ಸಾರಾಂಶ
ಹಿರೇಕೆರೂರು: ಆರೂವರೆ ದಶಕ ದೇಶವನ್ನಾಳಿದ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಕುಟುಕಿದರು.ಪಟ್ಟಣದಲ್ಲಿ ನಡೆದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ನಡೆದ ಬೃಹತ್ ರೋಡ್ ಶೋ ಮೆರವಣಿಗೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಸ್ರೋ, ಅಣೆಕಟ್ಟೆ, ಭಾರತೀಯ ಜೀವ ವಿಮಾ ನಿಗಮ, ಯುಪಿಎಸ್ ಸಿ, ಬ್ಯಾಂಕುಗಳ ರಾಷ್ಟ್ರೀಕರಣ ಸೇರಿದಂತೆ ಅನೇಕ ಸೇವಾ ಕಾರ್ಯಗಳನ್ನು ಮಾಡಿರುವ ಕಾಂಗ್ರೆಸ್ ವಿರೋಧಿಸುವ ಬಿಜೆಪಿಗರು ಮಾಡಿರುವ ಸಾಧನೆಯಾದ್ರೂ ಏನು ಎಂದು ಪ್ರಶ್ನಿಸಿದರು.ಬಡವರಿಗೆ ಆಸರೆಯಾಗಿರುವ ಗ್ಯಾರಂಟಿ ಯೋಜನೆಯನ್ನು ವಿರೋಧಿಸುವ ಬಿಜೆಪಿಗೆ ದಯವಿಟ್ಟು ಮತ ನೀಡಬೇಡಿ. ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿದ್ದವರು ಒಮ್ಮೆಯೂ ತಮ್ಮ ದಮ್ಮು ಮತ್ತು ತಾಕತ್ತನ್ನು ಪ್ರದರ್ಶಿಸಲಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಶಾಸಕ ಯು.ಬಿ. ಬಣಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.