಬಲದಿಂದ ನಾನು ಗೆದ್ದೇ ಗೆಲ್ಲುತ್ತೇನೆ. ನಿಮ್ಮ ಋಣ ತೀರಿಸುತ್ತೇನೆ ಎಂದರು.

ನಿಮ್ಮಿಂದ ಮತ ತೆಗೆದುಕೊಂಡು ನಿಮಗೆ ಮೋಸ ಮಾಡಲ್ಲ. ಯಡಿಯೂರಪ್ಪ ಅವರ ಮಕ್ಕಳು- ಮಧು ಬಂಗಾರಪ್ಪ ಜನ ಆಕ್ರೋಶ ಇದೆ. ಮುಂದೆ ಜನರ ಆಕ್ರೋಶ ಬರದ ರೀತಿ ಶಿವಮೊಗ್ಗ ಜಿಲ್ಲೆಯ ಸಮಸ್ಯೆಗಳಿಗೆ ಧ್ವನಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ನಲ್ಲಿ ವಿಶ್ವಾಸ ನಾಯಕರು ಇಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ನನ್ನ ಬೆಂಬಲವಿದೆ. ಅದೇ ರೀತಿ ಜಿಲ್ಲೆಯದಾದ್ಯಂತ ಅವರ ಬಗ್ಗೆಯೂ ವಿಶ್ವಾಸ ಇಲ್ಲವಾಗಿದೆ. ಅವರ ವಿರುದ್ಧ ಪಕ್ಷದಲ್ಲೂ, ಜನರಲ್ಲೂ ಆಕ್ರೋಶ ಇದೆ ಎಂದು ಕುಟುಕಿದರು.

ನಾನು ಯಾವುದೇ ಭಾಗಕ್ಕೂ ಹೋದರೂ ನನಗೆ ಮತ ಕೊಡಲ್ಲ ಎಂದು ಎಲ್ಲೂ ಹೇಳುತ್ತಿಲ್ಲ. ಎಲ್ಲ ಸಮುದಾಯದವರು ನನಗೆ ಬೆಂಬಲ ಕೊಡುತ್ತಿದ್ದಾರೆ. ಬೈಂದೂರಿನಲ್ಲಿ ನನ್ನ ಪರ ಬೆಂಬಲ ನೋಡಿ ವಿಜಯೇಂದ್ರ, ಅಣ್ಣಮಲೈ, ತಾರಾ ಅವರು ಬೈಂದೂರಿನಲ್ಲಿ ಹೆಚ್ಚಿನ ಪ್ರಚಾರ ಮಾಡುತ್ತಿದ್ದಾರೆ. ಎಲ್ಲಿ ಈ ಕ್ಷೇತ್ರ ಕೈ ತಪ್ಪಿ ಹೋಗುತ್ತದೆಯೋ ಎಂಬ ಭಯದಲ್ಲಿ ಮಾಜಿ ಮುಖ್ಯಮಂತ್ರಿ ಕ್ಷೇತ್ರ ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಖಾರವಾಗಿ ಹೇಳಿದರು.

ಹಿಂದುತ್ವದಲ್ಲಿ ಗ್ಯಾರಂಟಿ, ಜಾತಿ, ಧರ್ಮ, ಕುಲ, ಗೋತ್ರ ಎಲ್ಲವೂ ಇದೆ. ಹಿಂದುತ್ವವನ್ನು ಉಳಿಸಿಕೊಂಡರೆ ಎಲ್ಲವೂ ಉಳಿಯಲಿದೆ. ಇದಕ್ಕಾಗಿ ಜನ ನನಗೆ ಬೆಂಬಲ ಕೊಡುತ್ತಿ ದ್ದಾರೆ. ಆರಂಭದಲ್ಲಿ ಈಶ್ವರಪ್ಪ ನರೇಂದ್ರ ಮೋದಿ ಪೋಟೋ ಬಳಸಿಕೊಳ್ಳುವುದನ್ನು ತಡೆಯಬೇಕು ಎಂದು ಬಿಜೆಪಿಯವರು ಕೋರ್ಟ್‌ಗೆ ಹೋದರು. ನನ್ನ ಹೃದಯದಲ್ಲಿ ಒಂದು ರಾಮ, ಇನ್ನೊಂದು ಕಡೆ ಮೋದಿ ಇದ್ದಾರೆ. ಇದಕ್ಕೆ ಕೋರ್ಟ್‌ ಕೂಡ ಬೆಂಬಲ ಕೊಟ್ಟಿರುವುದು ಸಂತೋಷ ಹೆಚ್ಚಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ತೀ.ನಾ.ಶ್ರೀನಿವಾಸ್‌ ಸೇರಿದಂತೆ ಹಲವರು ಇದ್ದರು. 

ಈಶ್ವರಪ್ಪ ಪರ ಮನೆಮನೆಗೆ ತೆರಳಿ ಕಾರ್‍ಯಕರ್ತರ ಪ್ರಚಾರ

ರಿಪ್ಪನ್‍ಪೇಟೆ: ಮೇ 7ರಂದು ನಡೆಯುವ ಶಿವಮೊಗ್ಗ ಜಿಲ್ಲಾ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪರ ನಿರೂಫ್ ಕುಮಾರ್ , ಗೀತಾ ಅಣ್ಣಪ್ಪ ಹಾಗೂ ಮಾಲ್ಗುಡಿ ಗಾಡಿ ಶೇಖರ ನೇತೃತ್ವದಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಭರ್ಜರಿ ಮತ ಪ್ರಚಾರ ಮಾಡಿದರು.ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ಬಳಿಯಿಂದ ತೀರ್ಥಹಳ್ಳಿ ಸಾಗರ ಹೊಸನಗರ ಶಿವಮೊಗ್ಗ ಪ್ರಮುಖ ರಸ್ತೆಯಲ್ಲಿ ನೂರಾರು ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರಿಗೆ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.