ಗಂಗಾವತಿ: ಕಾಂಗ್ರೆಸ್, ಬಿಜೆಪಿ ಪ್ರಮುಖರಿಂದ ಮತದಾನ

| Published : May 08 2024, 01:01 AM IST

ಗಂಗಾವತಿ: ಕಾಂಗ್ರೆಸ್, ಬಿಜೆಪಿ ಪ್ರಮುಖರಿಂದ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ವಾರ್ಡ್‌ಗಳ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೇರಿ ಹಲವು ಗಣ್ಯರಿಂದ ಹಕ್ಕು ಚಲಾವಣೆ

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ವಾರ್ಡ್‌ಗಳ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಟಿಎಪಿಸಿಎಂಎಸ್ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮತ್ತು ಪತ್ನಿ ಜೆಸ್ಕಾಂ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಪಬ್ಲಿಕ್ ಕ್ಲಬ್ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಮಾಜಿ ಸಂಸದ ಶಿವರಾಮೇಗೌಡ ಕುಟಂಬದ ಸದಸ್ಯರೊಂದಿಗೆ ಆಗಮಿಸಿ ಅವರು ಜಿಪಂ ಎಂಜಿನಿಯರಿಂಗ್ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.ಗಂಗಾವತಿಯ ಸಿದ್ದಾಪುರ ಬಡಾವಣೆಯ ನಿವಾಸಿ ಅಲ್ಲಮಪ್ರಭು ಪಾಟೀಲರ ಪುತ್ರ ಕಿರಣಕುಮಾರ ಮತ್ತು ಸೊಸೆ ಐಶ್ವರ್ಯ ದುಬೈದಿಂದ ಆಗಮಿಸಿ ಮತದಾನ ಮಾಡಿದರು.ಸಖಿ ಮತಗಟ್ಟೆಗಳಲ್ಲಿ ಪಿಂಕ್ ಕಲರ್ ಶರಬತ್ತು ನೀಡಿ ಸ್ವಾಗತ!:ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತೆರೆಯಲಾದ ಪಿಂಕ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದವರಿಗೆ ತಾಪಂ ಇಒ ಲಕ್ಷ್ಮೀದೇವಿ ಪಿಂಕ್ ಕಲರ್ ಶರಬತ್ತು ನೀಡಿದರು.ಪಿಂಕ್ ಮತಗಟ್ಟೆಯಲ್ಲಿ ಶಾಮಿಯಾನ, ಸ್ವಾಗತ ಫಲಕ, ಸೆಲ್ಫಿಸ್ಟ್ಯಾಂಡ್, ಫಿಂಕ್ ಕಲರ್ ಶರಬತ್ತು, ಮಹಿಳಾ ಸಿಬ್ಬಂದಿ ಇರುವುದು ವಿಶೇಷವಾಗಿತ್ತು. ಸಖಿ ಮತಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಿ ಖುಷಿಪಟ್ಟರು. ಸೆಲ್ಫಿ ಸ್ಟ್ಯಾಂಡ್ ಬಳಿ ಫೋಟೋ ಕ್ಲಿಕ್ಕಿಸಿಕೊಂಡರು. ಮತದಾರರಿಗೆ ನೆರಳಿನ ವ್ಯವಸ್ಥೆ, ನೀರು, ಶರಬತ್ತು ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಗ್ರಾಪಂ‌ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ, ತಾಲೂಕು ಐಇಸಿ ಸಂಯೋಜಕರು, ಗ್ರಾಪಂ ಸಿಬ್ಬಂದಿ, ನಿಯೋಜಿತ ಚುನಾವಣಾ ಸಿಬ್ಬಂದಿ ಇದ್ದರು.