ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ:ಬಿವಿವಿ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾ, ಅಕ್ಕನ ಬಳಗ, ಶಿವಾನುಭವ ಸಮಿತಿ, ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮೇ 10 ರಂದು ವಿಶ್ವಗುರು ಬಸವ ಜಯಂತಿ ಕಾರ್ಯಕ್ರಮವನ್ನು ಬಾಗಲಕೋಟೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬಿವಿವಿ ಸಂಘದ ಬೀಳೂರು ಗುರುಬಸವ ಮಂದಿರದಿಂದ ಬೃಹತ್ ಮರವಣಿಗೆ ಆರಂಭವಾಗಿ ಟೀಕಿನಮಠ, ಅಡತ್ ಬಜಾರ್, ವಲ್ಲಭಬಾಯಿ ಚೌಕ್, ಪೊಲೀಸ್ ಚೌಕ್, ಎಂ.ಜಿ.ರಸ್ತೆ, ಬಸವೇಶ್ವರ ವೃತ್ತ, ಕಾಲೇಜು ರಸ್ತೆ ಮೂಲಕ ಚರಂತಿಮಠ ಶಿವಾನುಭವ ಮಂಟಪ ತಲುಪಿದ್ದು, ಬಳಿಕ ಮರವಣಿಗೆ ಮುಕ್ತಾಯವಾಗಲಿದೆ ಎಂದರು.ಮರವಣಿಗೆಯಲ್ಲಿ ಟೀಕಿನಮಠದ ಮಲ್ಲಿಕಾರ್ಜುನ ಶ್ರೀಗಳು, ಬಿಲ್ಕೆರೂರ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚರಂತಿಮಠದ ಪ್ರಭು ಸ್ವಾಮೀಜಿ ಸೇರಿದಂತೆ ಅನೇಕ ಮಠಾದೀಶರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಬಸವ ಜಯಂತಿಯಂದು ಅದ್ಧೂರಿ ಮೆರವಣಿಗೆ ನಡೆಯಲಿದ್ದು, ಎತ್ತಿನ ಬಂಡಿಗಳು, ವಾದ್ಯ ವೃಂಧ ಭಾಗವಹಿಸಲಿವೆ. ಎಲ್ಲ ಸಮಾಜದ ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಬಸವರಾಜ ಮುಕ್ಕುಪ್ಪಿ, ಚಂದ್ರಶೇಖರ ಶೆಟ್ಟರ ಇತರರು ಇದ್ದರು.