ಸಾರಾಂಶ
ತಮ್ಮ ೭೬ನೇ ಜನ್ಮದಿನದ ಹಿನ್ನೆಲೆಯಲ್ಲಿ ಆನಂದ್ ಸಿ. ಕುಂದರ್, ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಸುಮಾರು ೬ ಲಕ್ಷ ರು.ಗೂ ಅಧಿಕ ಮೌಲ್ಯದ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೋಟ
ಅನಾಥಾಶ್ರಮಗಳ ನಿರ್ವಹಣೆಯೇ ಕ್ಲಿಷ್ಟಕರ, ಆದ್ದರಿಂದ ಅದರ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಕ್ರೋಡಿಕರಣ ಅಗತ್ಯ. ಈ ದಿಸೆಯಲ್ಲಿ ಗೀತಾನಂದ ಫೌಂಡೇಶನ್ ಮೂಲಕ ನೆರವು ಯೋಜನೆ ಸಹಕಾರಿಯಾಗಲಿ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ನುಡಿದರು.ತಮ್ಮ ೭೬ನೇ ಜನ್ಮದಿನದ ಹಿನ್ನೆಲೆಯಲ್ಲಿ ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಸುಮಾರು ೬ ಲಕ್ಷ ರು.ಗೂ ಅಧಿಕ ಮೌಲ್ಯದ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.
ಕಳೆದ ವರ್ಷ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಒಂದಿಷ್ಟು ಆಶ್ರಮಗಳಿಗೆ ನೆರವು ನೀಡಲಾಗಿದ್ದು, ಅದೇ ರೀತಿ ಈ ವರ್ಷವು ಹಮ್ಮಿಕೊಳ್ಳಲಾಗಿದೆ. ಅನಾಥಾಶ್ರಮಗಳು ನೆರಳು ನೀಡುವ ಧಾಮಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕಾರ್ಯ ನಿತ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.ಇದೇ ವೇಳೆ ಒಟ್ಟು ೧೩ ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಚೆಕ್ ಮೂಲಕ ಧನಸಹಾಯ ಹಸ್ತಾಂತರಿಸಿದರು.
ಈ ವೇಳೆ ಆಶ್ರಮಗಳ ಮುಖ್ಯಸ್ಥರು, ಜನತಾ ಸಂಸ್ಥೆಯ ಸಿಬ್ಬಂದಿ, ಗೀತಾನಂದ ಟ್ರಸ್ಟ್ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್, ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿ ವಂದಿಸಿದರು.