ಸಾರಾಂಶ
ಜಿಲ್ಲಾ ಕಸಾಪ ಸಭಾಭವನದಲ್ಲಿ ನಡೆದ ಕಸಾಪ ಬಾದಾಮಿ ತಾಲೂಕು ಘಟಕದ ಕೋಶಾಧ್ಯಕ್ಷರಾಗಿದ್ದ ಬಿ.ಎಸ್.ಪವಾಡಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಶಿಕ್ಷಣ ರಂಗಕ್ಕೆ ಹಾಗೂ ಸಂಘಟನೆಗೆ ದಿ. ಬಿ.ಎಸ್.ಪವಾಡಶೆಟ್ಟಿ ಅವರ ಸೇವೆ ಅನನ್ಯವಾಗಿದೆ ಎಂದು ಸಾಹಿತಿ ಡಾ.ಪ್ರಕಾಶ ಖಾಡೆ ಹೇಳಿದರು. ನವನಗರದ ಜಿಲ್ಲಾ ಕಸಾಪ ಸಭಾಭವನದಲ್ಲಿ ನಡೆದ ಕಸಾಪ ಬಾದಾಮಿ ತಾಲೂಕು ಘಟಕದ ಕೋಶಾಧ್ಯಕ್ಷರಾಗಿದ್ದ ಬಿ.ಎಸ್.ಪವಾಡಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಬಾದಾಮಿ ತಾಲೂಕಿನ ಕಸಾಪ ಗೌರವ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಎಸ್.ಪವಾಡಶೆಟ್ಟರ ಅವರ ನಿಧನ ಜಿಲ್ಲೆಯ ಸಾಹಿತಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ನೋವು ಉಂಟು ಮಾಡಿದೆ. ಅವರ ನಿಧನದಿಂದ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವುಂಟಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಹಿರಿಯರಾದ ಬಿ.ಎಸ್.ಪವಾಡಶೆಟ್ಟಿ ಅವರ ಅಗಲಿಕೆಯಿಂದ ಜಿಲ್ಲೆಯ ಸಾಹಿತ್ಯ ಪರಿಷತ್ಗೆ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದರು.
ಹಿರಿಯ ಸಾಹಿತಿ ಡಾ.ಮೈನುದ್ದೀನ್ ರೇವಡಿಗಾರ ಮಾತನಾಡಿ, ಬಾದಾಮಿಯಲ್ಲಿ ಜರುಗಿದ ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲಿ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತಿತ್ತು ಎಂದು ಹೇಳಿದರು.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ತಾಲೂಕು ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಮತ್ತು ಪ್ರೊ.ಸಂಗಮೇಶ ಬ್ಯಾಳಿ ಸಭೆಯಲ್ಲಿ ಪಾಲ್ಗೊಂಡಿದ್ದರು.