ಕೆರೆ ಅಭಿವೃದ್ಧಿಗೆ ಜೀವಜಲ ಕಾರ್ಯಪಡೆ ಚಾಲನೆ

| Published : May 10 2024, 11:48 PM IST

ಸಾರಾಂಶ

ಕೆರೆ ಅಭಿವೃದ್ಧಿಗೆ ಜೀವಜಲ ಕಾರ್ಯಪಡೆ ಅಧ್ಯಕ್ಷ‌ ಶ್ರೀನಿವಾಸ‌ ಹೆಬ್ಬಾರ್ ಅವರ ಬಳಿ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ‌ ಹೆಗಡೆ ಮನವಿ ಮಾಡಿಕೊಂಡಿದ್ದರು. ಮನವಿ ಮಾಡಿಕೊಂಡ ೨೪ ಗಂಟೆಯೊಳಗೆ ಕಾರ್ಯಪಡೆಯ‌ ಬಳಗ ಕೆರೆಯ ಹೂಳೆತ್ತಲು ಹಿಟಾಚಿ ಜತೆ ಆಗಮಿಸಿ ಚಾಲನೆ ನೀಡಿದೆ.

ಶಿರಸಿ: ತಾಲೂಕಿನ ನೆಗ್ಗು ಕೆಳಗಿನ ಕೇರಿಯ ಏಕಮೇವ ಕೆರೆಯ ಅಭಿವೃದ್ಧಿಗೆ ಶಿರಸಿ ಜೀವಜಲ‌ ಕಾರ್ಯಪಡೆ ಟೊಂಕ ಕಟ್ಟಿಕೊಂಡಿದೆ.

ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಗ್ಗು‌ ಕೆಳಗಿನ ಕೇರಿ, ಕೊಳಗಿ,‌ ಅಡ್ಲಮನೆ ಭಾಗಗಳಿಗೆ‌ ಜಲಮೂಲವಾಗಿರುವ ಸುಮಾರು ೩ ಗುಂಟೆ ಕಾನಕೆರೆ ಅಭಿವೃದ್ಧಿಗೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಗ್ರಾಮಸ್ಥರ‌ ಮನವಿಗೆ ಸ್ಪಂದಿಸಿ ಶುಕ್ರವಾರದಿಂದ ಕೆಲಸ ಆರಂಭಿಸಿದ್ದಾರೆ.

ಮಡಿವಾಳರ‌ ಕುಟುಂಬಗಳೇ ಹೆಚ್ಚಿರುವ ನೆಗ್ಗು ಕೆಳಗಿನ ಕೇರಿಗೆ ಇದೇ ಪ್ರಥಮ ಬಾರಿಗೆ ಕುಡಿಯುವ ನೀರಿ‌ನ ಕೊರತೆ ಉಂಟಾಗಿದೆ. ಈ ಕೊರತೆ ನಿವಾರಣೆಗೆ ಪಕ್ಕದಲ್ಲೇ ಇರುವ ಕೆರೆಯ ಅಭಿವೃದ್ಧಿ ತಕ್ಷಣ ಆಗಬೇಕಿತ್ತು. ಇದನ್ನು ಜೀವಜಲ ಕಾರ್ಯಪಡೆ ಅಧ್ಯಕ್ಷ‌ ಶ್ರೀನಿವಾಸ‌ ಹೆಬ್ಬಾರ್ ಅವರ ಬಳಿ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ‌ ಹೆಗಡೆ ಮನವಿ ಮಾಡಿಕೊಂಡಿದ್ದರು. ಮನವಿ ಮಾಡಿಕೊಂಡ ೨೪ ಗಂಟೆಯೊಳಗೆ ಕಾರ್ಯಪಡೆಯ‌ ಬಳಗ ಕೆರೆಯ ಹೂಳೆತ್ತಲು ಹಿಟಾಚಿ ಜತೆ ಆಗಮಿಸಿ ಚಾಲನೆ ನೀಡಿದೆ.

ಶುಕ್ರವಾರ ಕೆರೆ ಅಭಿವೃದ್ಧಿಗೆ ಜಾನ್ಮನೆ ವಲಯಾರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ್, ನೈಸರ್ಗಿಕ ಕೆರೆಯನ್ನು ಪುನರುಜ್ಜೀವನಗೊಳಿಸಿದರೆ ಕೇವಲ ಜನರಿಗೆ ಮಾತ್ರ ಅಲ್ಲ, ಕಾಡುಮೃಗಗಳಿಗೂ ಅನುಕೂಲ ಆಗಲಿದೆ. ಗಮನ ಹರಿಸದೇ ಎಷ್ಟೋ ಕೆರೆಗಳು‌ ಮುಚ್ಚಿಹೋಗಿದೆ. ಅದನ್ನು ಉಳಿಸುವ ಕಾರ್ಯ ದೊಡ್ಡದು ಎಂದರು.

ಈ ವೇಳೆ ಗ್ರಾಪಂ ಸದಸ್ಯರಾದ ಕೃಷ್ಣ ಸು. ಗೌಡ, ಚಂದ್ರಕಾಂತ ಹೆಗಡೆ‌ ನೇರ್ಲಹದ್ದ,‌ ಸುರೇಶ ಗ. ಹೆಗಡೆ ಬೊಪ್ಪನಳ್ಳಿ, ಗ್ರಾಮ ಪ್ರಮುಖರಾದ ಮಹಾಬಲೇಶ್ವರ ಭಟ್ಟ ಅಡ್ಲೆಮನೆ, ಭಾಸ್ಕರ ಮಡಿವಾಳ, ರಾಮಚಂದ್ರ‌ ಮಡಿವಾಳ, ಮಂಜುನಾಥ‌ ಮಡಿವಾಳ, ವೆಂಕಟೇಶ‌ ಮಡಿವಾಳ, ಕಾರ್ತಿಕ‌ ಮಡಿವಾಳ, ದತ್ತಾತ್ರಯ ಮಡಿವಾಳ, ಕೆರಿಯಾ ಮಡಿವಾಳ, ಮಂಜುನಾಥ ಮಡಿವಾಳ, ಪರಮೇಶ್ವರ ಮಡಿವಾಳ, ಶ್ರೀಧರ ಭಟ್ಟ ಕೊಳಗಿಬೀಸ್ ಇತರರು ಇದ್ದರು.