ಸಾರಾಂಶ
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೊಡಗು ಪೊಲೀಸರು ಬಿರುಸಿನ ತನಿಖೆ ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಎಸ್ಎಸ್ಎಲ್ಸಿಯಲ್ಲಿ ಪಾಸ್ ಆದ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ ಏಕೈಕ ವಿದ್ಯಾರ್ಥಿನಿ ಬರ್ಬರ ಹತ್ಯೆ ಆಗಿದ್ದಾಳೆ. ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿದ್ದ ಓರ್ವ ವಿದ್ಯಾರ್ಥಿನಿ ಯು.ಎಸ್. ಮೀನ ತೇರ್ಗಡೆಯಾಗಿದ್ದಾಳೆ. ಶೇ.100 ಫಲಿತಾಂಶ ಪಡೆದಿದ್ದಾಳೆ. ಆದರೆ ಗುರುವಾರ ರಾತ್ರಿ ಅವಳ ಕಗ್ಗೊಲೆ ಆಗಿದೆ. ದುಷ್ಕರ್ಮಿಗಳು ತಲೆ ಕತ್ತರಿಸಿ ದೇಹವನ್ನು ಬಿಸಾಡಿ ಹೋಗಿದ್ದಾರೆ.ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಯು.ಎಸ್.ಮೀನ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದ್ದು ಗುರುವಾರ ಗ್ರಾಮದಲ್ಲಿ ಸಂತೋಷಕ್ಕೆ ಕಾರಣ ಆಗಿತ್ತು.
ಸೂರ್ಲಬ್ಬಿ ಶಾಲೆಯಲ್ಲಿ ಏಕೈಕ ವಿದ್ಯಾರ್ಥಿನಿ ಮೀನ ಮಾತ್ರ ಕಲಿಯುತ್ತಿದ್ದಳು. ಏಕೈಕ ವಿದ್ಯಾರ್ಥಿಯನ್ನು ಹೊಂದಿದ್ದ ಈ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನ ತೇರ್ಗಡೆಯಾಗಿರುವುದು ಶಿಕ್ಷಣ ಇಲಾಖೆಗೆ ಪುಷ್ಠಿ ನೀಡಿದೆ ಎಂದು ಸಂಭ್ರಮ ಪಡುತ್ತಿರುವಾಗಲೆ ಇದೀಗ ಆಕೆಯ ಹತ್ಯೆ ನಡೆದಿದೆ.ಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಅಪ್ರಾಪ್ತ ಬಾಲಕಿ ಹತ್ಯೆ ಬಗ್ಗೆ ಕೊಡಗು ಪೊಲೀಸರು ಬಿರುಸಿನ ತನಿಖೆ ಕೈಗೊಂಡಿದ್ದಾರೆ.