ಮತದಾನ ಜಾಗೃತಿಗಾಗಿ ಬೃಹತ್ ಕಾಲ್ನಡಿಗೆ ಜಾಥಾ

| Published : Apr 19 2024, 01:13 AM IST

ಸಾರಾಂಶ

ಮೂಡುಬಿದಿರೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ವೆಂಕಟಾಚಲಪತಿ, ಪೋಲಿಸ್ ನಿರೀಕ್ಷಕ ನಿತ್ಯಾನಂದ ಪಂಡಿತ್, ಮೈಟ್ ಕಾಲೇಜು ಪ್ರಾಂಶುಪಾಲ ಪ್ರಶಾಂತ್ ಸಿ.ಎಂ. ಹಸಿರು ನಿಶಾನೆ ಹಾರಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಮೂಡುಬಿದಿರೆ ತಾಲೂಕು ಪಂಚಾಯ್ತಿ, ತಾಲೂಕು ಕಚೇರಿ ಹಾಗೂ ಮೈಟ್ ಎಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಮತದಾನ ಜಾಗೃತಿಯ ಬೃಹತ್ ಕಾಲ್ನಡಿಗೆ ಜಾಥಾ ಗುರುವಾರ ನಡೆಯಿತು.

ಮೂಡುಬಿದಿರೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ವೆಂಕಟಾಚಲಪತಿ, ಪೋಲಿಸ್ ನಿರೀಕ್ಷಕ ನಿತ್ಯಾನಂದ ಪಂಡಿತ್, ಮೈಟ್ ಕಾಲೇಜು ಪ್ರಾಂಶುಪಾಲ ಪ್ರಶಾಂತ್ ಸಿ.ಎಂ. ಹಸಿರು ನಿಶಾನೆ ಹಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ವೆಂಕಟಾಚಲಪತಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಜತೆಗೆ ಉತ್ತಮ ನಾಯಕನನ್ನು ಮೊದಲ ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿ. ಏ.26ರಂದು ಎಲ್ಲರೂ ತಪ್ಪದೆ ಮತ ಹಾಕಿ ಎಂದರು. ಬಳಿಕ ಮತದಾನ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಮೈಟ್ ಕಾಲೇಜು ಪ್ರಾಂಶುಪಾಲ ಪ್ರಶಾಂತ್ ಸಿ.ಎಂ ಮಾತನಾಡಿ, ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡುವ ಮೂಲಕ ಉತ್ತಮ ನಾಯಕನ ಆಯ್ಕೆಯಾಗಲಿ ಎಂದರು.

ಕಾಲ್ನಡಿಗೆ ಜಾಥವು ಮೂಡುಬಿದಿರೆ ತಾಲೂಕು ಪಂಚಾಯ್ತಿ ಆವರಣದಿಂದ ಹೊರಟು ಪುರಸಭೆ ಮುಂಭಾಗದಿಂದ ತೆರಳಿ ಸ್ವರಾಜ್ಯ ಮೈದಾನ, ಆಳ್ವಾಸ್ ಹೆಲ್ತ್ ಸೆಂಟರ್, ನಿಶ್ಮಿತಾ ಟವರ್ ಮುಂಭಾಗದಿಂದ ಮೂಡುಬಿದಿರೆ ಮುಖ್ಯ ಪೇಟೆಗೆ ತಲುಪಿ ಹನುಮಾನ್ ದೇವಸ್ಥಾನ, ಹಳೆ ಪೋಲಿಸ್ ಠಾಣೆಯಿಂದ ತಿರುಗಿ ಅಮರಶ್ರೀ ಮೂಲಕ ತೆರಳಿ ವಾಪಸ್ ಮೂಡುಬಿದಿರೆ ತಾಲೂಕು ಪಂಚಾಯ್ತಿಯಲ್ಲಿ ಸಮಾಪನಗೊಂಡಿತು.

ಜಾಥಾದುದ್ದಕ್ಕೂ ಪಂಚಾಯ್ತಿ ಸಿಬ್ಬಂದಿಗಳಾದ ರಾಕೇಶ್ ಹಾಗೂ ಪ್ರಶಾಂತ್ ಅವರು ಮತದಾನದ ಮಾಹಿತಿಯನ್ನು ಸ್ವಚ್ಛತಾ ವಾಹಿನಿಯ ಮೂಲಕ ನೀಡಿದರು. ಸಹಾಯಕ ನಿರ್ದೇಶಕ ಸಾಯಿಶ ಚೌಟ ನಿರೂಪಿಸಿದರು. ವಿದ್ಯಾರ್ಥಿಗಳನ್ನು ಸ್ವೀಪ್ -2024 ಅಕ್ಷರಗಳಂತೆ ನಿಲ್ಲಿಸಿ ಮತದಾನ ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭ ಸಹಿ ಅಭಿಯಾನದಡಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಸಹಿಯನ್ನು ಪಡೆಯಲಾಯಿತು.