ಸಾರಾಂಶ
ಬೆಂಗಳೂರು : ಹೆಸರುಘಟ್ಟ ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ। ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಬುಧವಾರ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಹೆಸರಘಟ್ಟ ಕೆರೆಯ ನೀರನ್ನು ಸರಬರಾಜು ಮಾಡುವುದು ಬೇಡ. ಇದರಿಂದ ಅಕ್ಕ-ಪಕ್ಕದ ಗ್ರಾಮ ಹಾಗೂ ಪ್ರಾಣಿ ಪಕ್ಷಿಗೆ ತೊಂದರೆ ಆಗಲಿದೆ ಎಂದು ರೈತ ಮುಖಂಡರು ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಲಮಂಡಳಿ ಅಧ್ಯಕ್ಷರು, ದಾಸರಹಳ್ಳಿ ಪ್ರದೇಶದಲ್ಲಿ ನೀರಿನ ಅಭಾವವಿದೆ. ಹೆಸರುಘಟ್ಟ ಕೆರೆಯಿಂದ ಕೇವಲ ಸಣ್ಣ ಪ್ರಮಾಣದ ನೀರನ್ನು ಅಲ್ಲಿಗೆ ಸರಬರಾಜು ಮಾಡುವ ಉದ್ದೇಶವನ್ನು ಜಲಮಂಡಳಿ ಹೊಂದಿತ್ತು. ಮನವಿಯ ಬಗ್ಗೆ ಚರ್ಚೆ ನಡೆಸಲಾಗುವುದು. ಕೆರೆಯ ಸಮಗ್ರ ಅಭಿವೃದ್ಧಿ ಮಾಡುವುದರಿಂದ ಹೆಸರುಘಟ್ಟದ ಸುತ್ತಮುತ್ತಲಿನ ಗ್ರಾಮಗಳಿಗೂ ಹಾಗೂ ನಗರದ ಭವಿಷ್ಯದ ಬಳಕೆಗೂ ಅನುಕೂಲವಾಗಲಿದೆ. ಇದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮಂಡಳಿಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ, ರಾಜ್ಯ ಕಾರ್ಯದರ್ಶಿ ನಂಜುಂಡಪ್ಪ ಕಡತನಮಲೆ, ಸಂಘಟನಾ ಕಾರ್ಯದರ್ಶಿ ಆರ್.ಲೋಕೇಶ್ ಶರ್ಮಾ, ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಸುರೇಶ್ ಉಪಸ್ಥಿತರಿದ್ದರು.