ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಮೇ 9ರಂದು ಅಧಿಸೂಚನೆ

| Published : May 09 2024, 01:10 AM IST / Updated: May 09 2024, 09:30 AM IST

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಮೇ 9ರಂದು ಅಧಿಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ವೇಳಾಪಟ್ಟಿ ಘೋಷಿಸಿದೆ.

 ಕೊಪ್ಪಳ :  ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ವೇಳಾಪಟ್ಟಿ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಹೇಳಿದರು.

ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಮೇ 9ರಂದು ಅಧಿಸೂಚನೆ ಹೊರಡಿಸಲಾಗುವುದು. ಮೇ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಮೇ 17ಕ್ಕೆ ನಾಮಪತ್ರ ಪರಿಶೀಲಿಸಲಾಗುವುದು. ನಾಮಪತ್ರ ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನವಾಗಿದ್ದು, ಜೂನ್ 3 ರಂದು ಮತದಾನದ ಹಾಗೂ ಜೂ.6ಕ್ಕೆ ಮತಎಣಿಕೆ ನಡೆಯಲಿದೆ ಎಂದರು.

13,405 ಪದವೀಧರ ಮತದಾರರು:ಕೊಪ್ಪಳ ಜಿಲ್ಲೆಯಲ್ಲಿ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ವಿವರ ಇಂತಿದೆ. ಕುಷ್ಟಗಿ ತಾಲೂಕಿನಲ್ಲಿ 1523 ಪುರುಷ ಮತ್ತು 620 ಮಹಿಳೆಯರು ಸೇರಿ 2143 ಪದವೀಧರರ ಮತದಾರರಿದ್ದಾರೆ. ಕಾರಟಗಿ ತಾಲೂಕಿನಲ್ಲಿ 767 ಪುರುಷ ಮತ್ತು 347 ಮಹಿಳೆಯರು ಸೇರಿ 1114 ಪದವೀಧರರು, ಕನಕಗಿರಿ ತಾಲೂಕಿನಲ್ಲಿ 474 ಪುರುಷ ಮತ್ತು 182 ಮಹಿಳೆಯರು ಸೇರಿ 656 ಪದವೀಧರರು, ಗಂಗಾವತಿ ತಾಲೂಕಿನಲ್ಲಿ 1908 ಪುರುಷ ಮತ್ತು 1229 ಮಹಿಳೆಯರು ಸೇರಿ 3137 ಪದವೀಧರರು, ಯಲಬುರ್ಗಾ ತಾಲೂಕಿನಲ್ಲಿ 928 ಪುರುಷ ಮತ್ತು 380 ಮಹಿಳೆಯರು ಸೇರಿ 1308 ಪದವೀಧರರು, ಕುಕನೂರು ತಾಲೂಕಿನಲ್ಲಿ 718 ಪುರುಷ ಮತ್ತು 358 ಮಹಿಳೆಯರು ಸೇರಿ 1076 ಪದವೀಧರರು, ಕೊಪ್ಪಳ ತಾಲೂಕಿನಲ್ಲಿ 2608 ಪುರುಷ ಮತ್ತು 1363 ಮಹಿಳೆಯರು ಸೇರಿ 3971 ಪದವೀಧರರಿದ್ದು, ಕೊಪ್ಪಳ ಜಿಲ್ಲೆಯಲ್ಲಿ 8926 ಪುರುಷ ಹಾಗೂ 4479 ಮಹಿಳೆಯರು ಸೇರಿ ಒಟ್ಟು 13,405 ಪದವೀಧರರ ಮತದಾರರಿದ್ದಾರೆ ಎಂದು ಹೇಳಿದರು.

ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮೇ 6 ರಂದು ಕೊನೆಯ ದಿನಾಂಕವಾಗಿದ್ದು, ಅರ್ಹತಾ ದಿನಾಂಕ 01.11.2023ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020ಕ್ಕಿಂತ ಮುಂಚೆ ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಪದವೀಧರರಾಗಿರುವಂತಹ ಅಥವಾ ಪ್ರಜಾ ಪ್ರಾತಿನಿಧ್ಯಕಾಯ್ದೆ 1950ರ ಪ್ರಕರಣ 27 ಉಪಪ್ರಕರಣ 3(ಎ)ರನ್ವಯ ಭಾರತ ಚುನಾವಣಾ ಆಯೋಗದ ಸಹಮತದೊಂದಿಗೆ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಪದವಿಗೆ ತತ್ಸಮಾನವೆಂದು ನಿರ್ದಿಷ್ಟಪಡಿಸಿದ ವಿದ್ಯಾರ್ಹತೆ ಹೊಂದಿರುವಂತಹ ಹಾಗೂ ದಿನಾಂಕ 01.11.2020ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ 18ರಲ್ಲಿ ಭಾವಚಿತ್ರದೊಂದಿಗೆ ಭರ್ತಿಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರಕಾರ್ಡ್/ ಚುನಾವಣಾ ಗುರುತಿನಚೀಟಿ/ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳಲ್ಲೊಂದು ಸ್ವಯಂಧೃಡೀಕರಿಸಿ ಅಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ಮೇ 6 ರೊಳಗಾಗಿ ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ತಹಸೀಲ್ದಾರ್ ಕಾರ್ಯಾಲಯದಲ್ಲಿ) ಸಲ್ಲಿಸಬಹುದು ಎಂದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ, ಕೊಪ್ಪಳ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.