ಸಾರಾಂಶ
ಸಿಐಡಿ ತನಿಖೆ ಪೂರ್ಣಗೊಳ್ಳದೇ, ನಿಯೋಗದ ಅಂತಿಮ ವರದಿಯನ್ನು ರಾಜ್ಯ ಸರ್ಕರಕ್ಕೆ ಸಲ್ಲಿಸುವವರೆಗೆ ಯಾವುದೇ ಕಾರಣಕ್ಕೂ ಪರಶುರಾಮ ಮೂರ್ತಿ ನಿರ್ಮಾಣದ ಅವ್ಯವಹಾರಕ್ಕೆ ಸಂಬಂಧಿಸಿ ಸಾಕ್ಷ್ಯಗಳನ್ನು ತೆರವು ಮಾಡಬಾರದು ಎಂದು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾ.ಪಂ. ವ್ಯಾಪ್ತಿಯ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ಗೆ ಸಂಬಂಧಿಸಿದ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ, ಅಲ್ಲದೆ ಈ ಹಗರಣದ ವರದಿ ಸಲ್ಲಿಸಲು ಸರ್ಕಾರ ನಿಯೋಜಿಸಿರುವ ನಾಗಮೋಹನ್ ದಾಸ್ ವಿಚಾರಣಾ ಆಯೋಗವು ಇನ್ನೂ ವರದಿಯನ್ನು ಸಲ್ಲಿಸಿಲ್ಲ. ಈ ಮಧ್ಯೆ ಭಗ್ನಗೊಳಿಸಲಾಗಿರುವ ಪರಶುರಾಮನ ವಿಗ್ರಹದ ಅವಶೇಷಗಳನ್ನು ತೆರವುಗೊಳಿಸಬಾರದು ಎಂದು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದೆ.ಸಿಐಡಿ ತನಿಖೆ ಪೂರ್ಣಗೊಳ್ಳದೇ, ನಿಯೋಗದ ಅಂತಿಮ ವರದಿಯನ್ನು ರಾಜ್ಯ ಸರ್ಕರಕ್ಕೆ ಸಲ್ಲಿಸುವವರೆಗೆ ಯಾವುದೇ ಕಾರಣಕ್ಕೂ ಪರಶುರಾಮ ಮೂರ್ತಿ ನಿರ್ಮಾಣದ ಅವ್ಯವಹಾರಕ್ಕೆ ಸಂಬಂಧಿಸಿ ಸಾಕ್ಷ್ಯಗಳನ್ನು ತೆರವು ಮಾಡಬಾರದು. ಈ ಮೂರ್ತಿಯನ್ನು ನಿರ್ಮಿಸುತ್ತಿರುವ ಶಿಲ್ಪಿ ಕೃಷ್ಣ ನಾಯಕ್ ಎನ್ನುವವರು ಕಂಚು ಖರೀದಿಯಲ್ಲಿ ಜಿಎಸ್ಟಿ ಕಟ್ಟದೇ ವಂಚನೆ ಮಾಡಿದ್ದಾರೆ. ಆದ್ದರಿಂದ ಅವರು ಪರಶುರಾಮಮೂರ್ತಿಯ ಅವಶೇಷ ಭಾಗವನ್ನು ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಬಾರದು ಎಂದು ಹಿತರಕ್ಷಣಾ ಸಮಿತಿಯ ಗೌರವಾದ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಗುರುವಾರ ಜಿಲ್ಲಾಧಿಕಾರಿಯವರಿಗೆ ಸಂಬಂಧಿತ ದಾಖಲೆ ಸಹಿತ ಮನವಿಯನ್ನು ಸಲ್ಲಿಸಿದರು.
ಈ ಹಿತರಕ್ಷಣಾ ಸಮಿತಿಯು ಕಾರ್ಕಳ ಅಭಿವೃದ್ಧಿಪರ ಕೆಲಸ ಮಾಡುತ್ತಿದೆ. ಆದರೆ ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿರುವ ವ್ಯಕ್ತಿಗಳ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದೆ. ಪರಶುರಾಮ ಮೂರ್ತಿಯನ್ನು ಉಮಿಕಲ್ ಬೆಟ್ಟದಲ್ಲಿ ಪುನರ್ ಸ್ಥಾಪಿಸಿ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಉಳಿಸುವ ಕೆಲಸ ಮಾಡುತ್ತಿದೆ ಎಂದು ಕೃಷ್ಣಮೂರ್ತಿ ಆಚಾರ್ಯರು ತಿಳಿಸಿದ್ದಾರೆ.