ಗಿಜುಗುಡುತ್ತಿದ್ದ ಕಾರ್ಯಾಲಯಗಳು ಇದೀಗ ಭಣಭಣ!

| Published : May 09 2024, 01:01 AM IST

ಗಿಜುಗುಡುತ್ತಿದ್ದ ಕಾರ್ಯಾಲಯಗಳು ಇದೀಗ ಭಣಭಣ!
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಮುಗಿದಿದೆ. ಆದರೆ, ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದೆ. ಚುನಾವಣೆ ಹಿನ್ನೆಲೆಯಲ್ಲಿ ಸದಾ ಪಕ್ಷಗಳ ನಾಯಕರ, ಕಾರ್ಯಕರ್ತರ, ಅಭಿಮಾನಿಗಳಿಂದ ಗಿಜುಗುಡುತ್ತಿದ್ದ ಪಕ್ಷಗಳ ಕಾರ್ಯಾಲಯಗಳು, ಅಭ್ಯರ್ಥಿಗಳ ಮನೆಗಳು, ಅವರ ಕಚೇರಿಗಳು ಇದೀಗ ಯಾರೂ ಇಲ್ಲದೆ ಭಣಗುಡುತ್ತಿವೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭೆ ಚುನಾವಣೆ ಮುಗಿದಿದೆ. ಆದರೆ, ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದೆ. ಚುನಾವಣೆ ಹಿನ್ನೆಲೆಯಲ್ಲಿ ಸದಾ ಪಕ್ಷಗಳ ನಾಯಕರ, ಕಾರ್ಯಕರ್ತರ, ಅಭಿಮಾನಿಗಳಿಂದ ಗಿಜುಗುಡುತ್ತಿದ್ದ ಪಕ್ಷಗಳ ಕಾರ್ಯಾಲಯಗಳು, ಅಭ್ಯರ್ಥಿಗಳ ಮನೆಗಳು, ಅವರ ಕಚೇರಿಗಳು ಇದೀಗ ಯಾರೂ ಇಲ್ಲದೆ ಭಣಗುಡುತ್ತಿವೆ.

ರಾಜಕೀಯ ಪಕ್ಷಗಳ ಶಕ್ತಿ ಕೇಂದ್ರಗಳೇ ಆಯಾ ಪಕ್ಷಗಳ ಕಾರ್ಯಾಲಯಗಳು. ಚುನಾವಣೆ ರೂಪುರೇಷೆಗಳು ರೂಪುಗೊಳ್ಳುತ್ತಿದ್ದ, ಕಾರ್ಯಕರ್ತರ ರಾಜಕೀಯ ಚಟುವಟಿಕೆ ಕೇಂದ್ರಗಳು, ನಾಯಕರ ವಿಶ್ರಾಂತಿಗೆ ಆಸರೆ ತಾಣಗಳಾಗಿದ್ದವು ಈ ಕಾರ್ಯಾಲಯಗಳು. ಅದರಲ್ಲೂ ಲೋಕಸಭೆ ಚುನಾವಣೆಯಲ್ಲಿ ಎಲ್ಲರ ಚಿತ್ತ ಈ ಕಾರ್ಯಾಗಳತ್ತಲೇ ಇತ್ತು. ಸದಾ ಜನರಿಂದ, ಕಾರ್ಯಕರ್ತರಿಂದ, ಬೆಂಬಲಿಗರಿಂದ ಭಣಗುಡುತ್ತಿತ್ತು. ಆದರೆ, ಈಗ ಚುನಾವಣೆ ಮುಗಿದಿರುವುದರಿಂದ ಕಾರ್ಯಾಲಯಗಳಲ್ಲಿ ನೀರವಮೌನ ಆವರಿಸಿದೆ.ಜೋರಾಗಿತ್ತು ಅಬ್ಬರ:

ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರ ಅಬ್ಬರ ಜೋರಾಗಿಯೇ ಇತ್ತು. ಚುನಾವಣೆ ಮುಗಿದ ಬಳಿಕ ಎಲ್ಲರೂ ತಮ್ಮ ತಮ್ಮ ಮನೆ ಸೇರಿಕೊಂಡಿದ್ದಾರೆ. ಇದುವರೆಗೆ ಬಿಸಿಲಿಗೆ ಬಸವಳಿದಿದ್ದರಿಂದ ಸಹಜವಾಗಿ ವಿಶ್ರಾಂತಿಗೆ ಜಾರಿದ್ದಾರೆ. ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಪಕ್ಷಕ್ಕಾಗಿ ದುಡಿಯಲು ಬರುತ್ತಿದ್ದ ಕಾರ್ಯಕರ್ತರು ಇಂದು ಒಲ್ಲದ ಮನಸಿನಿಂದಲೇ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ. ಇದೀಗ ಎರಡೂ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ಮುಖಂಡರೊಂದಿಗೆ ಸೋಲು ಗೆಲುವಿನ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ.

ಅಭ್ಯರ್ಥಿಗಳ ಅವಿರತ ಶ್ರಮ:

ಚುನಾವಣೆ ಘೋಷಣೆಯಾಗಿ ತಮಗೆ ಟಿಕೆಟ್ ಸಿಗುತ್ತಿದ್ದಂತೆ ಸವಾಲಾಗಿ ಸ್ವೀಕರಿಸಿದ ಬಿಜೆಪಿಯ ರಮೇಶ ಜಿಗಜಿಣಗಿ ಹಾಗೂ ಕಾಂಗ್ರೆಸ್‌ನ ಪ್ರೊ.ರಾಜು ಆಲಗೂರ ಕಾಲಿಗೆ ಚಕ್ರ ಕಟ್ಟಿಕೊಂಡು ಮೊದಲ ದಿನದಿಂದ ಮತದಾನದ ಕೊನೆಯ ದಿನದವರೆಗೂ ಹಳ್ಳಿ ಹಳ್ಳಿ ತಿರುಗಾಡಿ ಪ್ರಚಾರ ನಡೆಸಿದ್ದಾರೆ. ಜೊತೆಗೆ ತಮ್ಮ ನಾಯಕರನ್ನೂ ಕರೆಸಿ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವನ್ನೂ ಮಾಡಿದ್ದಾರೆ. ಬಿಸಿಲಿನ ಪ್ರಖರತೆಯನ್ನು ಲೆಕ್ಕಿಸದೇ ಅಬ್ಬರದ ಪ್ರಚಾರ ಕೂಡ ನಡೆಸಿದ್ದಾರೆ. ಹೀಗಾಗಿ ಚುನಾವಣೆಗಾಗಿ ಅವಿರತ ಶ್ರಮವಹಿಸಿದ್ದಾರೆ.

ಹೆಂಡತಿ, ಮಕ್ಕಳಿಂದಿಗೆ ಹರಟೆ:

ಚುನಾವಣೆ ಭರದಲ್ಲಿ ಹೆಂಡತಿ, ಮಕ್ಕಳಿಗೆ ಸಮಯ ಕೊಡಲು ಆಗದ್ದರಿಂದ ಇಂದು ಬೆಳಗ್ಗೆ ಬೇಗನೇ ಎದ್ದು ಪತ್ನಿ-ಮಕ್ಕಳೊಂದಿಗೆ ಕುಳಿತು ಹರಟೆ ಹೊಡೆದರು. ಬಳಿಕ ಜಲನಗರದ ಹುಡ್ಕೋ ಕಾಲೋನಿಯಲ್ಲಿನ ಮನೆಗೆ ಕಾರ್ಯಕರ್ತರು, ಮುಖಂಡರು ಆಗಮಿಸುತ್ತಿದ್ದಂತೆ ಹಳ್ಳಿಗಳಲ್ಲಿನ ಮತದಾನದ ವಿವರ ಹಾಗೂ ತಮ್ಮ ಪರವಾದ ವಾತಾವರಣದ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಧ್ಯಾಹ್ನ ಎಂಬಿಪಿ ಜತೆ ಊಟ:

ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಮನೆಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಅವರೊಂದಿಗಿದ್ದರು. ಬ್ಲಾಕ್, ಬೂತ್‌ಗಳ ಮಟ್ಟದಲ್ಲಿ ಯಾವ ಕಡೆ ಎಷ್ಟು ಮತದಾನವಾಗಿದೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತಗಳು ಬಂದಿರಬಹುದು ಎನ್ನುವ ವಿವರಣೆ ನೀಡಿ, ಬಳಿಕ ಅವರ ಮನೆಯಲ್ಲೇ ಅವರೊಂದಿಗೆ ಊಟ ಸವಿದರು.

ಟೆಂಪಲ್‌ ರನ್‌:

ದೈವ ಭಕ್ತರಾಗಿರುವ ರಾಜು ಆಲಗೂರರು ಸಂಜೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಧನ್ಯತಾಭಾವ ಮೆರೆದರು. ಇಷ್ಟಾಗುವುದರೊಳಗೆ ದಿನ ಸರಿದು ಸಂಜೆಯ ಮಬ್ಬುಗತ್ತಲು ಆವರಿಸುತ್ತಿತ್ತು. ಬಹಳ ದಿನಗಳ ಮೇಲೆ ಮನೆಯವರ ಜೊತೆ ಕೂತು ಊಟ ಮಾಡಿದರು.

ವಿಶ್ರಾಂತಿಯಲ್ಲಿ ಜಿಗಜಿಣಗಿ:

ನಿತ್ಯ ಬೆಳಗಾಗುವುದರಲ್ಲಿಯೇ ಮನೆಯಿಂದ ಹೊರಗೆ ಬಂದು ಮುಖಂಡರನ್ನು ಕಾರ್ಯಕರ್ತರನ್ನು ಭೇಟಿಯಾಗುವುದು, ಪ್ರಚಾರಕ್ಕೆ ತೆರಳುವುದು ಮಾಡುತ್ತಿದ್ದ ಜಿಗಜಿಣಗಿ ಕಳೆದೊಂದು ತಿಂಗಳಿನಿಂದ ಮೊಮ್ಮಕ್ಕಳಿಗೆ ಸಮಯವೇ ಕೊಟ್ಟಿರಲಿಲ್ಲ. ಚುನಾವಣೆ ಮುಗಿದ ಬಳಿಕ ಬುಧವಾರ ತಮ್ಮ ಮೊಮ್ಮಕ್ಕಳ ಜೊತೆಗೆ ಕಾಲ ಕಳೆದಿದ್ದಾರೆ. ನಗರದ ಭೂತನಾಳ ಕೆರೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲೇ ಬೆಳಗ್ಗೆ ಎದ್ದು ಮನೆಯಲ್ಲೇ ಚಹಾ ಸವಿದರು. ಎಂದಿನಂತೆ ರೆಡಿಯಾದ ಬಳಿಕ ಮೊಮ್ಮಕ್ಕಳ ಜೊತೆಗೆ ಸೇರಿ ಟಿಫನ್, ಕೆಲಹೊತ್ತು ಅವರೊಂದಿಗೆ ಸೇರಿ ಅವರೂ ಆಟವಾಡಿದರು.

ಮುಖಂಡರೊಂದಿಗೆ ಚರ್ಚೆ:

ಬಳಿಕ ಡಿಸಿ ಕಚೇರಿಗೆ ಭೇಟಿ ನೀಡಿದ ಅವರು ಕೆಲ ಸಮಯದ ವರೆಗೆ ಪಕ್ಷದ ಮುಖಂಡರೊಂದಿಗೆ ತಮಗೆ ಎಲ್ಲೆಲ್ಲಿ ಹೆಚ್ಚಿನ ಮತಗಳು ಬರಬಹುದು, ಮತದಾರರ ಒಲವು ಹೇಗಿದೆ ಎಂದೆಲ್ಲ ಚರ್ಚಿಸಿದರು. ಕೆಲವು ಹಳ್ಳಿಗಳಲ್ಲಿನ ಮುಖಂಡರಿಗೂ ಕರೆ ಮಾಡಿ ವಿಚಾರಿಸಿದರು.

---

ಕೋಟ್:

ನನ್ನ ಗೆಲುವು ಶತಃಸಿದ್ಧವಾಗಿದೆ. ಯಾಕಂದರೆ ಜಿಲ್ಲೆಯ ಎಲ್ಲ ಕಡೆಯಿಂದಲೂ ಕಾಂಗ್ರೆಸ್‌ಗೆ ಒಳ್ಳೆಯ ವರದಿಗಳಿವೆ. ನಮಗೆ ಒಲವಿರುವ ಕಡೆಗಳಲ್ಲೆಲ್ಲ ಭರ್ಜರಿ ಮತದಾನವಾಗಿದೆ. ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತದಾನವಾಗುವುದು ವಾಡಿಕೆ ಇದ್ದರೂ ಅದೆಲ್ಲ ಈ ಬಾರಿ ಸುಳ್ಳಾಗಿದೆ. ದಶಕಗಳ ನಂತರ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಎಲ್ಲ ಲಕ್ಷಣಗಳಿವೆ.

-ಪ್ರೊ.ರಾಜು ಆಲಗೂರ, ಕಾಂಗ್ರೆಸ್ ಅಭ್ಯರ್ಥಿ.

---

ನಾನು 12 ಚುನಾವಣೆ ಎದುರಿಸಿದ್ದು, ಈ ಬಾರಿಯ ಚುನಾವಣೆ ಅತ್ಯಂತ ಸಮಾಧಾನದಿಂದ ಆಗಿದೆ. ಪ್ರತಿಯೊಬ್ಬರೂ ಮೋದಿ ಅವರಿಗೆ ನೆನೆಸಿಕೊಂಡು ವೋಟು ಹಾಕಿದ್ದು, ಈ ಬಾರಿ ನನಗೆ ಗೆಲವು ನಿಶ್ಚಿತ.

-ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ