ಐಎಎಸ್ ಮುಗಿಸಿ ಸಮಾಜ ಸೇವೆಯ ಕನಸು: ಅಂಕಿತಾ ಕೊಣ್ಣೂರ

| Published : May 10 2024, 01:40 AM IST

ಸಾರಾಂಶ

ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ನಿವಾಸಿ, ಕೃಷಿ ಕುಟುಂಬದಲ್ಲಿ ಜನಸಿರುವ ಅಂಕಿತಾ ಕೊಣ್ಣೂರ 2023-24ನೇ ಸಾಲಿಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.

ವಿಶ್ವನಾಥ ಮುನವಳ್ಳಿ ಕನ್ನಡ ಪ್ರಭವಾರ್ತೆ ಮುಧೋಳ

ಸಾಧನೆ ಎಂಬುದು ಯಾರ ಸ್ವತ್ತೂ ಅಲ್ಲ, ಸಾಧನೆ ಮಾಡಲು ಹೊರಟ ವ್ಯಕ್ತಿಗೆ ಎಷ್ಟೇ ಅಡತಡೆಗಳು ಬಂದರೂ ಅವುಗಳನ್ನು ಎದುರಿಸಿ ಸಾಧಿಸುವ ಛಲ ಇರಬೇಕು, ಇಂತಹ ಸಾಧನೆಯ ಹೆಜ್ಜೆ ಹಾಕಿರುವ ತಾಲೂಕಿನ ವಜ್ಜರಮಟ್ಟಿ ಗ್ರಾಮದ ನಿವಾಸಿ, ಕೃಷಿ ಕುಟುಂಬದಲ್ಲಿ ಜನಸಿರುವ ಅಂಕಿತಾ ಕೊಣ್ಣೂರ 2023-24ನೇ ಸಾಲಿಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.

ಇವಳ ತಂದೆ ಬಸಪ್ಪ ಕೃಷಿಕನಾಗಿದ್ದು 5 ಎಕರೆ ಜಮೀನು ಹೊಂದಿದ್ದಾರೆ. ತಾಯಿ ಗೀತಾ ಮನೆ ಕೆಲಸ ಮಾಡಿಕೊಂಡು ಕೃಷಿ ಕೆಲಸದಲ್ಲಿ ತಂದೆಗೆ ಸಹಾಯ ಮಾಡುತ್ತಾರೆ. ದಂಪತಿ ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೂ ಮಕ್ಕಳ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಅಂಕಿತಾ ಪ್ರಥಮ ಪುತ್ರಿ, ಇಬ್ಬರು ಸಹೋದರರು ಇದ್ದು, ಪ್ರಾಥಮಿಕ ಶಿಕ್ಷಣ ಕಲಿಯುತ್ತಿದ್ದಾರೆ.ಅಂಕಿತಾ ಮುಂಚಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪ್ರಾಥಮಿಕ ಹಂತದಿಂದಲೂ ಶಾಲೆಗೆ ಪ್ರಥಮ ಸ್ಥಾನ ಪಡೆಯುತ್ತ ಬಂದಿದ್ದಳು. ವಯಸ್ಸಿನಲ್ಲಿ ಚಿಕ್ಕವಳಾದರೂ ಅಪಾರ ಅಕ್ಷರ ಜ್ಞಾನ ಮತ್ತು ಸಾಮಾನ್ಯ ಜ್ಞಾನ ಹೊಂದಿದ್ದಾಳೆ. ಎಲ್ಲರ ಜೊತೆ ಬೆರೆಯುವ ಗುಣ, ಮಾತನಾಡುವ ಶೈಲಿಯಿಂದ ಎಲ್ಲರಿಗೂ ಅಚ್ಚುಮೆಚ್ಚು.

ಪ್ರತಿದಿನ ದಿನದ ಕೆಲಸ ಮುಗಿಸಿ, ಶಾಲಾ ತರಗತಿಗಳಿಗೆ ಹಾಜರಾಗಿ ಬಳಿಕ ಸಮಯ ವ್ಯರ್ಥ ಮಾಡದೆ ಓದಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಳು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ಅಂಕಿತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಬೇಕೆಂದು ಕನಸು ಕಂಡಿದ್ದ ಅಂಕಿತಾ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡಿದ್ದಳು.ತರಗತಿಯಲ್ಲಿ ಶಿಕ್ಷಕರು ಹೇಳಿದ ಪಾಠ, ಓದಿರುವ ವಿಷಯ ನೆನಪಿನಲ್ಲಿ ಇಟ್ಟುಕೊಂಡು ಅದನ್ನು ಮತ್ತೆ ಮತ್ತೆ ಬರೆಯುತ್ತಿದ್ದಳು. ಯಾವುದೇ ವಿಷಯ ಕಠಿಣ ಅನಿಸಿದರೆ ಆ ವಿಷಯದ ಶಿಕ್ಷಕರನ್ನು ಭೇಟಿಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಜೀವನದಲ್ಲಿ ಸಾಧನೆ ಮಾಡಬೇಕೆಂಬ ಗುರಿ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದೆ.

ತಾಯಿ-ತಂದೆ, ಬಂದು-ಬಳಗ, ಶಿಕ್ಷಕರು ಮತ್ತು ಗ್ರಾಮದ ಪ್ರಮುಖರು ಪ್ರೊತ್ಸಾಹ ನನ್ನ ಸಾಧನೆ ಸಹಕಾರಿಯಾಗಿದೆ.

ವಿಜ್ಞಾನ ವಿಷಯದಲ್ಲಿ ಪಿಯುಸಿ, ಪದವಿ ಶಿಕ್ಷಣ ಪೂರೈಸಿ, ಐಎಎಸ್ ಉತ್ತೀರ್ಣಳಾಗಿ ಅಧಿಕಾರಿಯಾಗಿ ಸಮಾಜ ಸೇವೆ ಮಾಡುವ ಕನಸು ಹೊಂದಿದ್ದೇನೆ.

-ಅಂಕಿತಾ ಕೊಣ್ಣೂರ ರಾಜ್ಯಕ್ಕೆ ಟಾಪ್‌ ಬಂದ ವಿದ್ಯಾರ್ಥಿನಿ