ಸಾರಾಂಶ
ಶಿಥಿಲಾವಸ್ಥೆಯಲ್ಲಿದ್ದ ಹಳೆಯ ದೇವಾಲಯಗಳನ್ನು ಕಳೆದ ಐದು ವರ್ಷಗಳ ಹಿಂದೆಯೇ ಕೆಡವಲಾಗಿತ್ತು. ಮಾಜಿ ಶಾಸಕ ಕೆ. ಮಹದೇವ್ ಈ ದೇವಾಲಯದ ಮರು ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿದ್ದರು.
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕಿನ ಕೂರಗಲ್ಲು ಗ್ರಾಮ ದೇವತೆ ಶ್ರೀ ದೊಡ್ಡಮ್ಮತಾಯಿ ಹಾಗೂ ಚಿಕ್ಕಮ್ಮತಾಯಿ ನೂತನ ದೇವಸ್ಥಾನ ಶುಕ್ರವಾರ ಉದ್ಘಾಟನೆಗೊಳ್ಳಲಿದೆ.ಈ ಶಕ್ತಿ ದೇವತೆಯು ಬೆಟ್ಟದಪುರ ಹಾಗೂ ಕೂರಗಲ್ಲು ಗ್ರಾಮಗಳ ಗಡಿಯಲ್ಲಿ ನೆಲೆಸಿದ್ದು, ಎರಡು ಗ್ರಾಮಗಳ ಭಕ್ತಾದಿಗಳನ್ನು ಹೊಂದಿದೆ.
ಶಿಥಿಲಾವಸ್ಥೆಯಲ್ಲಿದ್ದ ಹಳೆಯ ದೇವಾಲಯಗಳನ್ನು ಕಳೆದ ಐದು ವರ್ಷಗಳ ಹಿಂದೆಯೇ ಕೆಡವಲಾಗಿತ್ತು. ಮಾಜಿ ಶಾಸಕ ಕೆ. ಮಹದೇವ್ ಈ ದೇವಾಲಯದ ಮರು ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿದ್ದರು. ಇದರೊಂದಿಗೆ ಗ್ರಾಮಸ್ಥರು ದೊಡ್ಡಮ್ಮತಾಯಿ ದೇವಾಲಯದ ಮರು ನಿರ್ಮಾಣಕ್ಕೆ ದೇಣಿಗೆಯನ್ನು ಸಂಗ್ರಹಿಸಿದ್ದು, ನೂತನ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ.ದೇವಾಲಯಗಳ ಎಲ್ಲ ದಿಕ್ಕುಗಳಲ್ಲಿಯೂ ಶಕ್ತಿ ದೇವತೆಯ ವಿವಿಧ ಅವತಾರಗಳ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ವಿವಿಧ ಪುಷ್ಪಗಳ ಚಿತ್ತಾರದಿಂದ ಹಾಗೂ ಆಕರ್ಷಕ ಬಣ್ಣಗಳಿಂದ ಅಲಂಕರಿಸಿರುವುದು ವಿಶೇಷವಾಗಿದೆ.
ಶುಕ್ರವಾರ ಅಕ್ಷಯ ತೃತೀಯ ಶುಭ ದಿವಸವಾಗಿದ್ದು, ಕಲಶ ಸ್ಥಾಪನೆ, ಗಣಪತಿ ಪೂಜೆ, ಗಣ ಹೋಮ ಚಂಡಿ ಹೋಮ, ವಿಗ್ರಹಗಳಿಗೆ ನೇತ್ರೋನ್ಮೀಲನ, ಅಂಕುರಾರ್ಪಣೆ, ಕದಳಿ ಛೇದನ, ಮಹಾಮಂಗಳಾರತಿ, ಅನ್ನದಾಸೋಹ ಸೇರಿದಂತೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಡಲಾಗಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಾಲಯ ಸಮಿತಿಯ ಮುಖ್ಯಸ್ಥ ಚಂದ್ರೆಗೌಡ, ತಿಳಿಸಿದ್ದಾರೆ.ಸಮಿತಿಯ ಸದಸ್ಯರಾದ ಜವರೇಗೌಡ, ಅಣ್ಣಯ್ಯಪ್ಪ, ಗಿರೀಶ್, ನಟರಾಜ್ ಇದ್ದರು.